ಕೌಟುಂಬಿಕ ಕಲಹ : ದರೆಗುಡ್ಡೆಯಲ್ಲಿ ಪತ್ನಿಯನ್ನು ಕೊಂದ ಪತಿ
ಮೂಡುಬಿದಿರೆ ತಾಲೂಕಿನ ದರೆಗುಡ್ಡೆ ಗ್ರಾ.ಪಂ ವ್ಯಾಪ್ತಿಯ ಮಠ ಎಂಬಲ್ಲಿ ಪತಿ ಪತ್ನಿಯನ್ನು ಕೊಂದ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ಸುನೀತಾ(30 ) ಸಾವನ್ನಪ್ಪಿದಾಕೆ. ಪತಿ ಮೂಡುಬಿದಿರೆಯ ದಿನ್ ರಾಜ್ ನನ್ನು ಇಂದು ಮುಂಜಾನೆ ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಸಂಜೆ ಗಂಡ- ಹೆಂಡತಿಯ ಮಧ್ಯೆ ಜಗಳ ನಡೆದಿದ್ದು ಈ ಸಂದರ್ಭ ದಿನ್ ರಾಜ್ ಹೆಂಡತಿಯ ತಲೆಗೆ ಹೊಡೆದಿದ್ದಾನೆ. ಆಗ ರಕ್ತ ಸೋರುತ್ತಿರುವುದನ್ನು ಕಂಡ ದಿನ್ ರಾಜ್ ಸುನೀತಾ ಅವರ ಸಹೋದರ ಸಂಬಂಧಿಗೆ ಕರೆ ಮಾಡಿದ್ದಾನೆ. ಆಗ ಅವರು ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದ್ದಾರೆ. ಮೊದಲಿಗೆ ಬೆಳುವಾಯಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ದಾಖಲಿಸಲು ನಿರಾಕರಿಸಿದ್ದಾಗ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಧಿಕ ರಕ್ತಸ್ರಾವ ಆಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದ ಸುನೀತಾ ಮೃತಪಟ್ಟಿದ್ದಾರೆ.
ಬಡ ಕುಟುಂಬದಲ್ಲಿ ಹುಟ್ಟಿದ್ದ ಸುನೀತಾ ತನ್ನ ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದರು. ಒಂದೂವರೆ ವರ್ಷಗಳ ಹಿಂದೆ ಸಂಬಂಧಿಕರು ಸೇರಿ ಮದುವೆ ಮಾಡಿಸಿದ್ದರು. ತಾಯಿ ಒಬ್ಬಳೆ ಮನೆಯಲ್ಲಿ ಇದ್ದುದರಿಂದ ಸುನೀತಾ ಅಲ್ಲಿಯೇ ಉಳಿದುಕೊಂಡಿದ್ದು ದಿನ್ ರಾಜ್ ಕೂಡಾ ಅಲ್ಲಿಯೇ ಇದ್ದು ಮೂಡುಬಿದಿರೆಯಲ್ಲಿ ಬ್ಯಾಟರಿ ಅಂಗಡಿಗೆ ಕೆಲಸಕ್ಕೆ ಬರುತ್ತಿದ್ದಾನೆನ್ನಲಾಗಿದೆ. ನಿನ್ನೆ ಸುನೀತಾ ಅವರ ತಾಯಿ ಪಕ್ಕದ ಮನೆಗೆ ಹೋದಾಗ ಘಟನೆ ನಡೆದಿದೆ.