ಮಂಗಳೂರು : ಜಾಗೃತಿ ತಿಳುವಳಿಕೆ ಸಪ್ತಾಹದ ಸಮಾರೋಪ ಸಮಾರಂಭ
ರಾಜ್ಯದ ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕ ಆಡಳಿತದಿಂದ ವಿದೇಶಿ ಹೂಡಿಕೆದಾರರು ಪ್ರಭಾವಿತರಾಗಿದ್ದು, ಅದರ ಫಲವಾಗಿ ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಹೂಡಿಕೆದಾರರ ಸಮಾವೇಶದಲ್ಲಿ 10 ಲಕ್ಷ ಕೋಟಿ ಹೂಡಿಕೆಯ ಒಪ್ಪಂದಗಳಾಗಿರುವುದು ಹೆಮ್ಮೆಯ ವಿಷಯ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ. ಹರ್ಷ ಪಿ.ಎಸ್. ಅವರು ಹರ್ಷ ವ್ಯಕ್ತ ಪಡಿಸಿದರು.
ನವ ಮಂಗಳೂರು ಬಂದರು ಪ್ರಾಧಿಕಾರದಿಂದ ಎನ್.ಎಂ.ಪಿ.ಎಯ ಬಿ.ಡಿ.ಸಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ತಿಳುವಳಿಕೆ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ರಾಜ್ಯಕ್ಕೆ ಇಷ್ಟು ಪ್ರಮಾಣದ ಹೂಡಿಕೆ ಹರಿದು ಬರುತ್ತಿರುವುದು ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ, ಪಾರದರ್ಶಕ ಆಡಳಿತ, ಪಾರದರ್ಶಕ ಪ್ರಕ್ರಿಯೆಗಳು ಅವರಲ್ಲಿ ವಿಶ್ವಾಸ ಮೂಡಿಸಿವೆ, ಜಗತ್ತಿನ ಮೊದಲ ಐದು ಆರ್ಥಿಕತೆಗಳಲ್ಲಿ ಈಗ ಭಾರತವಿದೆ. ಮೂರು ಟ್ರಿಲಿಯನ್ ಅರ್ಥಿಕತೆ ನಮ್ಮದು. ನಮ್ಮ ದೇಶ ವಾಯುಯಾನ, ರಕ್ಷಣೆ, ಅಂತರಿಕ್ಷಯಾನ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ ಎಂದರು. ನವ ಮಂಗಳೂರು ಬಂದರು ದೇಶದ 12 ಪ್ರಮುಖ ಬಂದರುಗಳಲ್ಲಿ ಒಂದಾಗಿದೆ. ಇದೇ ಬಂದರಿನ ಸಾಮಥ್ರ÷್ಯ ಮತ್ತು ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಭಾರತ 1,250 ಮಿಲಿಯನ್ ಟನ್ ಸರಕನ್ನು ತನ್ನ ದೊಡ್ಡ ಮತ್ತು ಸಣ್ಣ ಬಂದರುಗಳ ಮೂಲಕ ನಿಭಾಯಿಸುತ್ತದೆ. ದೇಶದ ಕಡಲ ವ್ಯಾಪಾರದಲ್ಲಿ ಶೇ.7.9% ಪಾಲು ನವ ಮಂಗಳೂರು ಬಂದರಿನದ್ದಾಗಿದೆ, ಇದು ಹೆಮ್ಮೆಯ ಸಂಗತಿ, ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯ ಬಂದರುಗಳನ್ನು ಜೋಡಿಸುವ ಸಾಗರಮಾಲಾ ಯೋಜನೆಗೆ ಸುಮಾರು 120 ಬಿಲಿಯನ್ ಅಮೇರಿಕನ್ ಡಾಲರ್ ವೆಚ್ಚದಲ್ಲಿ ಜಾರಿಯಾಗುತ್ತಿದೆ, ಇದರಿಂದ ಒಳನಾಡ ವ್ಯಾಪಾರ ವಹಿವಾಟಿಗೆ ಅಭಿವೃದ್ಧಿಯಾಗಲಿದೆ ಎಂದರು.
ಎನ್ಎoಪಿಎ ಅಧ್ಯಕ್ಷ ಎ.ವಿ. ರಮಣ ಮಾತನಾಡಿ, ಭ್ರಷ್ಟಾಚಾರವು ಜಾಗೃತ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಅದರಲ್ಲಿ ಶಾಮೀಲಾದವರೂ ಕೂಡ ಶಿಕ್ಷೆ ಅನುಭವಿಯೇ ತೀರುತ್ತಾರೆ, ಭ್ರಷ್ಟ ಚಟುವಟಿಕೆಗಳಲ್ಲಿ ತೊಡಗಿರುವವರು ತಮ್ಮ ಕಾರ್ಯಗಳನ್ನು ಇತರರು ಗಮನಿಸುವುದಿಲ್ಲ ಎಂದು ಕೊಂಡಿರುತ್ತಾರೆ ಆದರೆ ಅದು ತಪುö್ಪ, ನಮ್ಮ ಉದ್ಯೋಗಿಗಳು ಏನು ಮಾಡುತ್ತಿದ್ದಾರೆ ಎಂಬುದು ನಮಗೆ ತಿಳಿದಿದೆ ಎಂದು ಹೇಳಿದರು.
ಎನ್ಎಂಪಿಎ ಉಪಾಧ್ಯಕ್ಷ ಕೆ.ಜಿ. ನಾಥ್, ಎನ್ಎಂಪಿಎ ಮುಖ್ಯ ವಿಜಿಲೆನ್ಸ್ ಅಧಿಕಾರಿ ಕೆ.ಪದ್ಮನಾಭಾಚಾರ್ ಮತ್ತು ಮೊರ್ಮುಗೋವಾ ಬಂದರಿನ ಸಿವಿಒ ವಿಜಯ ದತ್ ಕಾಗಿತಾ ಮಾತನಾಡಿದರು. ಜಾಗೃತಿ ತಿಳುವಳಿಕೆ ಸಪ್ತಾಹದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪ್ರಬಂಧ, ಭಾಷಣ ಮತ್ತು ಸ್ಲೋಗನ್ ಬರವಣಿಗೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ಎನ್ಎಂಪಿಎ ನೌಕರರಿಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.