ಮಂಗಳೂರು : ತುಳು, ಕನ್ನಡ ವಿದ್ವಾಂಸ ಡಾ. ವಾಮನ ನಂದಾವರ ವಿಧಿವಶ

ಹಿರಿಯ ವಿದ್ವಾಂಸ ಡಾ.ವಾಮನ ನಂದಾವರ (81) ಅವರು ಮಾ.15ರ ಶನಿವಾರ ನಿಧನ ಹೊಂದಿದ್ದಾರೆ. ಅವರು ಕಳೆದ ಕೆಲ ವರ್ಷಗಳಿಂದ ಅನಾರೋಗ್ಯಪೀಡಿತರಾಗಿದ್ದರು.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರ ಗ್ರಾಮದ ಇವರು ಕನ್ನಡ ಹಾಗೂ ತುಳು ಭಾಷಾ ವಿದ್ವಾಂಸ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾಗಿದ್ದರು. ಹೆಸರಾಂತ ಜಾನಪದ ವಿದ್ವಾಂಸರಾಗಿದ್ದರು. ಹೇಮಾಂಶು ಪ್ರಕಾಶನದ ಮೂಲಕ ಅನೇಕ ಬರಹಗಾರರನ್ನು, ಕಲಾವಿದರನ್ನು ರೂಪಿಸಿದ ಇವರು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.
ಡಾ.ವಾಮನ ನಂದಾವರ ಅವರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ವ್ಯಾಸಂಗ, ಮಂಗಳೂರು ಸರಕಾರಿ ಮಹಾವಿದ್ಯಾಲಯದಲ್ಲಿ ಬಿಎಡ್, ಕರ್ನಾಟಕ ವಿವಿಯಿಂದ ಎಂ.ಎ ಕನ್ನಡ ಪದವಿ ಗಳಿಸಿ, ಕೋಟಿ ಚನ್ನಯ ಜಾನಪದೀಯ ಅಧ್ಯಯನ ಮಹಾಪ್ರಬಂಧಕ್ಕೆ ಪಿಎಚ್ಡಿ ಪದವಿ ಪಡೆದಿದ್ದರು.
