ಸುರತ್ಕಲ್ನ ಸಸಿಹಿತ್ಲು ಬೀಚ್ನಲ್ಲಿ ರಾಷ್ಟ್ರೀಯ ಓಪನ್ ಸರ್ಫಿಂಗ್ ಸ್ಪರ್ಧೆ

ಸುರತ್ಕಲ್ ಸಮೀಪದ ಸಸಿಹಿತ್ಲು ಬೀಚ್ನಲ್ಲಿ ನಡೆದ ರಾಷ್ಟ್ರೀಯ ಓಪನ್ ಸರ್ಫಿಂಗ್ ಚಾಂಪಿಯನ್ಷಿಪ್ನ ಮಹಿಳೆಯರ ಮತ್ತು ಬಾಲಕಿಯರ ವಿಭಾಗದ ಚಾಂಪಿಯನ್ ಪಟ್ಟ ತಮಿಳುನಾಡಿನ ಕಮಲಿಮೂರ್ತಿ ತಮ್ಮದಾಗಿಸಿಕೊಂಡರು.
ಮಂತ್ರ ಸರ್ಫಿಂಗ್ ಕ್ಲಬ್ ಮತ್ತು ಸರ್ಫಿಂಗ್ ಸ್ವಾಮಿ ಫೌಂಡೇಷನ್ ಆಶ್ರಯದಲ್ಲಿ ಭಾರತ ಸರ್ಫಿಂಗ್ ಫೆಡರೇಷನ್ ಆಯೋಜಿಸಿದ್ದ ಚಾಂಪಿಯನ್ಷಿಪ್ನ ಪುರುಷರ ವಿಭಾಗದಲ್ಲಿ ಸುರತ್ಕಲ್ನ ಸಸಿಹಿತ್ಲು ಬೀಚ್ನಲ್ಲಿ ರಾಷ್ಟ್ರೀಯ ಓಪನ್ ಸರ್ಫಿಂಗ್ ಸ್ಪರ್ಧೆ ಸರ್ಫರ್ ತಮಿಳುನಾಡಿನ ಅಜೀಶ್ ಅಲಿ ಮತ್ತು ಬಾಲಕರ ವಿಭಾಗದಲ್ಲಿ ತಯಿನ್ ಅರುಣ್ ಪ್ರಶಸ್ತಿ ಗೆದ್ದುಕೊಂಡರು. ತಯಿನ್ ಕೂಡ ತಮಿಳುನಾಡು ಕ್ರೀಡಾಪಟು. ಕಮಲಿ ಮೂರ್ತಿ ಕಳೆದ ಬಾರಿಯೂ ಮಹಿಳೆಯರ ಮತ್ತು ಬಾಲಕಿಯರ ವಿಭಾಗದ ಚಾಂಪಿಯನ್ ಎನಿಸಿಕೊಂಡಿದ್ದರು.

ಮಹಿಳೆಯರ ಫೈನಲ್ನಲ್ಲಿ ಒಟ್ಟು ಏಳು ಅಲೆಗಳನ್ನು ಎದುರಿಸಿದ ಕಮಲಿ ಎರಡರಲ್ಲಿ ಯಶಸ್ಸು ಕಂಡರು. ಮೊದಲ ಯಶಸ್ವಿ ಅಲೆಯನ್ನು ದಾಟಿ 6 ಸ್ಕೋರು ಕಲೆ ಹಾಕಿದ ಅವರು ಮತ್ತೊಂದರಲ್ಲಿ 6.40ರ ಸಾಧನೆ ಮಾಡಿದರು. ಅವರಿಗೆ ಭಾರಿ ಪೈಪೋಟಿ ನೀಡಿದ, 2022ರ ಚಾಂಪಿಯನ್ ಗೋವಾದ ಸುಗರ್ ಶಾಂತಿ ಬನಾರಸಿ, ಮೊದಲ ಯಶಸ್ಸಿನಲ್ಲಿ ಎಂಟು ಪಾಯಿಂಟ್ ಗಳಿಸಿ ಭರವಸೆ ಮೂಡಿಸಿದ್ದರು. ಮತ್ತೊಂದರಲ್ಲಿ 4.23 ಸ್ಕೋರು ಗಳಿಸಿ 0.17 ಅಂತರದ ಹಿನ್ನಡೆಯೊಂದಿಗೆ ರನ್ನರ್ ಅಪ್ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು. ಕೇವಲ 2.97 ಸ್ಕೋರು ಗಳಿಸಿದ ಮುಂಬೈಯ ನೇಹಾ ವೈದ್ ಮೂರನೇ ಸ್ಥಾನ ಗಳಿಸಿದರು.

ಮೂವರು ಕಣದಲ್ಲಿದ್ದ ಬಾಲಕಿಯರ ವಿಭಾಗದ ಫೈನಲ್ನಲ್ಲಿ ಕಮಲಿ ಸುಲಭವಾಗಿ ಜಯ ಗಳಿಸಿದರು. ಗರಿಷ್ಠ 7.17 ಸ್ಕೋರ್ನೊಂದಿಗೆ ಒಟ್ಟು 12.17ರ ಸಾಧನೆ ಮಾಡಿದ ಅವರು ಪ್ರತಿಸ್ಪರ್ಧಿ ದಮಯಂತಿ ಶ್ರೀರಾಮ್ ಅವರನ್ನು 6.24ರ ಅಂತರದಲ್ಲಿ ಮಣಿಸಿದರು.
ತಮಿಳುನಾಡಿನ ನಾಲ್ವರ ಜಿದ್ದಾಜಿದ್ದಿಗೆ ಸಾಕ್ಷಿಯಾದ ಪುರುಷರ ವಿಭಾಗದ ಫೈನಲ್ನಲ್ಲಿ ಅಜೀಶ್ ಅಲಿ ನಾಲ್ಕನೇ ಅಲೆಯಲ್ಲಿ 7.40 ಸ್ಕೋರು ಗಳಿಸಿ ಸಂಭ್ರಮಿಸಿದರು. ಎಲ್ ಸಾಲ್ವಡೋರ್ನಲ್ಲಿ ನಡೆದ ಒಲಿಂಪಿಕ್ಸ್ ಅರ್ಹತಾ ಸ್ಪರ್ಧೆಯಲ್ಲಿ ಪಾಲ್ಗೊಂಡ ಉತ್ಸಾಹದಲ್ಲಿದ್ದ ಅಜೀಶ್ ಒಟ್ಟಾರೆ 14.70 ಸ್ಕೋರುಗಳ ಸಾಧನೆ ಮಾಡಿದರೆ ಶ್ರೀಕಾಂತ್ ಗರಿಷ್ಠ 7.07 ಸೇರಿದಂತೆ ಒಟ್ಟು 12.57 ಸ್ಕೋರು ಗಳಿಸಿ ರನ್ನರ್ ಅಪ್ ಆದರು. ಹರೀಶ್ ಪಿ ಎದುರು 1.77ರ ಮುನ್ನಡೆಯೊಂದಿಗೆ ಚಾಂಪಿಯನ್ ಆದ ತಯಿನ್ ಅರುಣ್, ಓಪನ್ ಸರ್ಫಿಂಗ್ನ ಮೊದಲ ಪ್ರಶಸ್ತಿಯೊಂದಿಗೆ ಸಂಭ್ರಮಿಸಿದರು. ಹರೀಶ್ಗೆ ಪ್ರಬಲ ಪೈಪೋಟಿ ನೀಡಿದ ಪ್ರಹ್ಲಾದ್ ಶ್ರೀರಾಮ್ ಮೂರನೇ ಸ್ಥಾನ ಗಳಿಸಿದರೆ, ಕರ್ನಾಟಕದ ಪ್ರದೀಪ್ ಪೂಜಾರ್ ನಾಲ್ಕನೇ ಸ್ಥಾನ ಗಳಿಸಿದರು.
