ತೆಂಕ ಎರ್ಮಾಳಿನಲ್ಲಿ ಸರಣಿ ಅಪಘಾತ: ಮೂರು ವಾಹನಗಳು ಜಖಂ, ಮೂವರಿಗೆ ಗಾಯ
ಎರಡು ಕಾರು ಹಾಗೂ ಅಟೋ ರಿಕ್ಷಾ ನಡುವೆ ಸರಣಿ ಅಪಘಾತ ನಡೆದು ರಿಕ್ಷಾ ಚಾಲಕ ಸಹಿತ ಮೂವರು ಗಾಯಗೊಂಡ ಘಟನೆ ಪಡುಬಿದ್ರಿ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66 ರ ತೆಂಕ ಎರ್ಮಾಳು ಗರಡಿ ಬಳಿ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ 66 ರ ತೆಂಕ ಎರ್ಮಾಳು ಗರಡಿ ಬಳಿ ಪಡುಬಿದ್ರಿಯತ್ತ ಚಲಿಸುತ್ತಿದ್ದ ಆಟೋ ರಿಕ್ಷಕ್ಕೆ ಉಡುಪಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಫೊರ್ಡ್ ಕಾರು ಡಿಕ್ಕಿಯಾಗಿದೆ. ಪರಿಣಾಮ ರಿಕ್ಷಾ ಕಮರಿಗೆ ಉರುಳಿದೆ.
ಈ ಸಂದರ್ಭ ಅದೇ ರಸ್ತೆಯಾಗಿ ಮಂಗಳೂರಿನತ್ತ ಚಲಿಸುತ್ತಿದ್ದ ಮತ್ತೊಂದು ಕಾರು ಅಪಘಾತಕ್ಕೀಡಾದ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಮೂರೂ ವಾಹನಗಳು ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ರಿಕ್ಷಾ ಚಾಲಕ ಮುಲ್ಕಿ ನಿವಾಸಿ ರಾಜೇಶ್ ಸಹಿತ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದು, ಮೂರು ವಾಹನ ಜಖಂ ಗೊಂಡಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನಾ ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.