ಗುಂಡಿಬೈಲು ಶ್ರೀ ಶನೈಶ್ವರ ಕ್ಷೇತ್ರ : 12ನೇ ವರ್ಷದ ಸಾರ್ವಜನಿಕ ಶ್ರೀ ಶನಿಕಲ್ಪೋಕ್ತ ಪೂಜೆ
ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ವತಿಯಿಂದ ಉಡುಪಿಯ ಗುಂಡಿಬೈಲುನಲ್ಲಿರುವ ಶ್ರೀ ಶನೈಶ್ವರ ಕ್ಷೇತ್ರದಲ್ಲಿ 12ನೇ ವರ್ಷದ ಸಾರ್ವಜನಿಕ ಶ್ರೀ ಶನಿಕಲ್ಪೋಕ್ತ ಪೂಜೆ ಪ್ರಯುಕ್ತ ಮಾರ್ಚ್ 12, 2023 ರ ಭಾನುವಾರ ಸಂಜೆ, ದಾನಿಗಳಾದ ಸಂದೀಪ್ ಶೆಟ್ಟಿಯವರು ನೀಡಿದ ಶ್ರೀ ಶನೈಶ್ವರ ದೇವರ ಮೂರ್ತಿಯನ್ನು ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದಿಂದ ದಿವ್ಯ ಮೆರವಣಿಗೆಯ ಮೂಲಕ ಗುಂಡಿಬೈಲುವಿನ ಶ್ರೀ ಶನೈಶ್ವರ ಕ್ಷೇತ್ರಕ್ಕೆ ತರಲಾಗಿತ್ತು.
ನಂತರ ಮಾರ್ಚ್ 13, 2023 ರ ಸೋಮವಾರ ಬೆಳಿಗ್ಗೆ ಶ್ರೀ ದೇವರ ಮೂರ್ತಿ ಪ್ರತಿಷ್ಠಾ ಕಾರ್ಯಕ್ರಮ ಸಕಲ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಿತು. ಇದರೊಂದಿಗೆ ಶ್ರೀ ಕ್ಷೇತ್ರದಲ್ಲಿ ಗಣಹೋಮ, ಮಹಾಪೂಜೆ, ಮಹಾ ಅನ್ನಸಂತರ್ಪಣೆ ಮತ್ತು ರಂಗಪೂಜೆ ನೆರವೇರಿತು. ಬಳಿಕ ರಾತ್ರಿ, ಸಸಿಹಿತ್ಲು ಶ್ರೀ ಭಗವತೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ “ಶ್ರೀ ಭಗವತೀ ಕ್ಷೇತ್ರ ಮಹಾತ್ಮೆ” ಎಂಬ ಪುಣ್ಯ ಕಥಾ ಭಾಗ ಜರುಗಿತು. ಸಹಸ್ರಾರು ಭಕ್ತಾಭಿಮಾನಿಗಳು ಆಗಮಿಸಿ, ಶ್ರೀ ಶನೈಶ್ವರ ದೇವರ ಅನುಗ್ರಹಕ್ಕೆ ಪಾತ್ರರಾದರು. ಈ ಸುಸಂದರ್ಭದಲ್ಲಿ ಎಲ್ಲರೂ ಎಣ್ಣೆಯನ್ನು ದೇವರ ವಿಗ್ರಹಕ್ಕೆ ಸಮರ್ಪಿಸಿ, ಎಳ್ಳು ದೀಪ ಸೇವೆಯನ್ನು ನೀಡಿದರು.