ಕೋಟೆಕಾರು : “ಮಾಡೂರು ಶಾಖಾ ಅಂಚೆ ಕಚೇರಿ ಉದ್ಘಾಟನೆ”

ಅಂಚೆ ಕಚೇರಿಗಳು ಜನ ಸಾಮಾನ್ಯರ ಜೀವನಕ್ಕೆ ಅವಶ್ಯವಾದಂತಹ ಸೇವೆಗಳನ್ನು ಮನೆಬಾಗಿಲಿನಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ ನೀಡುವ ಮೂಲಕ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿವೆ ಮತ್ತು ಬದಲಾದ ಕಾಲ ಘಟ್ಟದಲ್ಲಿ ಅಂಚೆ ಇಲಾಖೆಯ ಜನಸೇವೆ ಅತ್ಯಂತ ಶ್ಲಾಘನೀಯ ಎಂದು ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲ್ ರವರು ಹೇಳಿದರು.

ಕೋಟೆಕಾರಿನ ಮಾಡೂರಿನಲ್ಲಿ ಹೊಸ ಶಾಖಾ ಅಂಚೆ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಹೊಸ ಶಾಖಾ ಅಂಚೆ ಕಚೇರಿಯನ್ನು ಉದ್ಘಾಟಿಸಿದ ಕೋಟೆಕಾರು ಪಟ್ಟಣ ಪಂಚಾಯತ್ ನ ಅಧ್ಯಕ್ಷೆ ದಿವ್ಯಾ ಸತೀಶ್ ಶೆಟ್ಟಿ ಇವರು ಅಂಚೆ ಇಲಾಖೆ ವೃದ್ಧರ, ಅಶಕ್ತರ, ಮಹಿಳೆಯರ, ಮಕ್ಕಳ ಪಾಲಿಗೆ ಆಶಾಕಿರಣವಾಗಿದ್ದು ಮಾಡೂರಿನ ಹೊಸ ಅಂಚೆ ಕಚೇರಿಯ ಸೇವೆಯನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಈ ನಿಟ್ಟಿನಲ್ಲಿ ಕೋಟೆಕಾರು ಪಟ್ಟಣ ಪಂಚಾಯತ್ ಸರ್ವ ಸಹಕಾರ ನೀಡಲಿದೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಅಂಚೆ ಅಧಿಕ್ಷಕರಾದ ಎಂ ಸುಧಾಕರ ಮಲ್ಯ ಇವರು, ನೂತನ ಮಾಡೂರು ಶಾಖಾ ಅಂಚೆ ಕಚೇರಿಯಲ್ಲಿ ಲಭ್ಯವಾಗುವ ಅಂಚೆ ಸೇವೆಗಳ ಬಗ್ಗೆ ಮಾಹಿತಿ ನೀಡಿ ಮಾಡೂರಿನ ಜನತೆ ಅಂಚೆ ಉಳಿತಾಯ ಖಾತೆಗಳು, ಅಂಚೆ ಜೀವವಿಮೆ, ನಾಗರಿಕ ಕೇಂದ್ರಿತ ಸೇವೆಗಳು, ಆಧಾರ್ ಸೇವೆಗಳು, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೇವೆಗಳ ಸಂಪೂರ್ಣ ಉಪಯೋಗ ಪಡೆದುಕೊಳ್ಳಲು ಕರೆ ನೀಡಿದರು.
ಮುಖ್ಯ ಅತಿಥಿಗಳಾದ ಸುಜಿತ್ ಮಾಡೂರು ಸದಸ್ಯರು ಕೋಟೆಕಾರ್ ಪಟ್ಟಣ ಪಂಚಾಯತ್ ಮಾತನಾಡಿ, ಮಾಡೂರು ಶಾಖ ಅಂಚೆ ಕಚೇರಿ ಉದ್ಘಾಟನೆಗೊಳ್ಳಬೇಕಾದರೆ ಅದರ ಹಿಂದೆ ಸಹಕಾರ ನೀಡಿದ ಅಂಚೆ ಇಲಾಖೆಯನ್ನು ಮತ್ತು ನಳಿನ್ ಕುಮಾರ್ ಕಟೀಲ್ ಮಾಜಿ ಸಂಸದರು ಇವರ ಸಹಕಾರವನ್ನು ಸ್ಮರಿಸಿ, ಮುಂದೆ ಇದನ್ನು ಉಪ ಅಂಚೆ ಕಚೇರಿಯಾಗಿ ಮೇಲ್ದರ್ಜೆಗೇರಿಸುವರೇ ಊರವರ ಸಹಕಾರದಿಂದ ಪರಿಪೂರ್ಣ ಪ್ರಯತ್ನವನ್ನು ಮಾಡುತ್ತೇನೆ ಎಂದರು.

ಉದ್ಯಮಿ ಉದಯ್ ಕುಮಾರ್ ಉಪಸ್ಥಿತರಿದ್ದರು. ಉಪ ಅಂಚೆ ಅಧೀಕ್ಷಕರಾದ ಪಿ ದಿನೇಶ್ ಸ್ವಾಗತಿಸಿದರು. ಪ್ರದೀಪ್ ಭಂಡಾರಿ ಅಂಚೆ ನಿರೀಕ್ಷಕರು ವಂದಿಸಿದರು, ಸಿದ್ದರಾಮ ಪ್ರಾರ್ಥಿಸಿದರು. ದಯಾನಂದ ಕತ್ತಲ್ ಸಾರ್ ನಿರೂಪಿಸಿದರು.
