ಮುರತ್ತಣೆಯಲ್ಲಿ ಹದಗೆಟ್ಟ ಹೈಮಾಸ್ಟ್ ದೀಪ
ಮಂಜೇಶ್ವರ : ವರ್ಕಾಡಿ ಪಂಚಾಯತ್ನ ಪ್ರಮುಖ ಪೇಟೆಯಲ್ಲೊಂದಾದ ಮುರತ್ತಣೆಯಲ್ಲಿ ದಿವಂಗತ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ನಿಧಿಯಿಂದ ಸ್ಥಾಪಿಸಲಾದ ಹೈ ಮಾಸ್ಟ್ ಲೈಟ್ ಹದೆಗೆಟ್ಟು ವರ್ಷಗಳಾದರೂ ದುರಸ್ಥಿಗೆ ವರ್ಕಾಡಿ ಪಂಚಾಯತ್ ಆಡಳಿತ ಸಮಿತಿ ಮೀನ ಮೇಷ ಎಣಿಸುತ್ತಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಪಂಚಾಯತ್ ಆಡಳಿತ ಸಮಿತಿಯ ಗಮನಕ್ಕೆ ತಂದರೆ ಬೇಜವಾಬ್ದಾರಿಯುತವಾದ ಹೇಳಿಕೆ ನೀಡಿ ಕೈ ತೊಳೆಯುತ್ತಿದೆಯೆಂದು ಯೂತ್ ಕಾಂಗ್ರೆಸ್ ಆರೋಪಿಸಿದೆ.
ಲೈಟ್ ಉರಿಯದಿರುವುದರಿಂದಾಗಿ ಪೇಟೆಯು ರಾತ್ರಿ ಹೊತ್ತಿನಲ್ಲಿ ಕತ್ತಲು ಆವರಿಸಿ ಜನ ಸಾಮಾನ್ಯರು ಹಾಗೂ ವ್ಯಾಪಾರಿಗಳು ಸಂಕಷ್ಟವನ್ನು ಎದುರಿಸುವಂತಾಗಿದೆ. ಮಾತ್ರವಲ್ಲದೆ ಗಾಂಜಾ, ಮದ್ಯ ಸೇರಿದಂತೆ ಹಲವು ರೀತಿಯ ಅನಧಿಕೃತ ದಂಧೆಯ ಮಾಫಿಯಾಗಳಿಗೆ ವರದಾನವಾಗಿರುವುದಾಗಿ ಊರವರು ಹೇಳುತಿದ್ದಾರೆ.ಹೈ ಮಾಸ್ಟ್ ಲೈಟ್ ದುರಸ್ಥಿಗೆ ವರ್ಕಾಡಿ ಪಂಚಾಯತ್ ಆಡಳಿತ ಸಮಿತಿ ಮುಂದಾಗದಿದ್ದಲ್ಲಿ ಪಂಚಾಯತ್ ಗೆ ಮುತ್ತಿಗೆ ಹಾಕುವುದಾಗಿ ಯೂತ್ ಕಾಂಗ್ರೆಸ್ ಎಚ್ಚರಿಸಿದೆ.