ಐಡಿಯಲ್ ಐಸ್ ಕ್ರೀಮ್ ಮಾಲಕರು ಪ್ರಭಾಕರ ಕಾಮತ್ ನಿಧನ
ನಾಡಿನ ಪ್ರಸಿದ್ಧ ಸಂಸ್ಥೆಯಾಗಿರುವ ಐಡಿಯಲ್ ಐಸ್ಕ್ರೀಂ ಸ್ಥಾಪಕರಾದ ಶಿಬರೂರು ಪ್ರಭಾಕರ ಕಾಮತ್ (79) ಶನಿವಾರ ಮುಂಜಾನೆ 3.30ಕ್ಕೆ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಅವರು ಅ.29ರಂದು ಬಿಜೈನಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮೃತರು ಓರ್ವ ಪುತ್ರ ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮಂಗಳೂರಿನಲ್ಲಿ ಟೈಲರಿಂಗ್ ವಸ್ತುಗಳ ವಿತರಣೆ, ಪಟಾಕಿ ವಿತರಣೆ ಮಾಡಿಕೊಂಡಿದ್ದ ಪ್ರಭಾಕರ ಕಾಮತ್ ಅವರು ವರ್ಷಪೂರ್ತಿ ಬೇಡಿಕೆಯ ಉದ್ಯಮ ಪ್ರಾರಂಭಿಸಲು ಮುಂದಾಗಿದ್ದರು. ಅದರಂತೆ 1975ರಲ್ಲಿ ಐಡಿಯಲ್ ಐಸ್ ಕ್ರೀಂ ಪಾರ್ಲರ್ ಆರಂಭಿಸಿದ್ದು, ಅವರೇ ಸ್ವತಃ ವಿವಿಧ ನಮೂನೆಯ ಐಸ್ ಕ್ರೀಂ ಮನೆಯಲ್ಲಿ ತಯಾರಿಸಿದ್ದರು. ಸ್ವಂತ ಪ್ರಯೋಗ ಹಾಗೂ ಹಲವು ಆವಿಷ್ಕಾರಗಳಿಂದಾಗಿ ಐಡಿಯಲ್ಸ್ ಮನೆಮಾತಾಗಿದೆ. ಪ್ರಭಾಕರ ಕಾಮತ್ ಅವರನ್ನು ಪ್ರೀತಿಯಿಂದ ಪಬ್ಬಾ ಮಾಮ್ ಎಂದೂ ಕರೆಯುತ್ತಿದ್ದು ಅದೇ ಹೆಸರಿನಲ್ಲಿ ಮಂಗಳೂರಿನಲ್ಲಿ ಐಸ್ ಕ್ರೀಂ ಪಾರ್ಲರ್ ಕೂಡಾ ಇದೆ.
ಗಣ್ಯರ ಸಂತಾಪ:
ಪ್ರಭಾಕರ ಕಾಮತ್ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಯು.ಟಿ. ಖಾದರ್, ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಶಾಸಕರಾದ ವೇದವ್ಯಾಸ್ ಕಾಮತ್, ಭರತ್ ಶೆಟ್ಟಿ, ಹರೀಶ್ ಪೂಂಜಾ ಸಹಿತ ಗಣ್ಯರು ಸಂತಾಪ ಸೂಚಿಸಿದ್ದಾರೆ