ತಣ್ಣೀರು ಬಾವಿಯಲ್ಲಿ ಗ್ಯಾಸ್ ಟರ್ಮಿನಲ್ಗೆ ಚಿಂತನೆ : ಕೇಂದ್ರ ಸಚಿವ ಸರ್ಬಾನಂದ್ ಸೋನೋವಾಲ್ ಹೇಳಿಕೆ
ನವಮಂಗಳೂರು ಬಂದರು ಟ್ರಸ್ಟ್ ವತಿಯಿಂದ ಯು.ಎಸ್. ಮಲ್ಯ ಗೇಟ್ ನವೀಕರಣ ಕಾಮಗಾರಿಗೆ ಶಿಲಾನ್ಯಾಸ, ಬಂದರಿನಲ್ಲಿ ಟ್ರಕ್ ಟರ್ಮಿನಲ್ಗೆ ಶಿಲಾನ್ಯಾಸ ಹಾಗೂ ಬಂದರಿನಲ್ಲಿ ವ್ಯಾಪಾರ ಅಭಿವೃದ್ದಿ ಕೇಂದ್ರದ ಕಟ್ಟಡ ಲೋಕಾರ್ಪಣೆ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಆಚರಣೆ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್ ಅವರು ಮಂಗಳೂರು ನವಬಂದರು ಪರಿಸರದಲ್ಲಿ ಅನೇಕ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಚಿಂತಿಸಲಾಗಿದೆ.3.22 ಕೋಟಿ ರೂ. ವೆಚ್ಚದಲ್ಲಿ ಬಂದರಿನ ಸಂಸ್ಥಾಪಕ ಯು.ಎಸ್. ಮಲ್ಯ ಹೆಸರಿನಲ್ಲಿ ಪ್ರವೇಶ ದ್ವಾರ ಅಭಿವೃದ್ಧಿಯಾಗಲಿದೆ.ಎನ್ಎಮ್ಪಿಟಿ ಪರಿಸರಕ್ಕೆ ಅನುಕೂಲವಾಗುವಂತೆ 4 ಕೋಟಿ ರೂಪಾಯಿ ವೆಚ್ಚದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ ಎಂದು ಹೇಳಿದರು.
ಆನಂತರ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಸುರತ್ಕಲ್ ಲೈಟ್ಹೌಸ್ ಅಭಿವೃದ್ಧಿಗೆ ಸಚಿವರು ಸಲಹೆ ನೀಡಿದ್ದಾರೆ. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ. ಕುಂದಾಪುರ-ಬಂದರು ರಸ್ತೆ, ಕೂಳೂರು-ಬೈಕಂಪಾಡಿ ಮೇಲ್ಸೇತುವೆ ಯೋಜನೆ ಕೈಗೆತ್ತಿಕೊಳ್ಳಲು ಚಿಂತಿಸಲಾಗಿದೆ. ಶಿರಾಡಿ ಸುರಂಗ ಮಾರ್ಗ, ಮಂಗಳೂರು ಕಟೀಲು, ಪೊಳಲಿ ಬೈಪಾಸ್ ರಸ್ತೆ ಅಭಿವೃದ್ಧಿ ಸೇರಿದಂತೆ ಹತ್ತಾರು ಯೋಜನೆಗಳು ಜಾರಿಗೆ ಬರಲಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ, ಎನ್ಎಂಪಿಟಿ ಅಧ್ಯಕ್ಷ ಎ.ವಿ. ರಮಣ, ಎನ್ಎಂಪಿಟಿ ಉಪಾಧ್ಯಕ್ಷ ಕೆ.ಜಿ. ನಾಥ್ ಮೊದಲಾದವರು ಉಪಸ್ಥಿತರಿದ್ದರು.