ಮೂಡುಬಿದಿರೆ: ಅಪಘಾತಕ್ಕೊಳಗಾಗಿದ್ದ ವ್ಯಕ್ತಿ ಸಾವು

ಮೂಡುಬಿದಿರೆ: ಕಳೆದ ಭಾನುವಾರದಂದು ವಾಲ್ಪಾಡಿಯಲ್ಲಿ ಅಪಘಾತಕ್ಕೊಳಗಾಗಿದ್ದ ವ್ಯಕ್ತಿಯು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಂಜೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ವಾಲ್ಪಾಡಿಯಲ್ಲಿ ಭಾನುವಾರ ಆಕ್ಟಿವಾ-ರಿಕ್ಷಾ ಮಧ್ಯೆ ಅಪಘಾತವಾಗಿದ್ದು ಇದರಲ್ಲಿ ಆಕ್ಟೀವಾ ಚಾಲಕ ವಾಲ್ಪಾಡಿ ನಿವಾಸಿ ಲೂವಿಸ್ ಡಿಕೋಸ್ತ (52)ಅವರು ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಲೂವಿಸ್ ಅವರು ವಾಲ್ಪಾಡಿಯಲ್ಲಿ ಅಂಗಡಿ ನಡೆಸುತ್ತಿದ್ದು ಭಾನುವಾರ ಮಧ್ಯಾಹ್ನದ ವೇಳೆಗೆ ಕೋಳಿಯೊಂದನ್ನು ಹಿಡಿದುಕೊಂಡು ಅದನ್ನು ಮಾಂಸ ಮಾಡಿಸಲೆಂದು ಶಿರ್ತಾಡಿ ಕಡೆ ತನ್ನ ಆಕ್ಟಿವಾದಲ್ಲಿ ಹೊರಟಿದ್ದರು.
ವಾಲ್ಪಾಡಿ ದೇವಸ್ಥಾನದ ಎದುರು ರಿಕ್ಷಾ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ರಸ್ತೆಗೆಸೆಯಲ್ಪಟ್ಟಿದ್ದ ಅವರನ್ನು ಸ್ಥಳೀಯರು ಮೂಡುಬಿದಿರೆ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿಂದ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಂಜೆ ಮೃತಪಟ್ಟಿದ್ದಾರೆ.
ಢಿಕ್ಕಿ ಹೊಡೆದ ರಿಕ್ಷಾ ನಿಲ್ಲಿಸದೆ ಪರಾರಿಯಾಗಿದ್ದು ಮೂಡುಬಿದಿರೆ ಪೊಲೀಸರು ಆ ರಿಕ್ಷಾ ಯಾರದ್ದೆಂದು ತನಿಖೆ ನಡೆಸುತ್ತಿದ್ದಾರೆ.
ಲೂವಿಸ್ ಅವರು ಕೆಲ ವರ್ಷ ವಿದೇಶದಲ್ಲಿದ್ದು ಊರಿಗೆ ಬಂದು ಅಂಗಡಿ ಮಾಡಿಕೊಂಡಿದ್ದರು. ಅವರ ಪತ್ನಿ ಜ್ಯೋತಿ ಅವರು ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು.
ತಂದೆ, ತಾಯಿ, ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಲೂವಿಸ್ ಅವರು ಅಗಲಿದ್ದಾರೆ.

govt women polytechnic

Related Posts

Leave a Reply

Your email address will not be published.