ಆಕ್ಸಿಜನ್ ಉತ್ಪಾದನಾ ಘಟಕ ವೀಕ್ಷಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಕುಂದಾಪುರ: ಸಾರ್ವಜನಿಕರಿಗೆ ಸದುಪಯೋಗವಾಗುವ ನಿಟ್ಟಿನಲ್ಲಿ ನಿಮಿಷಕ್ಕೆ ಐನೂರು ಲೀಟರ್ ಆಕ್ಸಿಜನ್ ಉತ್ಪಾದಿಸುವ ಸಾಮರ್ಥ್ಯದ ಆಕ್ಸಿಜನ್ ಘಟಕ ಈಗಾಗಲೇ ಕುಂದಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದರ ಉದ್ಘಾಟನೆಗೆ ಪೆಟ್ರೋಲಿಯಂ ಸಚಿವರು ಬರುತ್ತಾರೆಂಬ ಮಾಹಿತಿ ಇದೆ. ಹೀಗಾಗಿ ಸ್ವಲ್ಪ ದಿನದ ಬಳಿಕ ಈ ಘಟಕವನ್ನು ಉದ್ಘಾಟನೆ ಮಾಡುತ್ತೇವೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ಹೇಳಿದರು.

ಕೇಂದ್ರ ಸಚಿವೆಯಾಗಿ ಆಯ್ಕೆಗೊಂಡ ಬಳಿಕ ಗುರುವಾರ ಸಂಜೆ ಕುಂದಾಪುರಕ್ಕೆ ಮೊದಲ ಬಾರಿಗೆ ಆಗಮಿಸಿದ ಅವರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ನೂತನಾಗಿ ನಿರ್ಮಾಣಗೊಂಡ ಆಕ್ಸಿಜನ್ ಘಟಕವನ್ನು ವೀಕ್ಷಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಬಹಳ ಕಷ್ಟದಲ್ಲಿ ಹರೀಶ್ ಬಂಗೇರ ಅವರ ಬಿಡುಗಡೆಯಾಗಿದೆ. ಸೌದಿ ರಾಜನ ಕುರಿತು ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆಂಬ ಆರೋಪದಡಿಯಲ್ಲಿ ಅವರನ್ನು ಬಂಧಿಸಲಾಗಿತ್ತು. ಸಾಮಾನ್ಯವಾಗಿ ರಾಜ ಪರಿವಾರದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೆ ಕಠಿಣವಾದ ಶಿಕ್ಷೆಯನ್ನು ಕೊಡುತ್ತಾರೆ. ಆದರೆ ಹರೀಶ್ ಬಂಗೇರ ಸೌದಿ ಜೈಲಿನಲ್ಲಿ ಉಳಿದಿರುವುದೇ ಹೆಚ್ಚು. ಸತ್ಯವನ್ನು ಸಾಭೀತುಪಡಿಸಿದ ಮೇಲೆ ಅವರಿಗೆ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಭಾರತೀಯ ವಿದೇಶಾಂಗ ಸಚಿವಾಲಯ ಮತ್ತು ರಾಯಭಾರಿ ಕಚೇರಿಯ ಸತತ ಪ್ರಯತ್ನದಿಂದ ಬಿಡುಗಡೆ ಸಾಧ್ಯವಾಗಿದೆ ಎಂದರು.

ಶಾಸ್ತ್ರೀ ವೃತ್ತದ ಫ್ಲೈಓವರ್ ಅನ್ನು ಜನರೇ ಉದ್ಘಾಟಿಸಿದ್ದಾರೆ!:
ಕುಂದಾಪುರದ ಶಾಸ್ತ್ರೀವೃತ್ತದ ಫ್ಲೈಓವರ್ ಅನ್ನು ಜನರೇ ಉದ್ಘಾಟಿಸಿದ್ದಾರೆ. ಸ್ಥಳೀಯ ಶಾಸಕರು ಉದ್ಘಾಟನಾ ಕಾರ್ಯಕ್ರಮಗಳಿಗೆಲ್ಲ ಬರುವವರಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಾಂದ್ಲಾಜೆ ಮುಗುಳ್ನಗುತ್ತಾ ಪ್ರತಿಕ್ರಿಯಿಸಿದರು. ಫ್ಲೈಓವರ್‌ನಿಂದ ನಗರಕ್ಕೆ ಸಂಪರ್ಕಿಸಲು ಪ್ರವೇಶ ಮಾಡಿಕೊಡುವ ಬಗ್ಗೆ ಶಾಸಕರು ಹಾಗೂ ಕಿರಣ್ ಕೊಡ್ಗಿಯವರು ನನ್ನ ಗಮನಕ್ಕೆ ತಂದಿದ್ದಾರೆ. ಅವರ ಮನವಿಯನ್ನು ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸುತ್ತೇನೆ ಎಂದರು.

ಕೊನೆಕ್ಷಣದಲ್ಲಿ ಕಾರ್ಯಕ್ರಮ ರದ್ದು:
60  ಲಕ್ಷ ರೂ ವೆಚ್ಚದ ಯಂತ್ರೋಪಕರಣಗಳಿಂದ ನಿರ್ಮಾಣಗೊಂಡ ಆಕ್ಸಿಜನ್ ಘಟಕದ ಉದ್ಘಾಟನೆಗೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ಆಗಮಿಸಲಿದ್ದಾರೆ ಎಂದು ನಗರದಾದ್ಯಂತ ಬಿಜೆಪಿ ಮುಖಂಡರು ಬ್ಯಾನರ್‌ಗಳನ್ನು ಅಳವಡಿಸಿದ್ದರು. ಕೇಂದ್ರ ಪೆಟ್ರೋಲಿಯಂ ಸಚಿವರು ಕುಂದಾಪುರಕ್ಕೆ ಆಗಮಿಸಿ ಇದರ ಉದ್ಘಾಟನೆ ಮಾಡುವ ಮಾಹಿತಿ ಬಂದ ಹಿನ್ನೆಲೆ ಕೊನೆಕ್ಷಣದಲ್ಲಿ ಈ ಉದ್ಘಾಟನಾ ಕಾರ್ಯಕ್ರಮವು ರದ್ದುಗೊಂಡಿತು. ಹೀಗಾಗಿ ಸಚಿವೆ ಶೋಭಾ ಕರಂದ್ಲಾಜೆ ಆಕ್ಸಿಜನ್ ಘಟಕಕ್ಕೆ ಭೇಟಿ ನೀಡಿ ವೈದ್ಯಾಧಿಕಾರಿ ರಾಬರ್ಟ್ ಅವರಿಂದ ಮಾಹಿತಿ ಪಡೆದು ಬಳಿಕ ಬಿಜೆಪಿ ಕಚೇರಿಗೆ ವಾಪಾಸ್ಸಾದರು.

 

Related Posts

Leave a Reply

Your email address will not be published.