ಮೂಡುಬಿದಿರೆ: 25 ಗೂಡಂಗಡಿಗಳಿಂದ ಕಳವು ಗೈದ ಆರೋಪಿಗಳನ್ನು ಬಂಧಿಸಿದ ಮೂಡುಬಿದಿರೆ ಪೊಲೀಸರು

ಮೂಡುಬಿದಿರೆ: ಕಳೆದ 3 ವರುಷಗಳಿಂದ ವಿವಿಧ ಕಡೆಗಳಲ್ಲಿರುವ 25 ಗೂಡಂಗಡಿಗಳಿಂದ ಅಂದಾಜು 3,55,000/- ಮೌಲ್ಯದ ವಸ್ತುಗಳನ್ನು ಕಳವುಗೈದಿರುವ ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.

ನಿಡ್ಡೋಡಿಯ ನೀರುಡೆ ನಿವಾಸಿ ರೋಶನ್ ವಿಲ್ಸನ್ ಕ್ವಾಡ್ರಸ್, ಕೊಂಪದವು ನೆಲ್ಲಿ ತೀರ್ಥದ ನಿವಾಸಿ ನಿಶಾಂಕ್ ಪೂಜಾರಿ, ತೆಂಕು ಎಕ್ಕಾರು ಗ್ರಾಮದ ನಿವಾಸಿ ರೋಹಿತ್ ಮಸ್ಕರೇನಸ್ ಬಂಧಿತ ಕಳ್ಳರು.

ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತಿಗೆ ಗ್ರಾಮದ ಮುಲ್ಕಿ ಕ್ರಾಸ್ ಬಳಿಯ ಜಯಶ್ರೀ ಸ್ಟೋರ್ ಎಂಬ ಗೂಡಂಗಡಿಯಲಿ ಈ ವಷ೯ ಜ.9ರಂದು ರಾತ್ರಿ ಗೂಡಂಗಡಿಯ ಮೇಲ್ಪಾವಣಿಯ ಶೀಟನ್ನು ತೆಗೆದು, ಬೀಗವನ್ನು ಒಡೆದು ಅಂಗಡಿಯಲ್ಲಿ ಸುಮಾರು 20000 ರೂ ನಗದು ಮತ್ತು ಸುಮಾರು 48000 ರೂ ಮೌಲಾದ ಸಿಗರೇಟು, ತಿಂಡಿ, ನೀರು ಬಾಟಲ್, ಕೋಲ್ಡ್ ಡ್ರಿಂಕ್ಸ್, ಚಾಕೊಲೀಟ್, ಮಿಕ್ಸರ್, ಬಿಸ್ಕೆಟ್ ಇತ್ಯಾದಿ ವಸ್ತುಗಳನ್ನು ಕಳ್ಳರು ಕಳವುಗೈದಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಅವರ ಮಾರ್ಗದರ್ಶನದಂತೆ ಡಿಸಿಪಿ ಸಿದ್ದಾರ್ಥ ಗೊಯಲ್ (ಕಾ&ಸು), ಡಿಸಿಪಿ ರವಿಶಂಕರ್ (G & ಸಂ) ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಶ್ರೀಕಾಂತ್ ಕೆ ರವರ ನಿರ್ದೇಶನದಂತೆ ಮೂಡುಬಿದಿರೆ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ನೇತೃತ್ವದ ತಂಡವು ಕಾಯ೯ಚರಣಿ ಆರಂಭಿಸಿ ಮೂವರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.
ತನಿಖೆ ವೇಳೆ ಮುಲ್ಕಿ ಪಟ್ಟೆ, ಕಾರ್ಕಳ ಮತ್ತು ವೇಣೂರು ಠಾಣಾ ವ್ಯಾಪ್ತಿಯಲ್ಲಿ ಸುಮಾರು 3 ವರ್ಷಗಳಿಂದ 25 ಕ್ಕೂ ಹೆಚ್ಚು ಗೂಡಂಗಡಿಗಳ ವಸ್ತುಗಳನ್ನು ಕಳವು ಮಾಡಿರುವ ಬಗ್ಗೆ ತಿಳಿದು ಬಂದಿದೆ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಹುಂಡೈ ಕಂಪನೀಯ xcent ಕಾರು ಮತ್ತು ಅಕ್ಟಿವ್ ಸ್ಕೂಟರ್ ಮತ್ತು 5000 ಹಣವನ್ನು ಸ್ವಾಧೀನ ಪಡಿಸಿಕೊಂಡಿದ್ದು, ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಮೌಲ್ಯ ಮೂರು ಲಕ್ಷದ ಐವತ್ತೈದು ಸಾವಿರ ಆಗಿರುತ್ತದೆ.

ಈ ಪ್ರಕರಣದಲ್ಲಿ ಪಿಎಸೈ ಗಳಾದ ನವೀನ್, ರಾಜೇಶ್, ಠಾಣಾ ಅಪರಾಧ ವಿಭಾಗದ ಸಿಬ್ಬಂಧಿಯವರಾದ ಮೊಹಮ್ಮದ್ ಇಕ್ರಾಲ್, ಮೊಹಮ್ಮದ್ ಹುಸೈನ್ ಆಕೀಲ್ ಅಹಮ್ಮದ್, ನಾಗರಾಜ್, ಪ್ರದೀಪ್, ವೆಂಕಟೇಶ್, ಸತೀಶ್ ಮತ್ತು ರಾಜೇಶ್ ಅವರು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

Related Posts

Leave a Reply

Your email address will not be published.