ಕಾಪುವಿನಲ್ಲಿ ಮೋರಿಗೆ ಢಿಕ್ಕಿಯಾದ ಕಾರು: ಒರ್ವನ ಸ್ಥಿತಿ ಗಂಭೀರ
ಕಾಪುವಿನ ಕೊಪ್ಪಲಂಗಡಿಯಲ್ಲಿ ಕಳೆದ ತಡರಾತ್ರಿ ನಡೆದ ಕಾರು ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರಿಗೂ ಗಾಯಗಳಾಗಿದ್ದು ಒರ್ವನ ಸ್ಥಿತಿ ಗಂಭೀರ ವಾಗಿದೆ ಎನ್ನಲಾಗಿದೆ.
ಬೆಂಗಳೂರು ನೋಂದಾಣಿ ಸಂಖ್ಯೆಯ ಮಾರುತಿ ಕಾರಿನಲ್ಲಿ ಉಡುಪಿ ಮೂಲದವರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದು, ಕೊಪ್ಪಲಂಗಡಿಯಲ್ಲಿ ಕಾರು ಮೋರಿಯೊಂದರ ತಡೆಗೋಡೆಗೆ ಡಿಕ್ಕಿಯಾಗಿ ಮೋರಿಗೆ ಬಿದ್ದ ಕಾರು ನಜ್ಜುಗುಜ್ಜಾಗಿದೆ. ಕಾರಿನ ತುಂಬೆಲ್ಲಾ ರಕ್ತ ಚೆಲ್ಲಿದ್ದು ಅಪಘಾತದ ತೀವ್ರತೆಯನ್ನು ಸಾರಿ ಹೇಳುತ್ತಿದೆ. ಕಾರಿನಲ್ಲಿ ಹೂವಿನ ಬುಕ್ಕೆಗಳಿದ್ದು ಚಲ್ಲಾಪಿಲ್ಲಿಯಾಗಿದೆ.
ಹೂವಿನ ಬುಕ್ಕೆಗಳನ್ನು ಗಮನಿಸುವಾಗ ಪಾರ್ಟಿ ಮುಗಿಸಿ ಬರುತ್ತಿದ್ದರೊ ಇಲ್ಲ ಸೋಮವಾರದ ಕಾರ್ಯಕ್ರಮದ ಸಿದ್ದತೆಯೋ ತಿಳಿದಿಲ್ಲ. ಗಾಯಾಳುಗಳು ಉಡುಪಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಒರ್ವನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದ್ದರೂ, ಪೊಲೀಸರಿಗೆ ಆಸ್ಪತ್ರೆಯಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದಿದ್ದಾರೆ. ಈ ಅಪಘಾತ ದೃಶ್ಯ ಗಮನಿಸುವಾಗ ಚಾಲಕನ ಅಜಾಗರುಕತೆ ಹಾಗೂ ಅತೀ ವೇಗದ ಚಾಲನೆ ಕಾರಣವಾಗಿರಬಹುದೆನ್ನುತ್ತಾರೆ ಘಟನಾ ಸ್ಥಳದಲ್ಲಿ ಸೇರಿದ ಮಂದಿ.