ಬಂಟ್ವಾಳ : ಟ್ಯಾಕ್ಸಿ ಚಾಲಕನ ಕೊಲೆ ಯತ್ನ ಪ್ರಕರಣ , ಚಾಲಕರು ಎಚ್ಚರ ವಹಿಸುವಂತೆ ಮನವಿ
ಬಾಡಿಗೆಗೆ ಟ್ಯಾಕ್ಸಿ ಗೊತ್ತುಪಡಿಸಿಕೊಂಡು ಅರ್ಧ ದಾರಿಯಲ್ಲಿ ಚಾಲಕರನ್ನು ಲೂಟಿ ಮಾಡುವ, ಹಲ್ಲೆ ಮಾಡುವ ದುಷ್ಕತ್ಯಗಳು ನಡೆಯುತ್ತಿದ್ದು, ಈ ಬಗ್ಗೆ ಚಾಲಕರು ಎಚ್ಚರಿಕೆ ವಹಿಸಬೇಕು ಎಂದು ದ.ಕ. ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ಸಲಹೆ ನೀಡಿದೆ.ದ.ಕ. ಜಿಲ್ಲೆಯ ಬಂಟ್ವಾಳ ಕೊಯಿಲ ನಿವಾಸಿ ಹಾಗೂ ಅಸೋಸಿಯೇಶನ್ನ ಸದಸ್ಯರಾದ ಅಬ್ದುಲ್ ರಹಿಮಾನ್ ಎಂಬ ಟ್ಯಾಕ್ಸಿ ಚಾಲಕರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಉಲ್ಲೇಖಿಸಿ ಸಂಘದ ಅಧ್ಯಕ್ಷ ದಿನೇಶ್ ಕುಂಪಲ ಎಂ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಆ.20ರಂದು ಮಂಗಳೂರಿನ ಲೇಡಿಗೋಶನ್ ಬಳಿಯ ಪಾರ್ಕ್ನಿಂದ ಅಬ್ದುಲ್ ರಹಿಮಾನ್ ಎಂಬ ಚಾಲಕರ ಬಳಿ ಬಂದ ಮೂರು ಮಂದಿ ಅಪರಿಚಿತರು ಸುಬ್ರಹ್ಮಣ್ಯಕ್ಕೆ ಬಾಡಿಗೆ ಗೊತ್ತುಪಡಿಸಿದ್ದರು. ಬಳಿಕ ಅರ್ಧ ದಾರಿಯಲ್ಲಿ ಮುರ್ಡೇಶ್ವರಕ್ಕೆ ತೆರಳಲು ಸೂಚಿಸಿದ್ದು, ಅಲ್ಲಿಗೆ ತೆರಳಿದ ಬಳಿಕ ಹೊನ್ನಾವರ ಕಡೆಗೆ ಹೋಗುವಂತೆ ಒತ್ತಾಯಿಸಿದ್ದಾರೆ.
ಚಾಲಕನಿಗೆ ಈ ಸಂದರ್ಭ ಅನುಮಾನ ಬಂದು ವಾಹನ ನಿಲ್ಲಿಸಲು ಪ್ರಯತ್ನಿಸುವ ಸಂದರ್ಭದಲ್ಲಿ ಹಠಾತ್ತಾಗಿ ಟ್ಯಾಕ್ಸಿಯಲ್ಲಿದ್ದ ಪ್ರಯಾಣಿಕರು ಚೂರಿಯಿಂದ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಮಂಕಿ ಪೆÇಲೀಸ್ ಠಾಣೆಯ ಬಳಿ ಗಸ್ತು ನಿರತರಾಗಿದ್ದ ಪೆÇಲೀಸರು ಬಂದು ಚಾಲಕನನ್ನು ರಕ್ಷಿಸಿದ್ದಾರೆ. ಮಾತ್ರವಲ್ಲದೆ ಟ್ಯಾಕ್ಸಿಯಿಂದ ತಪ್ಪಿಸಿ ಓಡಿಹೋಗಲು ಯತ್ನಿಸಿದ್ದ ಮೂವರು ದುಷ್ಕರ್ಮಿಗಳನ್ನು ಸ್ಥಳೀಯರು ಹಾಗೂ ಪೆÇಲೀಸರು ಬೆನ್ನಟ್ಟಿ ಹಿಡಿದು ಪ್ರಕರಣ ದಾಖಲಿಸಿದ್ದಾರೆ. ಇಂತಹ ಕೃತ್ಯಗಳು ಸಾಕಷ್ಟು ಈ ಹಿಂದೆಯೂ ನಡೆದಿದ್ದು, ಚಾಲಕರು ಈ ರೀತಿ ಒಂದು ಕಡೆಗೆ ಬಾಡಿಗೆ ಗೊತ್ತುಪಡಿಸಿ ಇನ್ನೊಂದು ಕಡೆಗೆ ತೆರಳಲು ನಿರ್ದೇಶಿಸುವ ಪ್ರಯಾಣಿಕರ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ದಿನೇಶ್ ಕುಂಪಲ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಆನಂದ ಕೆ., ಉಪಾಧ್ಯಕ್ಷ ಹರೀಶ್ ಶೆಟ್ಟಿ, ಕೋಶಾಧಿಕಾರಿ ಸುರೇಶ್ ಸಾಲ್ಯಾನ್, ಸಂತ್ರಸ್ತ ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.