ಸಿ.ಟಿ. ರವಿ ವಿವಾದಾತ್ಮಕ ಹೇಳಿಕೆಗೆ ಎಂ.ಎಸ್ ಮಹಮ್ಮದ್ ಖಂಡನೆ

ವಿಟ್ಲ: ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮದರಸದಲ್ಲಿ ತಾಲಿಬಾನಿಗಳನ್ನು, ಭಯೋತ್ಪಾದಕರನ್ನು ಸೃಷ್ಟಿ ಮಾಡ್ತಾರೆ ಎಂದು ಹೇಳಿಕೆ ನೀಡಿರುವುದನ್ನು ನಾವು ಖಂಡಿಸುತ್ತೇವೆ ತಕ್ಷಣವೇ ಅವರು ಕ್ಷಮೆಯಾಚಿಸಬೇಕು ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್ ಅವರು ಆಗ್ರಹಿಸಿದರು.

ವಿಟ್ಲದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿಟಿ ರವಿ ಅಲ್ಲ ಅವರು ಕೋಟಿ ರವಿಯಾಗಿದ್ದು, ನಮ್ಮ ಮದರಸ ಇಸ್ಲಾಂ ಧರ್ಮದ ದೀನಿನಚೌಕಟ್ಟಿನ ಒಳಗೆ ವಿಧಿವಿಧಾನ ಕಲಿಸು ಒಂದು ಕೇಂದ್ರವಾಗಿದೆ. ಮದರಸಗಳು ಏನೆಂಬುದನ್ನು ಅರ್ಥ ಮಾಡಿಕೊಳ್ಳಲು ಸಾಮರ್ಥ್ಯ ಇಲ್ಲದ ರವಿಯಿಂದ ಇಂತಹ ಬಾಲಿಶ ಹೇಳಿಕೆಯನ್ನು ಮಾತ್ರ ಪ್ರದೀಕ್ಷೆ ಮಾಡಬಹುದಷ್ಟೆ. ಅವರ ಆರೋಪವನ್ನು ನಾವು ಖಂಡಿಸುತ್ತೇವೆ. ಮುಖ್ಯಮಂತ್ರಿ ಸ್ಥಾನ ಸಿಗದೆ ಸಿ.ಟಿ ರವಿ ಹತಾಶರಾಗಿದ್ದಾರೆ. ಒಂದು ಲೆಕ್ಕದಲ್ಲಿ ಅವರು ಮುಖ್ಯಮಂತ್ರಿ ಆಗದ್ದು ಕರ್ನಾಟಕದ ಜನತೆಯ ಪುಣ್ಯ. ಅವರಿಗೆ ಮುಖ್ಯಮಂತ್ರಿಯಾಗುವ ಯೋಗ್ಯತೆಯೂ ಇಲ್ಲ ಎಂದ ಅವರು ಬಿಜೆಪಿಯಲ್ಲಿ ಕೋಮುಭಾವನೆ ಸೃಷ್ಟಿಸುವವರಿಗೆ ಮಾತ್ರ ಅವಕಾಶ ಸಿಗುತ್ತಿದೆ. ಇದರಿಂದ ಅವರು ಪ್ರಚೋದಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಭಾರತ ಜಾತ್ಯಾತೀತ ರಾಷ್ಟ್ರವಾಗಿದ್ದು ಅದರದ್ದೇ ಆದ ಸಂವಿಧಾನದ ಮೂಲಕ ನಾವಿಲ್ಲಿ ಜೀವನ ಮಾಡುತ್ತಿದ್ದೇವೆ. ನಮ್ಮ ಮದರಸಗಳಿಗೆ ಸಿ.ಟಿ ರವಿ ಅವರನ್ನು ಕರೆದುಕೊಂಡು ಹೋಗುತ್ತೇವೆ ಎಲ್ಲಾದರೂ ತಾಲಿಬಾನಿಗಳನ್ನು, ಭಯೋತ್ಪಾದಕರನ್ನು ಸೃಷ್ಟಿ ಮಾಡುತ್ತಿರುವುದು ಕಂಡು ಬಂದಲ್ಲಿ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ. ಸಿ.ಟಿ ರವಿಯವರು ಇದೇ ರೀತಿಯ ಬಾಲಿಶ ಹೇಳಿಕೆಯನ್ನು ನೀಡುತ್ತಾ ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ಅವರ ವಿರುದ್ಧ ವಿಟ್ಲದಲ್ಲಿ ಬೃಹತ್ ಪ್ರತಿಭಟನೆ ಮಾಡ್ತೇನೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿ ಗೋಷ್ಠಿಯಲ್ಲಿ ವಿಟ್ಲ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಅಬ್ದುಲ್ ಕರೀಂ ಕುದ್ದುಪದವು, ನಗರ ಕಾಂಗ್ರೆಸ್ ಅಧ್ಯಕ್ಷ ವಿಕೆಎಂ ಅಶ್ರಪ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.