ಪರಿಸರಕ್ಕಾಗಿ ನಾವು ವತಿಯಿಂದ ಜಿಲ್ಲಾಧಿಕಾರಿಗೆ ಮನವಿ

ಈ ವರ್ಷದ ಬೇಸಿಗೆಯಲ್ಲಿ, ಹವಾಮಾನ ವೈಪ್ಯರೀತ್ಯ ಮತ್ತು ಭೂ ಬಿಸಿಯ ಬಿಸಿಯನ್ನು ನಾವೆಲ್ಲರೂ ಅನುಭವಿಸಿದ್ದೇವೆ. ಕರ್ನಾಟಕದಾದ್ಯಂತ ನೀರಿನ ಬವಣೆಯನ್ನು ಕಂಡಿದ್ದೇವೆ.
ಸಾರ್ವಜನಿಕರ ಸಹಕಾರ ಮತ್ತು ಸರ್ಕಾರದ ಆಡಳಿತ ಯಂತ್ರದಿಂದ ಮಾತ್ರ ಸರಕಾರ ಹಮ್ಮಿಕೊಂಡ ಪರಿಹಾರ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಾಗುತ್ತದೆ.
ಸದ್ಯದಲ್ಲೇ ಚುನಾವಣೆಗಳು ಮುಕ್ತಾಯವಾಗಿ, ಜೂನ್ ನಾಲ್ಕರಂದು ಮತ ಎಣಿಕೆಯಾಗಿ, ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ಬೆಂಬಲಿಗರು ತಮ್ಮ ಹರ್ಷೋದ್ಗಾರವನ್ನು ವ್ಯಕ್ತಪಡಿಸುವುದು ಸಹಜ. ಈ ಸಂದರ್ಭದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸುವುದು ರೂಢಿಯಾಗಿದೆ. ಆದರೆ, ಪಟಾಕಿಯಲ್ಲಿರುವ ಸಿಡಿಮದ್ದುಗಳು, ಕಾರ್ಬನ್ ಮಾನಾಕ್ಸೈಡ್ ಮತ್ತು ಸಲ್ಫರ್ ಡೈ ಆಕ್ಸೈಡ್ ನಂತಹ ಅನೇಕ ವಿಷರಾಸಾಯನಿಕಗಳನ್ನು ಹೊರಸೂಸುತ್ತವೆ. ಇವು ಮಾನವರಿಗೆ ಹಾನಿಕಾರಕವಷ್ಟೇ ಅಲ್ಲ, ಪರಿಸರ ಹಾಗೂ ಶಬ್ದ ಮಾಲಿನ್ಯಕ್ಕೂ ಕಾರಣವಾಗುತ್ತವೆ. ಹಾಗಾಗಿ ಈ ಸಂದರ್ಭಗಳಲ್ಲಿ ನಾವು ಪಟಾಕಿ ಸಿಡಿಸದೇ ಸಂಭ್ರಮಿಸುವುದು ಉತ್ತಮ ವಿಧಾನ.
ಈ ಸಂಬಂಧದಲ್ಲಿ, ಪಟಾಕಿಯನ್ನು ಸಿಡಿಸುವುದರಿಂದ ಉಂಟಾಗುವ ಪರಿಸರ ಮತ್ತು ಶಬ್ದ ಮಾಲಿನ್ಯವನ್ನು ತಡೆಗಟ್ಟುವುದು ಅಗತ್ಯವೆಂದು, ನ್ಯಾಯಮೂರ್ತಿ ಶ್ರೀ ಬೋಪಣ್ಣನವರನ್ನು ಒಳಗೊಂಡ ಸುಪ್ರೀಮ್ ಕೋರ್ಟಿನ ನ್ಯಾಯಪೀಠ, ನವೆಂಬರ್ , ೨೦೨೩ ರಲ್ಲಿ ತೀರ್ಪು ನೀಡಿದೆ.
ಈ ಹಿನ್ನೆಲೆಯಲ್ಲಿ, ಈ ಬಾರಿಯ ಚುನಾವಣಾ ಫಲಿತಾಂಶದ ಸಂಭ್ರಮವನ್ನು, ಸಂಬಂಧಪಟ್ಟವರು ಪಟಾಕಿಗಳನ್ನು ಸಿಡಿಸದೇ ಆಚರಿಸುವಂತೆ ಮಾಡಲು, ತಾವು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು, ನಾವು ತಮ್ಮಲ್ಲಿ ವಿನಂತಿಸುತ್ತಿದ್ದೇವೆ.
ಬದಲಾಗಿ, ಜೂನ್ ಐದು “ವಿಶ್ವ ಪರಿಸರ” ದಿನವಾದ್ದರಿಂದ ಅಭ್ಯರ್ಥಿಗಳು, ಚುನಾವಣೆಯ ತಮ್ಮ ಗೆಲುವನ್ನು , ಅವರ ಕ್ಷೇತ್ರದಲ್ಲಿ ಯೋಗ್ಯ ಮರವಾಗಬಲ್ಲ ಐದು ಸಸಿಗಳನ್ನು ನೆಟ್ಟು ಪೋಷಿಸುವುದರ ಮೂಲಕ ತಮ್ಮ ಸಂಭ್ರಮ ಹಂಚಿಕೊಳ್ಳಲಿ ಹಾಗೂ ಪರಿಸರ ಸಂರಕ್ಷಣೆಗೆ ಕೂಡ ನಾಂದಿ ಹಾಡಬಹುದು ಎಂದು ಜಿಲ್ಲಾಧೀಕಾರಿಗಳಿಗೆ,ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಪರಿಸರಕ್ಕಾಗಿ ನಾವು ವತಿಯಿಂದ ಪತ್ರದ ಮೂಲಕ ಮನವಿಯನ್ನು ಮಾಡಿದ್ದಾರೆ.
