ಮನೆಗೊಂದು ಗೇರುಗಿಡ ಯೋಜನೆ:ನಿಗಮದ ಮಮತಾ ಡಿ.ಎಸ್ ಗಟ್ಟಿ ಹೇಳಿಕೆ
ಉಳ್ಳಾಲ: ಖಾಲಿಯಿರುವ ಗುಡ್ಡಪ್ರದೇಶಗಳನ್ನು ಉಪಯೋಗಿಸಿ ಗೇರು ಬೆಳೆ ಬೆಳೆಸುವ ಕಾರ್ಯಕ್ಕೆ ಮುಂದಾಗಿರಿ. ಕ್ಯಾಷ್ಯೂ ಕಾರ್ಖಾನೆಗಳು ಅನೇಕ ಇದ್ದರೂ ದೇಶಕ್ಕೆ ವಿದೇಶಗಳಿಂದ ಗೋಡಂಬಿ ಆಮದು ಮಾಡಲಾಗುತ್ತಿದೆ. ಶೀಘ್ರವೇ ಮನೆಗೊಂದು ಗೇರುಗಿಡ ಯೋಜನೆಯನ್ನು ನಿಗಮದಿಂದ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್ ಗಟ್ಟಿ ಹೇಳಿದರು.
ಅವರು ತೊಕ್ಕೊಟ್ಟುವಿನ ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ವತಿಯಿಂದ ಆಯೋಜಿಸಲಾದ ತಿಂಗಳ ಬೆಳಕು-ಗೌರವ ಅತಿಥಿ ಪತ್ರಕರ್ತರ ಜೊತೆಗಿನ ಸಂವಾದ ನಡೆಸಿ ಮಾತನಾಡಿದರು. 18 ವಿವಿಧ ರೀತಿಯ ಗೇರು ತಳಿಗಳಿದ್ದು , ಇದೊಂದು ವಾಣಿಜ್ಯ ಬೆಳೆಯಾಗಿರುವುದರಿಂದ ರೈತರಿಗೆ ನಷ್ಟ ಉಂಟಾಗಲಾರದು. ಉಳ್ಳಾಲದ ಗೇರು ಅಭಿವೃದ್ಧಿ ಸಂಶೋಧನಾ ಕೇಂದ್ರ, ಪಡೀಲ್, ಕೆರೆಬೈಲ್ , ಮೂಡಬಿದ್ರೆ ಸೇರಿದಂತೆ ಜಿಲ್ಲೆಯ ವಿವಿದೆಡೆ ನರ್ಸರಿಗಳಿದ್ದು ಗೇರುಗಿಡಗಳ ಲಭ್ಯವಿದೆ. ಗಿಡವೊಂದಕ್ಕೆ ರೂ.40 ರಿಂದ ರೂ.50 ಬೆಳೆಸಲು ತಗಲುವುದರಿಂದ ಸರಕಾರದ ವತಿಯಿಂದ ಉಚಿತ ನೀಡುವುದ ಕಷ್ಟ. ಆರೋಗ್ಯದ ದೃಷ್ಟಿಯಿಂದಲೂ ಗೇರುಹಣ್ಣು ಅತ್ಯಂತ ಹೆಚ್ಚು ಜೀವಸತ್ವಗಳನ್ನು ಹೊಂದಿರುವ ಹಣ್ಣಾಗಿದೆ. ಆದರೆ ಜನ ಗೇರುಬೀಜ ಮಾತ್ರ ತಿನ್ನುತ್ತಿದ್ದಾರೆ. ಅತಿ ಶೀಘ್ರದಲ್ಲಿ 8 ವಿಧಾನಸಭಾ ಕ್ಷೇತ್ರಗಳಲ್ಲಿಯೂ ರೈತರನ್ನು ಕರೆಸಿ, ಅಧಿಕಾರಿಗಳು, ವಿಜ್ಞಾನಿಗಳು ಸೇರಿದಂತೆ ಅನುಭವಿ ಸಂಪನ್ಮೂಲ ವ್ಯಕ್ತಿಗಳ ಸಮ್ಮುಖದಲ್ಲಿ ಮಾಹಿತಿ ನೀಡಿ ಗೇರು ಬೆಳೆ ಬೆಳೆಯಲು ಪ್ರೋತ್ಸಾಹಿಸಲಾಗುವುದು. ಉಳ್ಳಾಲ ತಾಲೂಕಿನಲ್ಲಿಯೂ ಬಹುದೊಡ್ಡ ಗೇರುಮೇಳ ನಡೆಸುವ ಉದ್ದೇಶವನ್ನು ಸ್ಪೀಕರ್ ವ್ಯಕ್ತಪಡಿಸಿದ್ದು, ಅವರ ಆಶಯದಂತೆ ಅದಕ್ಕೆ ಬೇಕಾದ ಎಲ್ಲಾ ಸಹಕಾರವನ್ನು ನಿಗಮದಿಂದ ನೀಡಲಾಗುವುದು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ನಿರ್ದೇಶಕ ಕೆ.ಟಿ.ಸುವರ್ಣ ಮಾತನಾಡಿ, ಉಳ್ಳಾಲದ ಪ್ರೆಸ್ ಕ್ಲಬ್ ತಂಡ ಸಕ್ರಿಯವಾಗಿ ಸಾಮಾಜಿಕರಂಗದಲ್ಲಿ ತೊಡಗಿಸಿಕೊಂಡಿದ್ದು, ಉತ್ತಮ ಭವಿಷ್ಯ ಹೊಂದಿದೆ. ಪತ್ರಕರ್ತರು ಉತ್ತಮ ವಿಚಾರಗಳನ್ನು ಜನರಿಗೆ ತಲುಪಿಸುವ ಮುಖೇನ ಜನರ ಪ್ರೀತಿ ಪಾತ್ರರಾಗಿದ್ದಾರೆ ಎಂದರು.
ಈ ಸಂದರ್ಭ ಇಬ್ಬರು ಅತಿಥಿಗಳಿಂದ ಉಳ್ಳಾಲ ಪ್ರೆಸ್ ಕ್ಲಬ್ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ವಸಂತ್ ಎನ್ ಕೊಣಾಜೆ ವಹಿಸಿದ್ದರು.
ಈ ಸಂದರ್ಭ ತಾ.ಪಂ ಮಾಜಿ ಸದಸ್ಯೆ ಸುರೇಖಾ ಚಂದ್ರಹಾಸ್, ಕಾಂಗ್ರೆಸ್ ಮಹಿಳಾ ಮಂಡಲ ಅಧ್ಯಕ್ಷೆ ಚಂದ್ರಿಕಾ ರೈ ಕೋಟೆಕಾರು, ಪತ್ರಕರ್ತರ ಸಂಘದ ಉಪಾಧ್ಯಕ್ಷ ಆರೀಫ್ ಕಲ್ಕಟ್ಟ, ಕೋಶಾಧಿಕಾರಿ ಬಶೀರ್ ಕಲ್ಕಟ್ಟ, , ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅನ್ಸಾರ್ ಇನೋಳಿ, ಉಳ್ಳಾಲ ತಾಲೂಕು ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಆಸೀಫ್ ಬಬ್ಬುಕಟ್ಟೆ, ಶಿವಶಂಕರ್ , ರಜನಿಕಾಂತ್, ಪತ್ರಕರ್ತರಾದ ಸತೀಶ್ ಕುಮಾರ್ ಪುಂಡಿಕಾಯಿ, ಅಶ್ವಿನ್ ಕುತ್ತಾರ್, ಗಂಗಾಧರ್, ಸುಶ್ಮಿತಾ ಉಪಸ್ಥಿತರಿದ್ದರು.
ಕಾರ್ಯದರ್ಶಿಗಳಾದ ಸತೀಶ್ ಕೊಣಾಜೆ ಹಾಗೂ ವಜ್ರ ಗುಜರನ್ ಅತಿಥಿಗಳನ್ನು ಪರಿಚಯಿಸಿದರು. ಉಪಾಧ್ಯಕ್ಷ ದಿನೇಶ್ ನಾಯಕ್ ಸ್ವಾಗತಿಸಿದರು. ಪ್ರ.ಕಾ ಶಶಿಧರ್ ಪೊಯ್ಯತ್ತಬೈಲ್ ನಿರೂಪಿಸಿದರು. ಜಿಲ್ಲಾ ಸಂಘದ ಸದಸ್ಯ ಮೋಹನ್ ಕುತ್ತಾರ್ ವಂದಿಸಿದರು.