ಉಡುಪಿ : ಭಯದ ವಾತಾವರಣ ಸೃಷ್ಟಿಸಿದ ಮಾನಸಿಕ ಅಸ್ವಸ್ಥ ಚಿಕಿತ್ಸೆಗೆ ದಾಖಲು.

ಉಡುಪಿ ಆ.7, ಉಡುಪಿ ನಗರದ ಪುತ್ತೂರಿನಲ್ಲಿ ಕಳೆದ ಎರಡು ದಿನಗಳಿಂದ ಸಾರ್ವಜನಿಕರ ಮನೆಗಳಿಗೆ ರಾತ್ರಿ ಹೊತ್ತು ಪ್ರವೇಶ ಮಾಡಲು ಪ್ರಯತ್ನಿಸುವ ಹಾಗೂ ಭಯದ ವಾತಾವರಣ ಸೃಷ್ಟಿಸಿದ ಮಾನಸಿಕ ಯುವಕನನ್ನು ವಿಶು ಶೆಟ್ಟಿ ವಶಕ್ಕೆ ಪಡೆದು ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ ಘಟನೆ ಆ.7ರ ರಾತ್ರಿ ನಡೆದಿದೆ. ರಕ್ಷಣಾ ಕಾರ್ಯದಲ್ಲಿ ಪುತ್ತೂರಿನ ತೌಫಿಕ್ ಸಹಕರಿಸಿದ್ದಾರೆ.
ಯುವಕನು ತನ್ನ ಹೆಸರು ಬಸವನ್ ತಂದೆ ನಂಜುಂಡ ತಾಯಿ ರುದ್ರಮ್ಮ ಹಾಗೂ ಮನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಮಲ್ಲೇಶ್ವರಂ ಎಂದು ಮಾಹಿತಿ ನೀಡಿದ್ದಾನೆ. ಮೊದಲು ಈತನ ಚಲನ ವಲನ ಗಮನಿಸಿದ ಸ್ಥಳೀಯರು ಕಳ್ಳನೆಂದು ಭಾವಿಸಿದ್ದರು. ಮೇಲ್ನೋಟಕ್ಕೆ ಯುವಕ ವಿದ್ಯಾವಂತನಾಗಿರುವುದು ಗೋಚರಿಸುತ್ತದೆ. ಇಂಗ್ಲಿಷ್ ಹಾಗೂ ಕನ್ನಡ ಮಾತನಾಡುತ್ತಾನೆ. ಇಂಜಿನಿಯರಿಂಗ್ ವಿಷಯದ ಬಗ್ಗೆ ಚರ್ಚಿಸುತ್ತಾನೆ.
ನಗರ ಠಾಣೆಗೆ ಮಾಹಿತಿ ನೀಡಲಾಗಿದೆ. ಸಂಬಂಧಪಟ್ಟವರು ನಗರ ಠಾಣೆ ಅಥವಾ ಬಾಳಿಗಾ ಆಸ್ಪತ್ರೆ ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.
