ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ವಿಧಾನ ಮಂಗಳೂರಿನಲ್ಲಿ ಪ್ರಥಮ
ಮಂಗಳೂರು: ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ವಿನೂತನ ತಂತ್ರಜ್ಞಾನವನ್ನು ಮಂಗಳೂರಿನ ಬೋಟ್ ಗೆ ಅಳವಡಿಕೆ ಮಾಡಲಾಗಿದೆ. ಈ ಮೂಲಕ ವಾರಗಟ್ಟಲೆ ಸಮುದ್ರ ಮಧ್ಯೆ ಮೀನುಗಾರಿಕೆ ನಡೆಸಲು ಹೋಗುವ ಮೀನುಗಾರರು ಇನ್ನು ಮುಂದೆ ತಮ್ಮ ನಿತ್ಯ ಬಳಕೆಯ ಅವಶ್ಯಕತೆಗೆ ಬೇಕಾದ ನೀರನ್ನು ಕೊಂಡೊಯ್ಯುವ ಪ್ರಮೇಯವೇ ಇಲ್ಲ.
ಆಳ ಸಮುದ್ರ ಮೀನುಗಾರಿಕೆ ನಡೆಸುವ ಮೀನುಗಾರರು ಸುಮಾರು ಹತ್ತಾರು ದಿನಗಳ ಕಾಲ ಸಮುದ್ರದ ನಡುವೆಯೇ ಮೀನುಗಾರಿಕೆ ನಡೆಸುತ್ತಿರುತ್ತಾರೆ. ಆದರೆ ಅವರಿಗೆ ಅಲ್ಲಿ ಉಪ್ಪು ನೀರು ದೊರಕುತ್ತದೆಯೇ ಹೊರತು, ಸಿಹಿ ನೀರು ಸಿಗುವುದಿಲ್ಲ. ಅದಕ್ಕಾಗಿ ಅವರು ಲೀಟರ್ ಗಟ್ಟಲೆ ಶುದ್ಧ ನೀರನ್ನು ತಮ್ಮೊಂದಿಗೆ ಕೊಂಡೊಯ್ಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ವಿನೂತನ ತಂತ್ರಜ್ಞಾನದ ಮುಖೇನ ಸಮುದ್ರದ ಉಪ್ಪು ನೀರನ್ನೇ ಶುದ್ಧ ಕುಡಿಯುವ ನೀರಾಗಿ ಪರಿವರ್ತನೆ ಮಾಡುವ ಉಪಕರಣವನ್ನು ಬೋಟ್ ಗೆ ಅಳವಡಿಕೆ ಮಾಡಲಾಗಿದೆ.
ಆಸ್ಟ್ರೇಲಿಯಾದ ಮೆರೈನ್ ಕಂಪೆನಿಯಾದ ರೆಯಾನ್ಸ್ ನವರು ಈ ಉಪಕರಣವನ್ನು ಅಭಿವೃದ್ಧಿ ಪಡಿಸಿದ್ದು, ಭಾರತದಲ್ಲಿಯೇ ಮೊಟ್ಟ ಮೊದಲಬಾರಿಗೆ ಮಂಗಳೂರಿನ ಮೀನುಗಾರಿಕಾ ಬೋಟ್ ಗೆ ಇದನ್ನು ಅಳವಡಿಕೆ ಮಾಡಲಾಗಿದೆ. ಈ ಉಪಕರಣದಲ್ಲಿ ದಿನಕ್ಕೆ 2 ಸಾವಿರ ಲೀಟರ್ ನೀರನ್ನು ಉತ್ಪಾದನೆ ಮಾಡಲು ಸಾಧ್ಯ. ಈ ಮೂಲಕ ತಿಂಗಳಿಗೆ 60 ಸಾವಿರ ಲೀಟರ್ ನೀರನ್ನು ಉಳಿಕೆ ಮಾಡಲು ಸಾಧ್ಯ. ಇದು ಮೀನುಗಾರರಿಗೆ ಲಾಭದಾಯಕವೂ, ಆರೋಗ್ಯಕರವೂ ಆಗಲಿದೆ.
ಈ ಉಪಕರಣದಲ್ಲಿ ಎರಡು ಪೈಪ್ ಗಳಿದ್ದು, ಒಂದು ಪೈಪ್ ಸಮುದ್ರದಲ್ಲಿನ ನೀರನ್ನು ಸಕ್ ಮಾಡುತ್ತದೆ. ನೀರು ಶುದ್ಧೀಕರಣ ಪ್ರಕ್ರಿಯೆ ಉಪಕರಣದೊಳಗೆ ನಡೆದು ಮತ್ತೊಂದು ಪೈಪ್ ಮೂಲಕ ಶುದ್ಧ ನೀರು ಬರುತ್ತದೆ. ಈ ನೀರು ಸಿಹಿ ನೀರಿನಷ್ಟೇ ಶುದ್ಧವಾಗಿರುತ್ತದೆ. ಈ ಮೂಲಕ ಗಂಟೆಗೆ 160 ಲೀಟರ್ ಶುದ್ಧ ನೀರು ಉತ್ಪಾದನೆ ಆಗುತ್ತದೆ. ಈ ಉಪಕರಣಕ್ಕೆ 4.60 ಲಕ್ಷ ರೂ. ಇದ್ದು, ಮೀನುಗಾರರಿಗೆ 50% ಸಬ್ಸಿಡಿ ದರದಲ್ಲಿ ಕೇಂದ್ರ ಸರಕಾರ ಒದಗಿಸುವ ಭರವಸೆ ನೀಡಿದೆ.