ಲಾಡ್ಜ್ ವೊಂದರಲ್ಲಿ ಯುವಕನ ಕೊಲೆ ಪ್ರಕರಣ : ಐವರ ಬಂಧನ
ನಗರದ ಪಂಪ್ವೆಲ್ನ ಲಾಡ್ಜ್ ಒಂದರಲ್ಲಿ ದಸರಾ ಪಾರ್ಟಿ ಮಾಡುತ್ತಿದ್ದ ವೇಳೆ ಯುವಕರ ನಡುವಿನ ಜಗಳದ ಸಂದರ್ಭ ನಡೆದ ಕೊಲೆ ಪ್ರಕರಣ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸುರತ್ಕಲ್ನ ಜಾಯ್ಸನ್ ಯಾನೆ ಜೇಸನ್ (21), ಜೆಪ್ಪು ಬಪ್ಪಾಲ್ನ ಪ್ರಮೀತ್ ಡಿ (24), ವಾಮಂಜೂರಿನ ಕಾರ್ತಿಕ್ (21), ಪಚ್ಚನಾಡಿಯ ಪ್ರಜ್ವಲ್ (22), ದುರ್ಗೇಶ್ (22) ಎಂದು ಗುರುತಿಸಲಾಗಿದೆ. ಈ ಬಗ್ಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ ನೀಡಿದರು.
ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಕೊಲೆಯಲ್ಲಿ ಅಂತ್ಯವಾಗಿದ್ದು, ಬಂಧಿತರಲ್ಲಿ ಜಾಯ್ಸನ್, ಪ್ರಮೀತ್ ಡಿ., ಕಾರ್ತಿಕ್ ಈ ಹಿಂದೆಯೂ ಎನ್ಡಿಪಿಎಸ್, ಗಲಭೆ, ಮೊದಲಾದ ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ ಗುರುತಿಸಿಕೊಂಡಿದ್ದು ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.
ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರಂಜಿತ್ ಕುಮಾರ್ ಬಂಡಾರು ಉಪಸ್ಥಿತರಿದ್ದರು.