ಕಲ್ಲಿಕೋಟೆಯಿಂದ ನೇಪಾಳಕ್ಕೆ ಬೈಕ್ ಯಾತ್ರೆ
ಉಳ್ಳಾಲ: ಡಬ್ಬದಲ್ಲಿ ಹಣವನ್ನು ಕೂಡಿಟ್ಟು, ಸಮಾಜಕ್ಕೆ ಸೌಹಾರ್ದದ ಸಂದೇಶ ಹಾಗೂ ಸಾಯುವ ಮುನ್ನ ಅನಿಸಿದ್ದನ್ನು ಸಾಧಿಸು ಅನ್ನುವ ಉದ್ದೇಶವನ್ನು ಮುಂದಿಟ್ಟು ಕೇರಳದ ಹವ್ಯಾಸಿ ಬೈಕ್ ರೈಡರ್ಗಳ ಒಂಭತ್ತು ಮಂದಿಯ ತಂಡ ಕಲ್ಲಿಕೋಟೆಯಿಂದ – ನೇಪಾಳ ಪ್ರವಾಸವನ್ನು ಆರಂಭಿಸಿದೆ. ಆ.27 ರಂದು ಪ್ರವಾಸವನ್ನು ಆರಂಭಿಸಿದ ತಂಡ ಇಂದು ದೇರಳಕಟ್ಟೆಯನ್ನು ತಲುಪಿದೆ. ಅಲ್ಲಿಂದ ಐದು ಬೈಕುಗಳಲ್ಲಿ ಪ್ರವಾಸ ಮುಂದುವರಿಸಿದ ತಂಡ ಇಂದು ಗೋಕರ್ಣ ತಲುಪಿ ಅಲ್ಲೇ ಉಳಿಯಲಿದೆ.
ಕೋಝಿಕ್ಕೋಡ್, ಮಲಪ್ಪುರಂ, ತಿರುವನಂತಪುರಂ ನಿವಾಸಿಗಳಾದ ಸಂಶುದ್ದೀನ್, ಬಾಷಿತ್, ಪ್ರಷೀಬ್, ಸಾಹಿರ್ ಬಾಬು, ಮುನವ್ವಿರ್, ಶಫೀಖ್, ಸುಹೈಬ್ ಅಖ್ತರ್, ಜ್ಯಾಕ್ಸನ್ ಥಾಮಸ್ , ಫೈಝಲ್ ದೇರಳಕಟ್ಟೆ ಎಂಬವರ ತಂಡ ಪ್ರಯಾಣ ಆರಂಭಿಸಿದೆ. ಕಾಲೇಜು ಜೀವನದಲ್ಲಿ ಇತರರು ಬೈಕಿನಲ್ಲಿ ಪ್ರಯಾಣಿಸುವುದನ್ನು ಕಂಡು ಪ್ರೇರಣೆಗೊಂಡು ತಾವು ಕೂಡಾ ಬೈಕ್ ಮೂಲಕ ದೇಶ ಸುತ್ತಬೇಕೆಂಬ ಕನಸನ್ನು ಸಾಕಾರಗೊಳಿಸಲು ಪ್ರಯಾಣ ಆರಂಭಿಸಿದ್ದಾರೆ. ಕೋವಿಡ್ ನಿರ್ಭಂಧನೆಗಳು ಇರುವುದರಿಂದ 73 ಗಂಟೆಗಳ ಆರ್ ಟಿಪಿಸಿಆರ್ ವರದಿ ಹಾಗೂ ಎರಡು ವ್ಯಾಕ್ಸಿನ್ ಪಡೆದುಕೊಂಡೇ ಯುವಕರ ತಂಡ ಕಾಶ್ಮೀರ ಹೊರಟಿದೆ. ಹಿಂದಿನಿಂದಲೂ ಯೋಜನೆ ರೂಪಿಸಿದ್ದ ತಂಡದ ಸದಸ್ಯರಲ್ಲಿ ಹಲವರು ಪ್ರವಾಸಕ್ಕೆ ರೂ.1 ಲಕ್ಷದಷ್ಟು ವೆಚ್ಛ ಸಾಧ್ಯತೆ ಇರುವುದರಿಂದ ಹಣವನ್ನು ಕೂಡಿಟ್ಟಿದ್ದರು. ಅದನ್ನು ಬಳಸಿಕೊಂಡು ಪ್ರಯಾಣ ಮುಂದುವರಿಸಿರುವರು. ಸುರಕ್ಷತಾ ಕ್ರಮಕ್ಕಾಗಿ ವೈದ್ಯಕೀಯ ಕಿಟ್, ಉಳಿದುಕೊಳ್ಳಲು ಟೆಂಟ್ ವ್ಯವಸ್ಥೆ , ಬಟ್ಟೆ ಹಾಗೂ ಬೈಕ್ ಟೂಲ್ಸ್ ಗಳನ್ನು ಜತೆಯಲ್ಲಿಟ್ಟುಕೊಂಡಿದೆ. ಅದರಂತೆ ಆ.27 ರಂದು ಕಲ್ಲಿಕೋಟೆಯ ಮುಕ್ಕಾಂ ನಿಂದ ಬೈಕ್ ರೈಡ್ ಆರಂಭಿಸಿ ತಿಂಗಳ ಅವಧಿಯಲ್ಲಿ ಸಾವಿರಕ್ಕೂ ಅಧಿಕ ಕಿ.ಮೀ ಸಾಗಿ ಕಾಶ್ಮೀರ, ನೇಪಾಳ ಮತ್ತು ಭೂತಾನ್ ತಲುಪುವ ಇಚ್ಛೆಯನ್ನು ಹೊಂದಿದ್ದೇವೆ? ಅನ್ನುತ್ತಾರೆ ಕಲ್ಲಿಕೋಟೆ ವಿಶ್ವವಿದ್ಯಾನಿಲಯ ಅಧೀನದ ಕಾಕಂಜೇರಿ ನವಭಾರತ್ ಮಾಡೆಲ್ ಸ್ಕೂಲ್ ನಲ್ಲಿ ಅಧ್ಯಾಪಕರಾಗಿರುವ ಸಂಶುದ್ಧೀನ್ ಇವರು.