ಮೂಡುಬಿದಿರೆ ಕಡಲಕೆರೆಯಲ್ಲಿ ಪ್ರಾಯೋಗಿಕ ಕಂಬಳಕ್ಕೆ ಚಾಲನೆ

ಮೂಡುಬಿದಿರೆ: ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ಆಶ್ರಯದಲ್ಲಿ 6ನೇ ವರ್ಷದ ಶಿಬಿರಾರ್ಥಿಗಳಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಪ್ರಾಯೋಗಿಕ ಕಂಬಳವನ್ನು ಕಡಲಕೆರೆಯ ಕೋಟಿ ಚೆನ್ನಯ ಜೋಡುಕರೆ ಕಂಬಳ ಕರೆಯಲ್ಲಿ ಆಯೋಜಿಸಲಾಯಿತು.

ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ ಚೌಟ ಪ್ರಾಯೋಗಿಕ ಕಂಬಳಕ್ಕೆ ಚಾಲನೆ ನೀಡಿದರು. ಮಾಜಿ ಸಚಿವ, ಮೂಡುಬಿದಿರೆ ಕಂಬಳ ಸಮಿತಿಯ ಮಾಜಿ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ, ಕಂಬಳ ಅಕಾಡೆಮಿ ಮೂಲಕ ಉತ್ತಮ ಗುಣಮಟ್ಟದ ತರಬೇತಿ ಕಳೆದ ಐದು ವರ್ಷಗಳಿಂದ ನೀಡುತ್ತಿರುವುದು ಕಂಬಳಕ್ಕೆ ಒಂದು ಉತ್ತಮ ಕೊಡುಗೆ. ಕಂಬಳ ಕ್ಷೇತ್ರಕ್ಕೆ ಉತ್ತಮ ಓಟಗಾರರನ್ನು ನೀಡಿ, ಓಟಗಾರರ ಕೊರತೆಯನ್ನು ದೂರ ಮಾಡಲು ಗುಣಪಾಲ ಕಡಂಬ ಹಾಗೂ ಅವರ ತಂಡ ಮಾಡುತ್ತಿದೆ. ಕಡಲಕೆರೆ ಅಭಿವೃದ್ಧಿ ಜೊತೆಗೆ ನಾನು ಶಾಸಕನಾಗಿರುವ ವೇಳೆ ಕಂಬಳವನ್ನು ಪ್ರಾರಂಭಿಸಿದ್ದು, ಈಗ ಶಾಸಕ ಉಮಾನಾಥ ಕೋಟ್ಯಾನ್ ಉತ್ತಮ ರೀತಿಯಲ್ಲಿ ಅದನ್ನು ಮುಂದುವರಿಸುತ್ತಿದ್ದಾರೆ ಎಂದರು.

ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಯುವ ಕಂಬಳ ಓಟಗಾರರಿಗೆ ತರಬೇತಿಯ ಜೊತೆಗೆ ಪ್ರಾಯೋಗಿಕವಾಗಿ ಕೋಣಗಳನ್ನು ಓಡಿಸಲು ಅವಕಾಶ ನೀಡಿರುವುದು ಕಂಬಳ ಅಕಾಡೆಮಿಯ ಉತ್ತಮ ನಡೆ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಪುತ್ತಿಗೆ ಗ್ರಾಪಂ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯರಾದ ಸುರೇಶ್ ಕೋಟ್ಯಾನ್, ದಿನೇಶ್ ಪೂಜಾರಿ, ಮೂಡಾ ಅಧ್ಯಕ್ಷ ಮೇಘನಾಥ ಶೆಟ್ಟಿ, ಬಾರಡಿಕಂಬಳದ ಸಂಘಟಕ ಜೀವಂದರ್ ಬಲ್ಲಾಳ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರ, ಇರುವೈಲು ಪಾಣಿಲ ಸತೀಶ್ಚಂದ್ರ, ರಂಜಿತ್ ಪೂಜಾರಿ ತೋಡಾರು, ಆರ್.ಕೆ ಭಟ್, ಕಂಬಳ ಓಟಗಾರರಾದ ಶ್ರೀನಿವಾಸ ಗೌಡ, ಸುರೇಶ್ ಶೆಟ್ಟಿ ಹೊಕ್ಕಾಡಿಗೋಳಿ, ಕಂಬಳ ಅಕಾಡೆಮಿಯ ಸಂಚಾಲಕ ಕೆ.ಗುಣಪಾಲ ಕಡಂಬ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.

15 ದಿನಗಳಲ್ಲಿ ವಿವಿಧ ರೀತಿಯಲ್ಲಿ ದೈಹಿಕ ಸಾಮಥ್ರ್ಯ ಹಾಗೂ ಕರಕುಶಲ ತರಬೇತಿಗಳನ್ನು ಪಡೆದ 33ಮಂದಿ ಯುವ ಓಟಗಾರರು ಪ್ರಾಯೋಗಿಕ ಕಂಬಳದಲ್ಲಿ ಕರೆಗಿಳಿದು ತಮ್ಮ ಸಾಮಥ್ರ್ಯವನ್ನು ಸಾಬೀತುಪಡಿಸಿದರು. ನೇಗಿಲು ಕಿರಿಯ ೪೩ ಹಾಗೂ ಹಗ್ಗ ಕಿರಿಯ ವಿಭಾಗದ 12 ಜೊತೆ ಕೋಣಗಳನ್ನು ಓಡಿಸುವ ಅವಕಾಶವನ್ನು ಓಟಗಾರರಿಗೆ ಕಲ್ಪಿಸಲಾಗಿತ್ತು.

Related Posts

Leave a Reply

Your email address will not be published.