ತುಳುವಿಗೆ ಮಂಗಳೂರು ವಿವಿಯಿಂದ ಶೈಕ್ಷಣಿಕ ಪ್ರೋತ್ಸಾಹ

 ಮಂಗಳೂರು ವಿಶ್ವವಿದ್ಯಾನಿಲಯ ತುಳು ಭಾಷೆಯ ಬಲವರ್ಧನೆಗೆ ಶೈಕ್ಷಣಿಕ ಪ್ರೋತ್ಸಾಹ ನೀಡುತ್ತಾ ಬರುತ್ತಿದೆ. ತುಳು ಪದವಿ, ಸ್ನಾತಕೋತ್ತರ ಪದವಿಗಳಲ್ಲಿ ತುಳುವಿಗೆ ಅವಕಾಶವನ್ನು ಕಲ್ಪಿಸಿದ್ದು ಮಾತ್ರವಲ್ಲ ತುಳುವಿಗೆ ಸಂಬಂಧಿಸಿದ ಮೌಲಿಕ ರಚನೆಗಳನ್ನು ಪಠ್ಯಪುಸ್ತಕಗಳಲ್ಲಿ ಸೇರ್ಪಡೆಗೊಳಿಸಿ ಪ್ರಸಾರಾಂಗದ ಮೂಲಕ ಇದನ್ನು ಪ್ರಕಟಿಸುವ ಕಾರ್ಯದಲ್ಲಿ ತೊಡಗಿದೆ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಸ್ ಯಡಪಡಿತ್ತಾಯ ಹೇಳಿದರು.

ಅವರು ಶುಕ್ರವಾರ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭಾಂಗಣದಲ್ಲಿ ಪ್ರಸಾರಾಂಗ ಪ್ರಕಟಿಸಿದ ತುಳು ಪಠ್ಯಪುಸ್ತಕ ‘ಸಿರಿಮುಡಿ : ತುಡರ್ ರಡ್ಡ್’ ಪದವಿ ತರಗತಿಯ ನಾಲ್ಕನೇ ಚತುರ್ಮಾಸದ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ತುಳುವಿನಲ್ಲಿ ಸಾಮಾಜಿಕವಾಗಿ, ಭೌಗೋಳಿಕವಾಗಿ ಭಾಷಿಕ ಭಿನ್ನತೆಗಳಿದ್ದು ಅವುಗಳನ್ನು ಅರ್ಥೈಸುವ, ವಿಶ್ಲೇಷಿಸುವ ಶೈಕ್ಷಣಿಕ ಚಟುವಟಿಕೆಗಳು ಹೆಚ್ಚಾಗಬೇಕು ಎಂದು ಅವರು ಹೇಳಿದರು.

ಕುಲಸಚಿವ ಪ್ರೊ.ಕಿಶೋರ್ ಕುಮಾರ್ ಸಿ.ಕೆ ಮಾತನಾಡಿ ತುಳುವಿನಲ್ಲಿ ಅಧ್ಯಯನಯೋಗ್ಯವಾದ ಹಲವು ವಿಚಾರಗಳಿದ್ದು ಆ ಕಡೆಗೆ ಆಸಕ್ತಿ ತಾಳುವಂತೆ ಮಾಡುವ ಕಾರ್ಯವನ್ನು ಈ ಪಠ್ಯಪುಸ್ತಕ ಮಾಡಿದೆ, ಎಂದರು. ಪ್ರಸಾರಾಂಗದ ನಿರ್ದೇಶಕ ಪ್ರೊ.ಅಭಯಕುಮಾರ್ ಮಾತನಾಡಿ ಪಠ್ಯಪುಸ್ತಕಗಳ ಪ್ರಕಟಣೆಯ ಹಿಂದಿನ ಉದ್ದೇಶ, ಪ್ರಯತ್ನಗಳನ್ನು ವಿವರಿಸಿದರು. ಕಾರ್ಯನಿರ್ವಾಹಕ ಸಂಪಾದಕ ಡಾ. ವಿಶ್ವನಾಥ ಬದಿಕ್ಕಾನ ಪದವಿಯಲ್ಲಿ ತುಳುವನ್ನು ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಬೇಕು ಎಂದರು.
ಆಂಧ್ರಪ್ರದೇಶದ ಕುಪ್ಪಂ ದ್ರಾವಿಡ ವಿವಿಯ ತುಳು ವಿಭಾಗದ ಮುಖ್ಯಸ್ಥ ಪ್ರೊ.ಶಿವಕುಮಾರ್ ಭರಣ್ಯ, ಕಣ್ಣೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಮಂಡಳಿ ಅಧ್ಯಕ್ಷ ಡಾ. ರಾಧಾಕೃಷ್ಣ ಬೆಳ್ಳೂರು, ಮಂಗಳೂರು ವಿವಿಯ ತುಳು ಅಧ್ಯಯನ ಮಂಡಳಿ ಸದಸ್ಯ ಡಾ. ಧನಂಜಯ ಕುಂಬ್ಳೆ, ಡಾ. ಪ್ರಕಾಶ್ಚಂದ್ರ ಶಿಶಿಲ, ಪ್ರಸಾರಾಂಗದ ಜೆಸ್ಸಿ ಡಿಸೋಜ, ಭರತ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.