ಮಹಾ ಕುಂಭಮೇಳದಲ್ಲಿ ಕನ್ನಡಿಗರ ಪಾತ್ರ – ಪ್ರಮುಖ ದ್ವಾರಗಳಿಗೆ ಲೆಕ್ಸಾ ದೀಪಾಲಂಕಾರ

ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದ್ದು, ಪುಣ್ಯಭೂಮಿಗೆ ಪ್ರವೇಶಿಸುವ ಮುಖ್ಯದ್ವಾರಗಳಾದ ಗಂಗಾ ದ್ವಾರ, ಯಮುನಾ ದ್ವಾರ ಹಾಗೂ ಸರಸ್ವತಿ ದ್ವಾರಗಳಿಗೆ ದೀಪಾಲಂಕಾರ ಮಾಡುವ ಸದಾವಕಾಶ ದೇಶಾದ್ಯಂತ ದೀಪಾಲಂಕಾರದ ಮೂಲಕವೇ ಹೆಸರುವಾಸಿಯಾದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಲೆಕ್ಸಾ ಲೈಟಿಂಗ್ ಸಂಸ್ಥೆಗೆ ದೊರೆತಿದೆ.

ಪ್ರಸ್ತುತ ಪ್ರಯಾಗರಾಜ್ ದಲ್ಲಿ ಪ್ರಾರಂಭಗೊಂಡಿರುವುದು 12 ವರ್ಷಕ್ಕೊಮ್ಮೆ ನಡೆಯೋ ಕುಂಭಮೇಳವಲ್ಲ, ಶತಮಾನಗಳಿಗೊಮ್ಮೆ ಘಟಿಸೋ ದಿವ್ಯಾದ್ಭುತ ಪುಣ್ಯಸ್ನಾನದ ಮಹಾಕುಂಭಮೇಳ. ಜನವರಿ 13ರ ಪುಷ್ಯ ಹುಣ್ಣಿಮೆಯಂದು ಇಂತಾದ್ದೊಂದು ಮಹಾ ಅದ್ಭುತ ಬರೋಬ್ಬರಿ 144 ವರ್ಷಗಳ ನಂತರ ಚಾಲನೆ ದೊರೆತಿದೆ.

ಈ ಪರಮ ಪಾವನ ಪುಣ್ಯಭೂಮಿಗೆ ಪ್ರವೇಶಿಸುವ ಪ್ರಮುಖ ದ್ವಾರಗಳಾದ ಗಂಗಾ ದ್ವಾರ, ಯಮುನಾ ದ್ವಾರ ಹಾಗೂ ಸರಸ್ವತಿ ದ್ವಾರಗಳಿಗೆ ದೀಪಾಲಂಕಾರ ಮಾಡುವ ಸದವಕಾಶ ಮೂಡಬಿದ್ರೆಯ ಲೆಕ್ಸಾ ಲೈಟಿಂಗ್ ಸಂಸ್ಥೆಗೆ ದೊರೆತಿರುವುದು ಹೆಮ್ಮೆಯ ವಿಚಾರ.
ಈ ಹಿಂದೆ ಅಯೋಧ್ಯೆ, ಬೆಳಗಾವಿಯ ಸುವರ್ಣ ವಿಧಾನಸೌಧ, ಬಿರ್ಲಾ ಮಂದಿರ, ಧರ್ಮಪುರದ ಜಿನ್ ಮಂದಿರ ಹಾಗೂ ಇನ್ನೂ ನೂರಾರು ಪ್ರೇಕ್ಷಣೀಯ ಸ್ಥಳಗಳಲ್ಲಿ ಶಾಶ್ವತ ದೀಪಾಲಂಕಾರದ ಮೂಲಕ ತನ್ನ ಕೈಚಳಕ ತೋರಿಸಿ ಜನಮನ್ನಣೆಗೆ ಪಾತ್ರವಾದ ಲೆಕ್ಸಾ ಲೈಟಿಂಗ್ ಸಂಸ್ಥೆಯ ಹಿರಿಮೆಗೆ ಪ್ರಸ್ತುತ ಪ್ರಯಾಗ್ ರಾಜ್ ನಲ್ಲೂ ದೀಪಾಲಂಕಾರದ ಅವಕಾಶ ದೊರಕಿರುವುದು ನಮ್ಮ ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆಯ ವಿಚಾರ.
