ಕೃಷಿ ಮಸೂದೆ ವಾಪಸ್ಸಾತಿ, ಬೆಲೆ ಏರಿಕೆ ವಿರುದ್ಧ ಸೆ.27ರಂದು ಪ್ರತಿಭಟನಾ ಸಭೆ

ಬಂಟ್ವಾಳ: ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಮಸೂದೆಗಳ ವಾಪಸ್ಸಾತಿಗೆ ಹಾಗೂ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನಾತ್ಮಕಗೊಳಿಸಲು ಆಗ್ರಹಿಸಿ ದೆಹಲಿಯ ಹೊರವಲಯದಲ್ಲಿ ನಡೆಯುತ್ತಿರುವ ಐತಿಹಾಸಿಕ ಚಳುವಳಿಗೆ ಸೆ. 26ನೇ ತಾರೀಖಿಗೆ ಹತ್ತು ತಿಂಗಳು ತುಂಬಲಿರುವ ಹಿನ್ನಲೆಯಲ್ಲಿ ಸಂಯುಕ್ತ ಹೋರಾಟ ಕಿಸಾನ್ ಮೋರ್ಚಾ ಸೆ.27ರಂದು ಭಾರತ್ ಬಂದ್‍ಗೆ ಕರೆ ನೀಡಿದ್ದು ಅಂದು ಬೆಳಿಗ್ಗೆ 10 ಗಂಟೆಗೆ ಬಿ.ಸಿ.ರೋಡಿನ ಮಿನಿ ವಿಧಾನ ಸೌಧದ ಬಳಿಯಿಂದ ಕಾಲ್ನಡಿಗೆಯಲ್ಲಿ ಹೊರಟು ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿ ಬೃಹತ್ ಪ್ರತಿಭಟನಾ ಸಭೆ ಹಾಗೂ ರಾಷ್ಟ್ರೀಯ ಹೆದ್ದಾರಿ ಬಂದ್ ಚಳುವಳಿ ನಡೆಯಲಿದೆ ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಯನ್ನು ಕಾನೂನಾತ್ಮಕಗೊಳಿಸಬೇಕು, ಕಾರ್ಮಿಕ ಮಸೂದೆಯನ್ನು ಹಿಂಪಡೆಯಬೇಕು, ಪೆಟ್ರೋಲ್ ಡಿಸೇಲ್ , ಗ್ಯಾಸ್ ಬೆಲೆ ಏರಿಕೆ ಖಂಡಿಸಿ, ನಗದೀಕರಣ ಹೆಸರಿನಲ್ಲಿ ದೇಶಿಯ ಸಂಪತ್ತನ್ನು ಕಾರ್ಪೋರೇಟ್ ಸಂಸ್ಥೆಗಳಿಗೆ ಮಾರಾಟ ಮಾಡುವುದನ್ನು ವಿರೋಧಿಸಿ, ಡಿಸಿ ಮನ್ನಾ ಜಮೀನು ಅರ್ಹ ಫಲಾನುಭವಿಗಳಿಗೆ ಇನ್ನೂ ಕೈಸೇರದಿರುವುದನ್ನು ಖಂಡಿಸಿ ಈ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು. ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ, ದಕ್ಷಿಣ ಕನ್ನಡ ಜಿಲ್ಲಾ ದಲಿತ ಸಂಘ ಸಮಘಟನೆಗಳ ಸಮನ್ವಯ ಸಮಿತಿ, ಸಿಐಟಿಯು, ಡಿವೈಎಫ್‌ಐ, ಎಐಟಿಯುಸಿ, ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆ, ದಲಿತ್ ಸೇವಾ ಸಮಿತಿ ಪ್ರತಿಭಟನೆಯ ನೇತೃತ್ವ ವಹಿಸಿಕೊಳ್ಳಲಿದೆ ಎಂದು ಮಾಹಿತಿ ನೀಡಿದರು. ಇತ್ತೀಚೆಗೆ ಯಕ್ಷಗಾನ ಕಲಾವಿದ ದಿನೇಶ್ ಕೋಡಪದವು ಅವರು ಯಕ್ಷಗಾನವಂದರಲ್ಲಿ ರೈತರ ಹೋರಾಟವನ್ನು ಹೀಯಾಳಿಸಿದ್ದಾರೆ, ನಮ್ಮ ಕಲೆ, ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕಾದ ಕಲಾವಿದರು ರೈತರನ್ನು ಅವಮಾನಿಸುವುದು ಸರಿಯಲ್ಲ, ಅವರ ಹೇಳಿಕೆಯನ್ನು ಖಂಡಿಸುವುದಾಗಿ ತಿಳಿಸಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ ಬಾಳ್ತಿಲ, ತಾಲೂಕು ಕೋಶಾಧಿಕಾರಿ ಡಿ.ಕೆ. ಸಾಹುಲ್ ಹಮೀದ್, ಸಂಘಟನಾ ಕಾರ್ಯದರ್ಶಿ ಸದಾನಂದ ಶೀತಲ್, ಡಿವೈಎಫ್‍ಐ ಕಾರ್ಯದರ್ಶಿ ತುಳಸೀದಾಸ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.