ಪುತ್ತೂರಿನ ದಲಿತ ಬಾಲಕಿಯ ಅತ್ಯಾಚಾರ ಪ್ರಕರಣ ಆರೋಪಿಯನ್ನು ಬಂಧಿಸುವಂತೆ ಆಗ್ರಹ
ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದಲ್ಲಿ ತೋಟದ ಕೆಲಸಕ್ಕೆ ಬರುತ್ತಿದ್ದ ದಲಿತ ಸಮುದಾಯದ ಅಪ್ರಾಪ್ತ ಬಾಲಕಿಯ ಅತ್ಯಾಚಾರಗೈದು ಮಗುವನ್ನು ಕರುಣಿಸಿದ ಪ್ರಕರಣದ ಆರೋಪಿ ಆರ್ಎಸ್ಎಸ್ ಮುಖಂಡ ನಾರಾಯಣ ರೈ ಬಂಧನಕ್ಕೆ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಒತ್ತಾಯಿಸಿದೆ.
ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಮನ್ವಯ ಸಮಿತಿಯ ಮುಖಂಡ ಅಶೋಕ್ ಕೊಂಚಾಡಿ ಅವರು, ದಲಿತ ಸಮುದಾಯದ ಬಾಲಕಿಗೆ ಆದ ಅನ್ಯಾಯದ ವಿರುದ್ಧ ಮಾತನಾಡದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅಲ್ಲಿನ ಶಾಸಕ ನಡೆಯ ಬಗ್ಗೆ ಖಂಡಿಸುತ್ತೇವೆ ಎಂದು ಹೇಳಿದರು.
ಆನಂತರ ಸಮನ್ವಯ ಸಮಿತಿಯ ಸಂಚಾಲಕರಾದ ಆನಂದ ಬೆಳ್ಳಾರೆ ಅವರು ಮಾತನಾಡಿ, ಆರೋಪಿಯ ವಿರುದ್ಧ ಪೋಕ್ಸೋ ಮತ್ತು ದಲಿತ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ. ಎಫ್ಐಆರ್ ಆಗಿ 24 ಗಂಟೆಯ ಒಳಗೆ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾದ ಪೊಲೀಸರು ಈ ವರೆಗೆ ಬಂಧಿಸದೆ ಆರೋಪಿಯ ರಕ್ಷಣೆಗೆ ಎಲ್ಲಾ ರೀತಿಯ ಸಹಕಾರ ನೀಡಿರುವುದು ಸ್ಪಷ್ಟವಾಗಿದೆ. ಆದುದರಿಂದ ಆರೋಪಿ ನಾರಾಯಣ ರೈಯನ್ನು ತಕ್ಷಣ ಬಂಧಿಸಬೇಕು ಹಾಗೂ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕು ಇಲ್ಲವಾದಲ್ಲಿ ಸಂಪ್ಯ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಲು ಸಂಘಟನೆ ಮುಂದಾಗುವುದಾಗಿ ಎಚ್ಚರಿಸಿದರು.
ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಸಮನ್ವಯ ಸಮಿತಿಯ ಮುಖಂಡರಾದ ರಮೇಶ್ ಕೋಟ್ಯಾನ್, ರಘು ಕೆ. ಎಕ್ಕಾರು, ಸರೋಜಿನಿ ಬಂಟ್ವಾಳ, ಗಿರೀರ್ಶ ಕುಮಾರ್, ಸುಧಾಕರ ಬೋಳೂರು, ಕಮಲಾಕ್ಷ ಬಜಾಲ್. ಗಣೇಶ್ ಸೂಟರ್ ಪೇಟೆ ಉಪಸ್ಥಿತರಿದ್ದರು.