ಉಚ್ಚಿಲ ಬಬ್ಬು ಸ್ವಾಮಿ ದೈವಸ್ಥಾನದ ಬಳಿಯ ಮನೆಗೆ ಕಳ್ಳರ ಲಗ್ಗೆ, ನಗ, ನಗದು ಕಳವು
ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಬಬ್ಬು ಸ್ವಾಮಿ ದೈವಸ್ಥಾನದ ಪಕ್ಕದ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಮನೆಯಲ್ಲಿದ್ದು 12 ಸಾವಿರ ನಗದು ಮತ್ತು ಎರಡು ಗ್ರಾಂ ಚಿನ್ನದ ಆಭರಣ ಕದ್ದೊಯ್ದ ಘಟನೆ ನಡೆದಿದೆ.
ಉಚ್ಚಿಲದ ನಿವಾಸಿ ಅಬ್ದುಲ್ ಮಲೀಕ್ನವರ ಬೈತುಲ್ ಅಲ್ ಸಫಾ ಮನೆಗೆ ಹಿಂಬಾಗಿಲ ಚಿಲಕ ಮುರಿದು ಒಳಪ್ರವೇಶಿಸಿದ ಕಳ್ಳರು, ತಳ ಮಹಡಿ ಮತ್ತು ಮೇಲ್ಮಹಡಿಯ ಎರಡೂ ಕಡೆಗಳ ಬೀಗ ಮುರಿದು ಒಳ ನುಗ್ಗಿದ್ದಾರೆ. ಬೀರುವಿನಲ್ಲಿದ್ದ 12 ಸಾವಿರ ರುಪಾಯಿ ನಗದು ಹಾಗೂ 2ಗ್ರಾಂ ಚಿನ್ನದ ಸರ ಕಳ್ಳರ ಪಾಲಾಗಿದೆ. ಅದೇ ಬೀರುವಿನಲ್ಲಿದ್ದ ರೋಲ್ಡ್ ಗೋಲ್ಡ್ ಆಭರಣಗಳನ್ನು ಇಳಿಸಿ ಹೋಗಿದ್ದಾರೆ ಕದೀಮರು.
ಮಲೀಕ್ನವರ ಕುಟುಂಬ ಪಕ್ಕದ ಮನೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ತೆರಳಿ ಅಲ್ಲಿಂದ ಒಂದೆರಡು ಗಂಟೆಗಳಲ್ಲೇ ವಾಪಾಸ್ಸಾಗಿದ್ದಾರೆ. ಅಷ್ಟರಲ್ಲೆ ಕಳ್ಳರು ಕೈ ಚಳಕವನ್ನು ತೋರಿಸಿದ್ದಾರೆ. ಮನೆಮಂದಿಯ ಚಲನವಲನಗಳನ್ನು ಗಮನಿಸುತ್ತಿರುವ ಸ್ಥಳೀಯ ವ್ಯಕ್ತಿಗಳು ಇದರಲ್ಲಿ ಭಾಗಿಯಾಗುವ ಸಾಧ್ಯತೆ ಇದ್ದು ಪೊಲೀಸರು ಸ್ಥಳೀಯರ ಮೇಲೆ ಕಣ್ಣಿರಿಸಿದ್ದಾರೆ. ಪಡುಬಿದ್ರಿ ಪೋಲಿಸ್ ಸಹಿತ ಬೆರಳಚ್ಚು ತಜ್ಞರು ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.