ಆಳ್ವಾಸ್ ನಲ್ಲಿ ಮೈಸೂರು ರಂಗಾಯಣದ ನಾಟಕ ‘ ಗೋರ್ ಮಾಟಿ’: ಬಂಜಾರ ಬದುಕಿನ ವಿಶೇಷ ರಂಗ ಪ್ರಯೋಗ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಮೂಡುಬಿದಿರೆ ,ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಜೂನ್ 12 ಮತ್ತು 13 ರಂದು ಸಂಜೆ 6.45 ಕ್ಕೆ ಮೂಡುಬಿದಿರೆಯ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ ರಂಗಾಯಣ ಮೈಸೂರು ತಂಡದಿಂದ ಗೋರ್ ಮಾಟಿ ಎಂಬ ಕನ್ನಡ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಬಂಜಾರ ಜನಾಂಗದ ಕಲೆ ಸಂಸ್ಕೃತಿ ಬದುಕು ಬವಣೆಗಳ ಸಂಕಥನಗಳಿಂದ ಕೂಡಿದ ಗೋರ್ ಮಾಟಿ ನಾಟಕವನ್ನು ಪ್ರಸಿದ್ಧ ರಂಗನಿರ್ದೇಶಕರಾದ ಸಿ.ಬಸವಲಿಂಗಯ್ಯ ನಿರ್ದೇಶಿಸಿದ್ದಾರೆ. ಈ ಪ್ರಯೋಗದ ರಂಗರೂಪ ಶಿರಗಾನಹಳ್ಳಿ ಶಾಂತನಾಯಕ್, ರಂಗವಿನ್ಯಾಸ ಶಶಿಧರ್ ಅಡಪ, ವಸ್ತ್ರವಿನ್ಯಾಸ ಪ್ರಮೋದ್ ಶಿಗ್ಗಾಂವ್ ಮತ್ತು ಶಶಿಕಲಾ ಬಿ.ಎನ್.,ಹಾಗೂ ಬೆಳಕು ವಿನ್ಯಾಸವನ್ನು ಕೃಷ್ಣಕುಮಾರ್ ನಾರ್ಣಕಜೆಯವರು ನೀಡಿದ್ದಾರೆ.
ರಂಗಾಯಣ ರಾಜ್ಯಾದ್ಯಂತ ಕೈಗೊಂಡ ತನ್ನ ರಂಗಪಯಣದಲ್ಲಿ ತೀರಾ ಅಪರೂಪವೆನಿಸಿದ ಈ ನಾಟಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂಡುಬಿದಿರೆಯಲ್ಲಿ ಮಾತ್ರ ಪ್ರದರ್ಶನಗೊಳ್ಳುತ್ತಿದೆ. 30 ಜನ ಪ್ರತಿಭಾನ್ವಿತ ಕಲಾವಿದರ ಪರಿಪಕ್ವ ಅಭಿನಯ, ವಿಶೇಷ ವಸ್ತ್ರವಿನ್ಯಾಸ, ನೃತ್ಯ-ಸಂಗೀತಗಳಿಂದ ಕೂಡಿದ ದೃಶ್ಯಗಳು, ಬೆಳಕು ಸಂಯೋಜನೆ, ವೈವಿಧ್ಯಮಯ ರಂಗ ಪರಿಕರಗಳಿಂದ ಕೂಡಿದ ಗೋರ್ ಮಾಟಿ ನಾಟಕವು ಕರಾವಳಿಯ ಜನತೆಗೆ ವಿಶೇಷ ಅನುಭವ ನೀಡಲಿದೆ.
ಸಮಯಕ್ಕೆ ಸರಿಯಾಗಿ ಆರಂಭವಾಗುವ ಈ ನಾಟಕಕ್ಕೆ ಪ್ರವೇಶ ಉಚಿತವಾಗಿರುತ್ತದೆ ಎಂದು ಆಳ್ವಾಸ್ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವರು ತಿಳಿಸಿದ್ದಾರೆ.