ಕಾಲನ ಗರ್ಭ ಸೇರಿದ ಆಸ್ಕರ್‌ : ಪುರುಷೋತ್ತಮ ಬಿಳಿಮಲೆ

80 ವರ್ಷದ ಆಸ್ಕರ್‌ ಫೆರ್ನಾಂಡಿಸ್‌ ( ಮಾರ್ಚ್‌ 27, 1941 ) ಇನ್ನಿಲ್ಲವೆಂಬ ಸುದ್ದಿ ತಲುಪಿದಾಗ ಕಾಲನ ಚಕ್ರಗಳು ಹಿಂದಕ್ಕೆ ಸರಿಯತೊಡಗಿದುವು. ದೇವರಾಜು ಅರಸು ಕಾಲದಲ್ಲಿ ಕರಾವಳಿಯ ಹಿಂದುಳಿದ ವರ್ಗದಿಂದ ಮೇಲೆದ್ದು ಬಂದ ಶ್ರೀಗಳಾದ ಜನಾರ್ದನ ಪೂಜಾರಿ, ಆಸ್ಕರ್‌ ಫೆರ್ನಾಂಡಿಸ್‌ ಮತ್ತು ವೀರಪ್ಪ ಮೊಯಿಲಿ ತಮ್ಮ ರಾಜಕೀಯ ಏಳುಬೀಳುಗಳ ನಡುವೆಯೂ ಕೊನೆಯವರೆಗೆ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರಾಗಿಯೇ ಉಳಿದರು. ಈ ತ್ರಿಮೂರ್ತಿಗಳಲ್ಲಿ ಆಸ್ಕರ್‌ ಫೆರ್ನಾಂಡಿಸ್‌ ರಾಜೀವ್‌ ಗಾಂಧಿ ಕಾಲದಿಂದಲೂ ಗಾಂಧೀ ಕುಟುಂಬಕ್ಕೆ ಬಹಳ ಹತ್ತಿರವಾಗಿದ್ದರು. ಆದರೆ ಈ ಸಂಬಂಧವನ್ನು ಅವರೆಂದೂ ದುರುಪಯೋಗಪಡಿಸಿಕೊಂಡವರಲ್ಲ. ಜೊತೆಗೆ ಆಸ್ಕರ್‌ ಎಂದೂ ಮಹತ್ವಾಕಾಂಕ್ಷಿಯೂ ಆಗಿರಲಿಲ್ಲ. ಪಾಲಿಗೆ ಬಂದದ್ದು ಪಂಚಾಮೃತ ಎಂದು ಭಾವಿಸುತ್ತಿದ್ದ ಅವರು ಕೇಂದ್ರದಲ್ಲಿ ರಸ್ತೆ ಸಾರಿಗೆ, ಹೆದ್ದಾರಿ, ಕಾರ್ಮಿಕ ಮತ್ತು ಉದ್ಯೋಗ, ಯೋಜನಾ ಅನುಷ್ಠಾನ, ಯುವಜನ ಹಾಗೂ ಕ್ರೀಡಾ ಸಚಿವರಾಗಿ ಕೆಲಸ ನಿರ್ವಹಿಸಿದ್ದಾರೆ. ಮಂತ್ರಿಯಾದಾಗ ಅವರು ಹಿಗ್ಗಿದವರಲ್ಲ, ಆಗದಿದ್ದಾಗ ಅವರು ಕುಗ್ಗಿದವರಲ್ಲ. ಆಸ್ಕರ್‌, ಆಸ್ಕರಣ್ಣ ನಾಗಿಯೇ ಉಳಿದಿದ್ದರು.
1975- 76 ರ ಅವಧಿಯಲ್ಲಿ ಉಡುಪಿಯ ಮುನ್ಸಿಪಲ್‌ ಕೌನ್ಸಿಲ್‌ನ ಸದಸ್ಯರಾಗಿದ್ದ ಅವರು 1980ರಲ್ಲಿ ಮೊದಲ ಬಾರಿಗೆ ವಿ ಎಸ್‌ ಆಚಾರ್ಯರನ್ನು ಸೋಲಿಸಿ, ಉಡುಪಿ ಕ್ಷೇತ್ರದಿಂದ ಏಳನೇ ಲೋಕ ಸಭೆ ಪ್ರವೇಶಿಸಿದ ಅವರು ಮುಂದೆ, 1984 ರಲ್ಲಿ ಕೆ ಎಸ್‌ ಹೆಗ್ಡೆ , 1989 ರಲ್ಲಿ ಎಂ ಸಂಜೀವ, 1991ರಲ್ಲಿ ರುಕ್ಮಯ್ಯ ಪೂಜಾರಿಯರನ್ನು ಮತ್ತು 1996ರಲ್ಲಿ ಜಯರಾಮ ಶೆಟ್ಟರನ್ನು ಸೋಲಿಸಿ ಲೋಕ ಸಭೆಗೆ ಆಯ್ಕೆಯಾದರು. 1980ರಲ್ಲಿ ಮೊದಲ ಸಲ ಆಸ್ಕರ್‌ ಗೆದ್ದಾಗ ಅವರ ಗೆಲುವಿನ ಅಂತರ ಒಂದೂವರೆ ಲಕ್ಷವಾಗಿದ್ದರೆ, 1996ರಲ್ಲಿ ಅವರ ಗೆಲುವಿನ ಅಂತರ ಕೇವಲ ಎರಡು ಸಾವಿರವಾಗಿತ್ತು. ಆ ಹೊತ್ತಿಗೆ ದೆಹಲಿ ಕೇಂದ್ರಿತ ರಾಜಕಾರಣದಲ್ಲಿ ಮುಳುಗಿದ್ದ ಆಸ್ಕರ್‌ ಅವರಿಗೆ ತನ್ನ ಕಾಲ ಕೆಳಗಿನ ನೆಲ ಕುಸಿಯುವುದು ಗೊತ್ತಾಗಲೇ ಇಲ್ಲ. ಅವರು ತನಗೆ ಮತ ಹಾಕಿದವರಿಗಿಂತ ಹೆಚ್ಚಾಗಿ ದೆಹಲಿ ಜನಗಳಿಗೇ ಹತ್ತಿರವಾಗುತ್ತಾ ಹೋದರು. ಕಾಂಗ್ರೆಸ್‌ ನ ಕೇಂದ್ರ ಕಚೇರಿಯಲ್ಲಿಯೇ ಅವರು 24 ಗಂಟೆಗಳ ಕಾಲ ದುಡಿಯತೊಡಗಿದರು. ಪರಿಣಾಮವಾಗಿ, 1998ರ ಲೋಕ ಸಭಾ ಚುನಾವಣೆಯಲ್ಲಿ ಅವರು ಸುಮಾರು 47 ಸಾವಿರ ಮತಗಳಿಂದ ಸೋತರು. ಸೋತರೂ ಮತ್ತೆ ರಾಜ್ಯ ಸಭೆಗೆ ಪ್ರವೇಶ ಪಡೆದರು.
80-90ರ ದಶಕದಲ್ಲಿ ಆಗಿನ್ನೂ ಯುವಕರಾಗಿದ್ದ ಆಸ್ಕರ್‌ ಫೆರ್ನಾಂಡಿಸ್‌ ಮತ್ತು ವೀರಪ್ಪ ಮೊಯಿಲಿಯವರು ತಮಗೊದಗಿದ ಅವಕಾಶಗಳನ್ನು ಉಪಯೋಗಿಸಿಕೊಂಡು ಉಡುಪಿ – ಮಂಗಳೂರುಗಳಲ್ಲಿ ಹೆಚ್ಚು ಕೆಲಸ ಮಾಡಿದ್ದರೆ, ಕರಾವಳಿ ಇವತ್ತು ಈ ಮಟ್ಟಿನ ಕೋಮುವಾದಕ್ಕೆ ಬಲಿಯಾಗುತ್ತಿರಲಿಲ್ಲ. ಭೂ ಸುಧಾರಣೆಯ ಆನಂತರ ಹುಟ್ಟಿಕೊಂಡ ಹೊಸ ತಲೆಮಾರಿನ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಈ ನಾಯಕರು ವಿಫಲರಾಗಿದ್ದರು. ಕಾರಣ ತಮ್ಮದೇ ಜನಗಳಿಂದ ದೂರವಾಗುತ್ತಲೇ ಹೋದರು. ಪೂಜಾರಿಯವರು ಮತ್ತು ಮೊಯಿಲಿಯವರು ಸೋತರು, ಆಸ್ಕರ್‌ ಇದೀಗ ಕೊನೆಯುಸಿರು ಎಳೆದರು.
ಮೃದು ಮಾತಿನ ಆಸ್ಕರ್‌ ಅಂದರೆ ದೆಹಲಿಯಲ್ಲಿ ಎಲ್ಲರಿಗೂ ಇಷ್ಟ. ಯೋಗ ಮತ್ತು ಕಥಕ್‌ ಅವರ ಪ್ರೀತಿಯ ಹವ್ಯಾಸಗಳು. ಹೆಂಡತಿ ಬ್ಲೋಸಮ್‌ ರನ್ನು ಹತ್ತಿರ ಕುಳಿತುಕೊಳ್ಳಿಸದೇ ಇದ್ದರೆ ಅವರು ಭಾಷಣ ಮಾಡುತ್ತಲೇ ಇರಲಿಲ್ಲ. ಕಚೇರಿಗೆ ಯಾರು ಹೋದರೂ ಕರೆದು ಮಾತಾಡಿಸುವ ಸೌಜನ್ಯ, ನಮ್ಮಂಥ ರಾಜಕೀಯೇತರ ಜನರು ಹೋದರೆ ಹತ್ತಿರ ಕುಳ್ಳಿರಿಸಿಕೊಂಡು ಹೆಗಲ ಮೇಲೆ ಕೈ ಹಾಕಿ ಹರಟುವ ಪ್ರೀತಿ ಮೊದಲಾದ ಗುಣಗಳಿಂದಾಗಿ ಆಸ್ಕರ್‌ ಅಜಾತ ಶತ್ರುವಾಗಿಯೇ ಉಳಿದರು.
2004 – 2008ರ ಅವಧಿಯಲ್ಲಿ ನಾನು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷನಾಗಿ ಸಂಘಕ್ಕೊಂದು ಸಾಂಸ್ಕೃತಿಕ ಸಮುಚ್ಚಯ ಕಟ್ಟುತ್ತಿದ್ದಾಗ, ಆಸ್ಕರ್‌ , ಮೊಯಿಲಿ ಮತ್ತು ಅನಂತ ಕುಮಾರ್‌ ನಮ್ಮ ಸಹಾಯಕ್ಕೆ ನಿಂತಿದ್ದರು. ಕಟ್ಟಡದ ಉದ್ಘಾಟನೆಯ ಸಂದರ್ಭದಲ್ಲಿ ಗೆಳೆಯ ವಸಂತ ಶೆಟ್ಟಿ ಬೆಳ್ಳಾರೆಯವರು ಆಸ್ಕರ್‌ ಮತ್ತು ಮೊಯಿಲಿಯವರನ್ನು ಸೇರಿಸಿ ಯಕ್ಷಗಾನವನ್ನು ಮಾಡುವ ಯೋಜನೆ ರೂಪಿಸಿದರು. ಮಂಗಳೂರಿನಿಂದ ಕಲಾವಿದ ಭಾಸ್ಕರ ರೈ ಕುಕ್ಕುವಳ್ಳಿಯವರು ಸಹಾಯ ಹಸ್ತ ಚಾಚಿದರು. ವಿದ್ಯಾ ಕೋಳ್ಯೂರು ತರಬೇತಿ ನೀಡಿದರು. ಕೃಷ್ಣ ಭಟ್ಟರು ಎಲ್ಲ ವ್ಯವಸ್ಥೆ ಮಾಡಿದರು. ಆಸ್ಕರ್‌ ಅವರದು ʼ ಅತ್ಯುನ್ನತಿಯೊಳ್‌ ಅಮರಸಿಂಧೂದ್ಭವನಾದ ಭೀಷ್ಮಾಚಾರ್ಯ, ಮೊಯಿಲಿಯವರದು ʼ ಸೂತ ಪುತ್ರ ಕರ್ಣʼ, ನಂದು ʼನೀತಿವಂತ ವಿದುರʼ ಇತ್ಯಾದಿ. ಒಂದು ಹಂತದಲ್ಲಿ ಭೀಷ್ಮಚಾರ್ಯ ಅವರು ಇದಿರಾದಾಗ ನಾನು ( ವಿದುರ) ಹೇಳಿದೆ- ʼ ಅಚಾರ್ಯರೇ, ನಿಮಗೆ ಹಸ್ತಿನಾಪುರದ ಪಟ್ಟವನ್ನು ಕಾಯುವುದೇ ಕೆಲಸವಾಯಿತಲ್ಲ? ನೀವು ಪಟ್ಟವೇರುವುದು ಯಾವಾಗ? ತುಂಬಿದ ಸಭೆ ಚಪ್ಪಾಳೆ ತಟ್ಟಿತು. ಭೀಷ್ಮರು ಮುಗುಳ್ನಕ್ಕರು. ಮರುದಿನ ದೇಶದಾದ್ಯಂತ ʼ ನೇತಾ ಬನ್‌ ಗಯಾ ಅಭಿನೇತಾʼ ಅಂತ ಸುದ್ದಿಯಾಯಿತು. ರಾಜಕೀಯದ ಪಟ್ಟುಗಳು ಕ್ಷಿಪ್ರವಾಗಿ ಬದಲಾಗುತ್ತಿರುವಾಗ ಆಸ್ಕರ್‌ ಮರೆಯಾದದ್ದು ಸಾಂಕೇತಿಕವೂ ಹೌದು . ಪೋತು ಬಲೆ ಆಸ್ಕರಣ್ಣ!
( ಚಿತ್ರದಲ್ಲಿ ಎಡಬದಿಗೆ ಕರ್ಣನಾಗಿ ಮೊಯಿಲಿ, ಮಧ್ಯೆ ಭೀಷ್ಮನಾಗಿ ಆಸ್ಕರ್‌ ಮತ್ತು ಬಲಬದಿಯಲ್ಲಿ ವಿದುರನಾಗಿ ನಾನು, ಫೋಟೋ: ದಿನೇಶ್‌ ಶೆಣೈ)

Related Posts

Leave a Reply

Your email address will not be published.