ಒಣ ಅಡಿಕೆ ಸುಲಿಯುವ ಯಾಂತ್ರೀಕೃತ ಘಟಕದಿಂದ ಸಮಸ್ಯೆ:ಗ್ರಾಮಸ್ಥರಾದ ಜಯಚಂದ್ರ ಪೂಜಾರಿ ಆರೋಪ

ಬಂಟ್ವಾಳ: ಇರ್ವತ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮೂಡುಪಡುಕೋಡಿ ಗ್ರಾಮದ ಕುಕ್ಕೆರೋಡಿ ಎಂಬಲ್ಲಿ ಒಣ ಅಡಿಕೆ ಸುಲಿಯುವ ಯಾಂತ್ರೀಕೃತ ಘಟಕ ನಡೆಸುತ್ತಿರುವುದರಿಂದ ಸ್ಥಳೀಯ ಜನವಸತಿ ಪ್ರದೇಶದ ಜನರಿಗೆ ವಿಷಪೂರಿತ ಧೂಳು ಮತ್ತು ಶಬ್ದಮಾಲಿನ್ಯದಿಂದ ಜನರ ಜೀವನಕ್ಕೆ ತೊಂದರೆಯಾಗಿದೆ ಎಂದು ಗ್ರಾಮಸ್ಥರಾದ ಜಯಚಂದ್ರ ಪೂಜಾರಿ ಆರೋಪಿಸಿದರು.

ಅವರು ಮಂಗಳವಾರ ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಟಿ ನಡೆಸಿ ಕುಕ್ಕೆರೋಡಿಯಲ್ಲಿ ಕಳೆದ ಹಲವು ಸಮಯಗಳಿಂದ ಅಡಿಕೆ ಸುಲಿಯುವ ಫ್ಯಾಕ್ಟರಿ ಪ್ರಾರಂಭಗೊಂಡ ಸುತ್ತಮುತ್ತಲಿನ ಜನರ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರಿದೆ. ಸ್ಥಳೀಯವಾಗಿ 25ಕ್ಕಿಂತಲೂ ಅಧಿಕ ಕುಟುಂಬಗಳು ವಾಸವಾಗಿದ್ದು ಮಕ್ಕಳು ಹಾಗೂ ವೃದ್ಧರಿಗೆ ಶ್ವಾಸಕೋಶ ಮತ್ತು ಅಲರ್ಜಿ ಸಮಸ್ಯೆ ಎದುರಿಸುತ್ತಿದ್ದಾರೆ, ಯಂತ್ರದಿಂದ ಹೊರಹೊಮ್ಮುವ ಶಬ್ದದಿಂದ ಸುತ್ತಮುತ್ತಲಿನ ಮನೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳ ಏಕಾಗೃತೆಯನ್ನು ಕುಂಠಿತಗೊಳಿಸಿ ಮಕ್ಕಳ ಭವಿಷ್ಯದ ಜೊತೆ ಚೆಲ್ಲಟವಾಡುತ್ತಿದ್ದಾರೆ, ಅಡಿಕೆ ತ್ಯಾಜ್ಯ ವಸ್ತು ಸೊಳ್ಳೆಗಳ ಉತ್ಪತ್ತಿ ಹಾಗೂ ದುರ್ವಾಸನೆಗೆ ಕಾರಣವಾಗಿದೆ ಎಂದು ಆರೋಪಿಸಿದರು. ಘಟಕದ ಮಾಲೀಕರು ಪಂಚಾಯತಿ ನೀಡಿದ ಪರಾವನಿಗೆಯನ್ನು ನವೀಕರಿಸಿಲ್ಲ ಹಾಗೂ ಪರಿಸರ ಇಲಾಖೆಯಿಂದ ಯಾವುದೇ ಪರವನಿಗೆ ಪಡೆದುಕೊಂಡಿಲ್ಲ ಎಂದು ಆರೋಪ ವ್ಯಕ್ತಪಡಿಸಿದರು.ಸುದ್ದಿಗೋಷ್ಟಿಯಲ್ಲಿ ಸ್ಥಳೀಯ ಪ್ರಮುಖರಾದ ರಾಜಶೇಖರ್ ಶೆಟ್ಟಿ, ಹರಿಕೃಷ್ಣ, ಮಂಜುನಾಥ ಪೂಜಾರಿ ಉಪಸ್ಥಿತರಿದ್ದರು.
