ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನದಲ್ಲಿ ಉಜಿರೆಯ ಐಚ್ಛಿಕ ಕನ್ನಡ ವಿದ್ಯಾರ್ಥಿಗಳು

ಉಜಿರೆ ಶ್ರೀಧ ಮಂ ಕಾಲೇಜಿನ ಐಚ್ಛಿಕ ಕನ್ನಡ ವಿದ್ಯಾರ್ಥಿಗಳು ಶ್ರೀ ಧರ್ಮಸ್ಥಳ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನಕ್ಕೆ ಶನಿವಾರ ಭೇಟಿ ನೀಡಿ ಪುರಾತನ ಸಾಹಿತ್ಯದ ಪರಿಕರಗಳನ್ನು ವೀಕ್ಷಿಸಿದರು.
ಸ್ವತಃ ಕೈಯಲ್ಲಿ ಮುದ್ರಿಸಲಾದ ಹಾಳೆಗಳಲ್ಲಿ ಚಿನ್ನದ ಮಿಶ್ರಣವನ್ನು ಸೇರಿಸಿ ಬರೆಯಲಾದ ಲಿಪಿಗಳನ್ನು ಹಾಗೂ ಹಿಂದಿನ ತಾಳೆಗರಿಗಳು, ಪುಸ್ತಕಗಳು ಹಾಗೂ ಲಿಪಿಗಳನ್ನು ಸಂಗ್ರಹಿಸಿ ಸಂರಕ್ಷಿಸುವ ವಿಧಾನವನ್ನು ವಿದ್ಯಾರ್ಥಿಗಳು ತಿಳಿದುಕೊಂಡರು.

ಧರ್ಮಸ್ಥಳ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದ ನಿರ್ದೇಶಕ ಡಾ. ವಿಘ್ನರಾಜ್ ವಿದ್ಯಾರ್ಥಿಗಳಿಗೆ ಭಾರತೀಯ ಲಿಪಿಗಳ ವಂಶವೃಕ್ಷದ ವಿವರಣೆಯನ್ನು ನೀಡುತ್ತಾ, ಬ್ರಾಹ್ಮೀ ,ಖರೋಷ್ಠಿ ,ಶಾರದಾ, ಅಸ್ಸಾಮಿ , ದೇವನಾಗರಿ, ಪಂಜಾಬಿ, ತುಳು, ಕನ್ನಡ ಹಾಗೂ ಇತರ ಲಿಪಿಗಳ ಹುಟ್ಟಿನ ಬಗ್ಗೆ ವಿವರಣೆ ನೀಡಿದರು.
ಶಿವರಾಮ ಕಾರಂತರ, ಗೋವಿಂದ ಪೈಗಳ ಹಸ್ತಾಕ್ಷರದಿಂದ ಬರೆದ ಕಾವ್ಯದ ಪ್ರತಿ ,ಪ್ರಾಚೀನ ಕವಿಗಳಾದ ಕುಮಾರವ್ಯಾಸ, ರತ್ನಾಕರವರ್ಣಿಯವರ ಕಾವ್ಯಗಳು, ಆಯುರ್ವೇದದ ಕುರಿತಾದ ಸುಮಾರು 350 ರಷ್ಟು ತಾಳೆಗರಿಯ ಕಟ್ಟುಗಳು, ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯದ ಹಳೆಯ ಕಡತಗಳನ್ನೆಲ್ಲ ವಿದ್ಯಾರ್ಥಿಗಳಿಗೆ ತೋರಿಸಿಕೊಟ್ಟರು.
ಸಂಶೋಧನಾ ಪ್ರತಿಷ್ಠಾನದ ಸಿಬ್ಬಂದಿ ಡಾ.ಪವನ್ ಭಟ್, ಲಿಂಗಪ್ಪ ಗೌಡ, ಮಮತಾ, ಪೂಜಾ ಮಾಹಿತಿ ನೀಡಿದರು.

ನಂತರ ಡಾ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಲಾಯಿತು. ಸಂಶೋಧನಾ ಪ್ರತಿಷ್ಠಾನದಲ್ಲಿ ವಿದ್ಯಾರ್ಥಿಗಳು ಮೆಚ್ಚಿದ ಪುಸ್ತಕಗಳನ್ನು ಕಾಲೇಜಿನ ಗ್ರಂಥಾಲಯದಲ್ಲಿ ಒದಗಿಸಿಕೊಡುವಂತೆ ಹೆಗ್ಗಡೆಯವರು ಸಂಬಂಧಿಸಿದವರಲ್ಲಿ ತಿಳಿಸಿ ಶುಭ ಹಾರೈಸಿದರು. ಪ್ರಾಧ್ಯಾಪಕರು ಡಾ. ದಿವಾಕರ್ ಕೊಕ್ಕಡ, ನವನೀತ್ ಕುಮಾರ್ ಹಾಗೂ ಮಹೇಶ್ ಭಾಗವಹಿಸಿದರು.