ಹಡೀಲು ಭೂಮಿಯಲ್ಲಿ ಕೃಷಿಕ್ರಾಂತಿ:ಅಮ್ಮುಂಜೆಯಲ್ಲಿ ಶಾಸಕ ರಾಜೇಶ್ ನಾಯಕ್ ರಿಂದ ಚಾಲನೆ
ಬಂಟ್ವಾಳ: ಹಡಿಲು ಭೂಮಿಯಲ್ಲಿ ಕೃಷಿಕ್ರಾಂತಿ ಎಂಬ ಬಂಟ್ವಾಳ ಶಾಸಕರ ಯೋಜನೆಯಂತೆ ಬಿಜೆಪಿ ಯುವಮೋರ್ಚಾ ತಂಡದ ವತಿಯಿಂದ ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿಯವರ ಮುಂದಾಳತ್ವದಲ್ಲಿ ಅಮ್ಮುಂಜೆ ಪರಿಸರದ ಸುಮಾರು 5 ಎಕರೆ ಹಡಿಲು ಭೂಮಿಯಲ್ಲಿ ಕೃಷಿ ಚಟುವಟಿಕೆಗೆ ಬಂಟ್ವಾಳ ಶಾಸಕ ರಾಜೇಶ್ ನಾಕ್ ಭಾನುವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಯುವ ಸಮುದಾಯ ಕೃಷಿಯತ್ತ ಒಲವು ತೋರಿದರೆ ಈ ದೇಶದಲ್ಲಿ ಕೃಷಿಯಲ್ಲಿ ಮಹತ್ತರವಾದ ಬದಲಾವಣೆ ಸಾಧ್ಯ ಎಂದು ಹೇಳಿದರು. ಈ ವರ್ಷ ಜಿಲ್ಲೆಯಲ್ಲಿ ಹಡಿಲು ಬಿದ್ದ ಭೂಮಿಯಲ್ಲಿ ಕೃಷಿ ಮಾಡಲು ಬಿಜೆಪಿ ಹೆಚ್ಚಿನ ಒತ್ತು ನೀಡಿದ್ದು,ತಾಲೂಕಿನಲ್ಲಿ ಸುಮಾರು 600 ಎಕರೆಯಷ್ಟು ಹಡಿಲು ಬಿದ್ದ ಕೃಷಿ ಭೂಮಿಗೆ ಕಾಯಕಲ್ಪ ನೀಡಲು ಬಿಜೆಪಿ ಯುವಮೋರ್ಚಾ ಮುಂದಾಗಿದೆ. ಕ್ಷೇತ್ರದ ಉಳಿದ ಆರು ಮಹಾ ಶಕ್ತಿಕೇಂದ್ರದಲ್ಲಿಯೂ ಕೂಡ ಹಡಿಲು ಭೂಮಿಯಲ್ಲಿ ವ್ಯವಸ್ಥಿತವಾಗಿ ಕೃಷಿಕ್ರಾಂತಿ ನಡೆಸುವ ಯೋಜನೆಯನ್ನು ಹಾಕಲಾಗಿದೆ ಎಂದು ಅವರು ತಿಳಿಸಿದರು. ಕಳೆದ ಹತ್ತು ವರ್ಷಗಳ ಹಿಂದೆಯೇ ತುಳು ನಾಡ ಕೃಷಿ ಕ್ರಾಂತಿ ಎಂಬ ಯೋಜನೆಯಡಿ ಕೃಷಿ ಚಟುವಟಿಕೆ ಆರಂಭ ಮಾಡಿತ್ತು. ಪ್ರಸ್ತುತ ಬಿಜೆಪಿ ಯುವಮೋರ್ಚಾ ಈ ಯೋಜನೆಗೆ ಮುತುವರ್ಜಿ ವಹಿಸಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ದೇಶದ ಆರ್ಥಿಕ ವ್ಯವಸ್ಥೆ ಗೆ ಬಲ ತಂದಿದೆ. ಕರೊನಾ ಸಂಕಷ್ಟದ ದಿನಗಳಲ್ಲಿಯೂ ದೇಶದಲ್ಲಿ ಕೃಷಿ ಚಟುವಟಿಕೆಗೆ ಪ್ರೋತ್ಸಾಹ ನೀಡಲಾಗಿತ್ತು ಎಂದರು.
ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಮಾತನಾಡಿ ಸರಕಾರದ ವಿಶೇಷ ಸವಲತ್ತುಗಳನ್ನು ಪಡೆದು ಕೊಂಡು ರೈತರು ಸ್ವಯಂಪ್ರೇರಿತರಾಗಿ ಕೃಷಿ ಮಾಡಬೇಕು ಎಂಬುದು ಮೋದಿಯವರ ಕನಸು ಆಗಿದ್ದು ಎಲ್ಲಾ ಕೃಷಿಕರಿಗೆ ಪ್ರೇರಣೆಯಾಗುವ ನಿಟ್ಟಿನಲ್ಲಿ ಕೃಷಿ ಕ್ರಾಂತಿಯ ಯೋಚನೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಹಡಿಲು ಬಿದ್ದ ಎಲ್ಲಾ ಕೃಷಿ ಭೂಮಿಗಳು ಸಾಗುವಳಿಗೆ ಒಳಪಡಲಿ ಎಂದು ಶುಭ ಹಾರೈಸಿದರು.
ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ ಮಾತನಾಡಿ ಯುವ ಮೋರ್ಚಾದ ಮೂಲಕ ಹಡಿಲು ಕೃಷಿಗೆ ಯುವಕರು ಮುಂದಾಗಿದ್ದು ಇತರರಿಗೆ ಪ್ರೇರಣೆ ನೀಡುವ ಮೂಲಕ ಇನ್ನಷ್ಟು ಕೃಷಿ ಗೆ ಒತ್ತು ನೀಡುತ್ತೇವೆ ಎಂದು ಹೇಳಿದರು
ಬಿಜೆಪಿ ಬಂಟ್ವಾಳ ಯುವಮೋರ್ಚಾ ಅಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಕಾರ್ಯದರ್ಶಿ ರಮಾನಾಥ್ ರಾಯಿ, ಜಿಲ್ಲಾ ಕಾರ್ಯಕಾರಣಿ ಸದಸ್ಯ ವಿನಿತ್ ಶೆಟ್ಟಿ ಪೆರಾಜೆ, ಕ್ಷೇತ್ರ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಶೆಟ್ಟಿ ದಂಬೆದಾರ್ ಹಾಗೂ ಅಶ್ವಥ್ ರಾವ್ ಬಾಳಿಕೆ, ಪ್ರಮೋದ್ ನೂಜಿಪ್ಪಾಡಿ, ನಿಶಾಂತ್ ಶೆಟ್ಟಿ, ಜಯಾನಂದ್ ಅಲ್ಲಿಪಾದೆ, ದಯಾನಂದ ಎರ್ಮೆನಾಡ್ ಹಾಗೂ ಅಮ್ಮುಂಜೆ ಗ್ರಾಮಪಂಚಾಯತಿ ಅಧ್ಯಕ್ಷ ವಾಮನ ಆಚಾರ್ಯ, ಉಪಾಧ್ಯಕ್ಷೆ ಪ್ರಮೀಳಾ ಹಾಗೂ ಸದಸ್ಯರಾದ ರೋನಾಲ್ಡ್ , ಭಾಗೀರಥಿ ,ಕಾರ್ತಿಕ್ ಬಳ್ಳಾಲ್, ಜನಾರ್ಧನ್ ದಾಸಿಮಾರ್, ಜಯಂತ ಅಮ್ಮುಂಜೆ, ದಿನೇಶ್ ಗಾನೆಮಾರ್, ಉಮೇಶ್ ಪೂಜಾರಿ, ಬಾಬು ಪೂಜಾರಿ, ಪ್ರಕಾಶ್ ದಾಸಿಮಾರ್, ಪ್ರಶಾಂತ್ ಕುಲಾಲ್, ದಿಶಾಂತ್ ಮತ್ತು ಪಕ್ಷದ ಹಾಗೂ ಯುವಮೋರ್ಚಾದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.