ಹೆಚ್ಡಿಕೆ ಒಂದು ವಾರ ಶಾಖೆಗೆ ಬಂದು ಆರ್ಎಸ್ಎಸ್ ಬಗ್ಗೆ ತಿಳಿದುಕೊಳ್ಳಲಿ: ನಳಿನ್ ಕುಮಾರ್ ಕಟೀಲ್
ಮಂಗಳೂರು: ಮಾಜಿ ಮುಖ್ಯ ಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಮೊದಲು ಒಂದು ವಾರ ಶಾಖೆಗೆ ಬಂದು ಆರ್ಎಸ್ಎಸ್ ಬಗ್ಗೆ ತಿಳಿದುಕೊಳ್ಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಇತ್ತೀಚೆಗೆ ಕುಮಾರಸ್ವಾಮಿ ಅವರು ಆರ್ಎಸ್ಎಸ್ ಬಗ್ಗೆ ನೀಡಿದ ಹೇಳಿಕೆಗೆ ನಗರದಲ್ಲಿಂದು ಸುದ್ದಿಗಾರರಿಗೆ ಪ್ರತಿಕ್ರೀಯೆ ನೀಡಿದರು. ಕಾಮಲೆ ರೋಗಿಗೆ ಜಗತ್ತೆಲ್ಲ ಹಳದಿಯಾಗಿ ಕಾಣುವಂತೆ ಕುಮಾರಸ್ವಾಮಿ ಆರ್ಎಸ್ಎಸ್ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಆರ್ಎಸ್ಎಸ್ ರಾಷ್ಟ್ರ ಭಕ್ತಿ, ದೇಶ ಸೇವೆಗೆ ಇನ್ನೊಂದು ಹೆಸರು. ಕುಮಾರಸ್ವಾಮಿ, ಕುಟುಂಬ ರಾಜಕಾರಣ, ಜಾತಿ ರಾಜಕಾರಣ ನಡೆಸುತ್ತಾ ಬಂದವರು. ತಮ್ಮ ಕುಟುಂಬ, ಜಾತಿಯವರನ್ನು ಆಯಕಟ್ಟಿನ ಜಾಗದಲ್ಲಿ ಇರಿಸಿಕೊಂಡು ಬಂದವರು. ಜೆಡಿಎಸ್ ಮುಖಂಡರಾಗಿದ್ದ ಸಿಂಧ್ಯಾರವರು ಆರ್ಎಸ್ಎಸ್ ಮೂಲಕ ಬಂದವರು. ದೇಶದಲ್ಲಿ ಸುಮಾರು 60 ಸಾವಿರಕ್ಕೂ ಹೆಚ್ಚು ಸಂಸ್ಥೆಗಳನ್ನು ನಡೆಸುತ್ತಾ, ದೇಶದ ಜನರಲ್ಲಿ ವ್ಯಕ್ತಿತ್ವ ನಿರ್ಮಾಣ,ರಾಷ್ಟ್ರ ನಿರ್ಮಾಣ ಮಾಡುವ ಕೆಲಸವನ್ನು ಆರ್ಎಸ್ಎಸ್ ಮಾಡುತ್ತಾ ಬಂದಿದೆ ಹೊರತು ಐಎಎಸ್, ಐಪಿಎಸ್ ಅಧಿಕಾರಿಗಳನ್ನು ನೇಮಿಸುವ ಕೆಲಸದಲ್ಲಿ ಆರ್ಎಸ್ಎಸ್ ತೊಡಗಿಕೊಂಡಿಲ್ಲ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.