ದೂರದೃಷ್ಟಿಗೆ ಇನ್ನೊಂದು ಹೆಸರು ಕೀರ್ತಿಶೇಷ ರತ್ನವರ್ಮ ಹೆಗ್ಗಡೆ

ದೂರದೃಷ್ಟಿಗೆ ಇನ್ನೊಂದು ಹೆಸರು ಕೀರ್ತಿಶೇಷ ರತ್ನವರ್ಮ ಹೆಗ್ಗಡೆಯವರು ಅರವತ್ತರ ದಶಕದಲ್ಲಿಯೇ ಉನ್ನತ ಶಿಕ್ಷಣದ ಮಹತ್ವವನ್ನು ಅರಿತು ಉಜಿರೆಯಂತಹ ಪ್ರದೇಶದಲ್ಲಿ ಕಾಲೇಜನ್ನು ಸ್ಥಾಪಿಸಿ ಗ್ರಾಮೀಣ ವಿಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ ಎಂದು ಶ್ರೀ ಧ. ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಹೇಳಿದರು. ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ನಡೆದ ಪೂಜ್ಯ ಶ್ರೀ ಡಿ. ರತ್ನವರ್ಮ ಹೆಗ್ಗಡೆ ಸ್ಮಾರಕ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಕನ್ನಡ ಚರ್ಚಾ ಸ್ಪರ್ಧೆಯ ಉದ್ಘಾಟಕರಾಗಿ ಮಾತನಾಡಿದರು. ಮೊದಲು ಉಜಿರೆ ಪ್ರದೇಶವು ಕೇವಲ ಬೇರೆ ಬೇರೆ ಪ್ರದೇಶಗಳಿಗೆ ಮಾರ್ಗ ತೋರಿಸುವ ಚಿಕ್ಕ ಹಳ್ಳಿಗಳಾಗಿತ್ತು ಆದರೆ ಇಂದು ಶಿಕ್ಷಣ ಕ್ಷೇತ್ರದಲ್ಲಿ ಜಾಗತಿಕ ಗುರುತಿಸಿಕೊಂಡಿದೆ ಎಂದರು. ಉಜಿರೆಯ ಪ್ರದೇಶವು ಆಂತರಿಕವಾಗಿ ಹೇಗೆ ಮಾರ್ಪಾಡಾಗಿದೆಯೋ ಹಾಗೆ ಕಾಲೇಜಿನ ಆಂತರಿಕ ಅಭಿವೃದ್ಧಿಯಲ್ಲಿಯೂಬದಲಾವಣೆಗಳಾಗಿವೆ.

ಅರವತ್ತರ ದಶಕದಲ್ಲಿ ಬೃಹತ್ ಪ್ರಮಾಣದ ಕಟ್ಟಡದೊಂದಿಗೆ, ಗ್ರಾಮೀಣ ಪ್ರದೇಶದಲ್ಲಿ ಕಾಲೇಜನ್ನು ಸ್ಥಾಪಿಸಿದ ಅವರು ನಿಜವಾದ ಸಾಹಸಿಗರು ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಪಿ. ಎನ್. ಉದಯಚಂದ್ರ ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಾಗಿದ್ದ ಉಪ ಪ್ರಾಂಶುಪಾಲ ಡಾ. ಎ. ಜಯಕುಮಾರ್ ಶೆಟ್ಟಿ ಮಾತನಾಡಿ, ಧರ್ಮಸ್ಥಳದ ಪ್ರವೇಶದ್ವಾರ, ಉಜಿರೆಯ ಕಾಲೇಜುಗಳು ಅವರ ದೂರದೃಷ್ಟಿಗೆ ಹಿಡಿದ ಕೈಗನ್ನಡಿ ಎಂದರು. ಮೊದಲು ಸರಿಮಾರು ನೂರಾ ಐವತ್ತು ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ಸಂಸ್ಥೆ ಇಂದು ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ ಎಂದು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀ ಧ. ಮಂ. ಕಾಲೇಜಿನ ಆಡಳಿತ ಕುಲಸಚಿವ ಡಾ.ಸಂಪತ್ ಕುಮಾರ್, ಹಾಜರಿದ್ದರು. ಡಾ. ಜಯಕುಮಾರ್ ಶೆಟ್ಟಿ ಸ್ವಾಗತಿಸಿ, ಡಾ. ಸುಧೀರ್ ಕೆ.ವಿ ವಂದಿಸಿ, ದಿವಾಕರ ಕೊಕ್ಕಡ ನಿರೂಪಿಸಿದರು.

Related Posts

Leave a Reply

Your email address will not be published.