ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರೆ ಶಕ್ತಿ, ಬೂತ್ ಅಧ್ಯಕ್ಷನೇ ಆತ್ಮ : ನಳಿನ್ ಕುಮಾರ್ ಕಟೀಲ್ ಹೇಳಿಕೆ
ಬಂಟ್ವಾಳ: ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರೆ ಶಕ್ತಿ. ಬೂತ್ ಅಧ್ಯಕ್ಷನೇ ಆತ್ಮ. ಬೂತ್ ಅಧ್ಯಕ್ಷರಿಗೆ ಶಕ್ತಿ ತುಂಬಿ, ಗೌರವಿಸುವ ಉದ್ದೇಶದಿಂದ ಪ್ರತೀ ಬೂತ್ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಸುವ ಕಾರ್ಯಕ್ರಮವನ್ನು ಪಕ್ಷದ ವತಿಯಿಂದ ನಡೆಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ 71ನೇ ಜನ್ಮದಿನಾಚರಣೆಯ ಅಂಗವಾಗಿ ಬಿಜೆಪಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ಪುದು ಶಕ್ತಿ ಕೇಂದ್ರದ ವತಿಯಿಂದ ಮೇರಮಜಲು ಗ್ರಾಮದ ಪಕ್ಕಳಪಾದೆ ಸರಸ್ವತಿ ಮಂದಿರದ ಬಳಿ ನಡೆದ ಸೇವೆ ಮತ್ತು ಸಮರ್ಪಣೆ ಕಾರ್ಯಕ್ರಮ ಹಾಗೂ ಬೂತ್ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಿಜೆಪಿ ಮತಗಟ್ಟೆಯಲ್ಲಿ ಶಕ್ತಿ ಪಡೆಯುತ್ತಿದೆ. ಬಿಜೆಪಿ ಪಕ್ಷ ಬೆಳೆದದ್ದು ಮತಗಟ್ಟೆಯ ಅಧ್ಯಕ್ಷನಿಂದ, ಆತ ಪಕ್ಷದ ಶಕ್ತಿ ಇದ್ದಂತೆ. ಆತನೇ ಬೂತ್ಗೆ ಸುಪ್ರಿಂ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಮಾತನಾಡಿ ಮಂಗಳೂರು ಮಂಡಲದಲ್ಲಿ ಯಶಸ್ವಿಯಾಗಿ ಸಂಘಟನಾ ಕಾರ್ಯ ನಡೆಯುತ್ತಿದ್ದು ಇದೇ ರೀತಿ ಮುಂದುವರಿದ್ದಲ್ಲಿ ಮುಂಬರುವ ಎಲ್ಲಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.
ಮೈಸೂರು ಎಲೆಕ್ಟ್ರಿಕಲ್ ಮತ್ತು ಇಂಡಸ್ಟ್ರೀಸ್ನ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ಮಂಗಳೂರು ಮಂಡಲದ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಅಲೆಮಾರಿ ಅರೆ ಅಲೆಮಾರಿ ನಿಗಮ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಚಂದ್ರಹಾಸ್ ಉಲ್ಲಾಳ್, ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಪುದು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಸುವರ್ಣ, ಕಾರ್ಯದರ್ಶಿ ಸತೀಶ್ ನಾಯ್ಗ ಮೇರಮಜಲು ಪಂಚಾಯತಿ ಅಧ್ಯಕ್ಷೆ ಜಯಶ್ರಿ ಕರ್ಕೆರಾ ಬೂತ್ ಅಧ್ಯಕ್ಷ ಮೋಹನದಾಸ್ ಬಡ್ಡೂರು, ದಿನೇಶ್ ಶೆಟ್ಟಿ ಕೊಟ್ಟಿಂಜ ಉಪಸ್ಥಿತರಿದ್ದರು.
ಸೇವಾ ಸಮರ್ಪಣ ಕಾರ್ಯಕ್ರಮದಂಗವಾಗಿ ಮೇರಮಜಲು ಮಾತಾ ಲಕ್ಷಣಿ ಅಮ್ಮ ವೃದ್ದಾಶ್ರಮಕ್ಕೆ ಅಕ್ಕಿ ಹಾಗೂ ಹಣ್ಣುಹಂಪುಗಳನ್ನು ನೀಡಲಾಯಿತು. ಬೂತ್ ಸಂಖ್ಯೆ 82ರ ಅಧ್ಯಕ್ಷ ಹರೀಶ್ ಪಾದೆಮಾರ್ ಅವರ ಮನೆಗೆ ನಳಿನ್ ಕುಮಾರ್ ಕಟೀಲು ಭೇಟಿ ನೀಡಿ ನಾಲಫಲಕ ಅಳವಡಿಸಿದರು.