ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಮಚಂದ್ರ ಬೈಕಂಪಾಡಿ : ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ವತಿಯಿಂದ ಸನ್ಮಾನ
ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಮಚಂದ್ರ ಬೈಕಂಪಾಡಿ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ರಾಮಚಂದ್ರ ಬೈಕಂಪಾಡಿ ಅವರ ಗಣನೀಯ ಸೇವೆಯನ್ನು ಗುರುತಿಸಿ ಕರ್ನಾಟ ರಾಜ್ಯವು ಈ ಬಾರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಆ ಹಿನ್ನೆಲೆಯಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮೊಗವೀರ ಮಾಸಪತ್ರಿಕೆಯ ಸಂಪಾದಕರು ಹಾಗೂ ಮುಂಬಯಿ ಪ್ರಧಾನ ಶಾಖೆಯ ಉಪಾಧ್ಯಕ್ಷರಾದ ಅಶೋಕ್ ಸುವರ್ಣ ಅವರು ಹಿಂದಿನ ಕಾಲದಲ್ಲಿ ಮೊಗವೀರ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಲು ತುಂಬಾನೆ ಕಷ್ಟ ಪಡುತ್ತಿದ್ದರು. ಅದರಲ್ಲಿ ರಾಮಚಂದ್ರ ಬೈಕಂಪಾಡಿ ಅವರು ಜಯಶೀಲರಾಗಿದ್ದಾರೆ. ಅವರ ಕಠಿಣ ಪರಿಶ್ರಮದಿಂದಲೇ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವುದು ಸಂತೋಷದ ವಿಚಾರ ಎಂದು ಹೇಳಿದರು.
ಆನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಮಚಂದ್ರ ಬೈಕಂಪಾಡಿ ಅವರು, ರಾಜ್ಯೋತ್ಸವ ಪ್ರಶಸ್ತಿ ಪಡೆದ ನನ್ನನ್ನು ಸನ್ಮಾನಿಸಿ ಅಭಿನಂದಿಸಿರುವುದು ಸಂತೋಷದ ವಿಚಾರ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಂಬಯಿ ವ್ಯವಸ್ಥಾಪನಾ ಮಂಡಳಿಯ ಪ್ರಧಾನ ಶಾಖೆಯ ಅಧ್ಯಕ್ಷರಾದ ಕೆ.ಎಲ್. ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಶಾಖಾಧ್ಯಕ್ಷರಾದ ಭರತ್ ಕುಮಾರ್ ಎರ್ಮಾಳ್, ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಉಳ್ಳಾಲ, ಜತೆ ಕಾರ್ಯದರ್ಶಿ ಮೋಹನ್ ಕೋಡಿಕಲ್ ಹಾಗೂ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.