ಉಪ್ಪಿನಂಗಡಿ: ಬಸ್ ಹರಿದು ತಾಯಿ, ಮಗು ಸಾವು
ಉಪ್ಪಿನಂಗಡಿ: ಅತೀ ವೇಗದಿಂದ ಬಸ್ ನಿಲ್ದಾಣದೊಳಗೆ ಬಂದ ಕೆಎಸ್ಸಾರ್ಟಿಸಿ ಬಸ್ನಡಿಗೆ ಸಿಲುಕಿ ತಾಯಿ ಹಾಗೂ ಆಕೆಯ ಒಂದು ವರ್ಷದ ಪುತ್ರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ನಡೆದಿದೆ.ಮೂಲತಃ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಸಿದ್ದೀಕ್ ಎಂಬವರ ಪತ್ನಿ ಶಾಹಿದಾ (25) ಹಾಗೂ ಆಕೆಯ ಒಂದು ವರ್ಷದ ಪುತ್ರ ಶಾಹೀಲ್ ಮೃತಪಟ್ಟ ದುರ್ದೈವಿಗಳು. ಗೇರುಕಟ್ಟೆಯ ತಾಯಿ ಮನೆಗೆ ಬಂದಿದ್ದ ಶಾಹಿದಾ ಮಂಗಳವಾರ ಬೆಳಗ್ಗೆ ಪುತ್ತೂರಿಗೆ ವೈದ್ಯರ ಬಳಿ ತನ್ನ ಮಗನೊಂದಿಗೆ ತೆರಳುತ್ತಿದ್ದರು. ಈ ಸಂದರ್ಭ ಬಸ್ ನಿಲ್ದಾಣಕ್ಕೆ ತಿರುಗುವಲ್ಲೇ ಇರುವ ನಂದಿನಿ ಹಾಲಿನ ಬೂತಿನ ಎದುರಿನಿಂದ ಮತ್ತೊಂದು ಕಡೆಗೆ ಶಾಹಿದಾ ಮಗುವಿನೊಂದಿಗೆ ದಾಟಿದ್ದು, ಈ ಸಂದರ್ಭ ಯಮದೂತನಂತೆ ಅತಿ ವೇಗದಿಂದ ಬಸ್ ನಿಲ್ದಾಣದೊಳಗೆ ಬಂದ ಬಸ್ ತಾಯಿ ಮಗುವನ್ನು ಆಹುತಿ ಪಡೆದಿದೆ. ಇವರಿಬ್ಬರ ತಲೆಯ ಮೇಲೆ ಬಸ್ ಹರಿದಿದ್ದು, ಇದರಿಂದ ತಾಯಿ- ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.