ವಿಂಡೀಸ್ ಸರಣಿ: ಪದಾರ್ಪಣೆ ಮಾಡಲಿದ್ದಾರಾ ಬಿಷ್ಣೋಯ್, ಆವೇಶ್ ಖಾನ್ ಮತ್ತು ಹೂಡಾ?

ದಕ್ಷಿಣಾ ಆಫ್ರಿಕಾ ವಿರುದ್ಧ ಟೆಸ್ಟ್ ಮತ್ತು ಏಕದಿನ ಸರಣಿಯಲ್ಲಿ ಹೀನಾಯ ಸೋಲನುಭವಿಸಿರುವ ಭಾರತ ಕ್ರಿಕೆಟ್ ತಂಡ ಫೆ.06ರಿಂದ ವೆಸ್ಟ್ ಇಂಡೀಸ್ ವಿರುದ್ಧ ತಲಾ ಮೂರು ಪಂದ್ಯಗಳ ಏಕದಿನ ಮತ್ತು ಟಿ-20 ಸರಣಿಯನ್ನು ಆಡಲಿದೆ. ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಅವರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ಇದು ಮೊದಲ ಸರಣಿ. ಈ ಕಾರಣಕ್ಕಾಗಿಯೇ ಈ ಸರಣಿ ಈಗಾಗಲೇ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಅಲ್ಲದೆ, ಯುವ ಆಟಗಾರರಾದ ರವಿ ಬಿಷ್ಣೋಯ್,ಆವೇಶ್ ಖಾನ್ ಮತ್ತು ದೀಪಕ್ ಹೂಡಾ ಅವರಿಗೆ ಈ ಟೂರ್ನಿಯಲ್ಲಿ 15ರ ಬಳಗದಲ್ಲಿ ಅವಕಾಶ ನೀಡಿರುವುದು ಭವಿಷ್ಯದ ಭರವಸೆಗೆ ಕಾರಣವಾಗಿದೆ. ಆದರೆ, ಇವರಿಗೆ ಆಡುವ 11ರ ಬಳಗದಲ್ಲಿ ಅವಕಾಶ ನೀಡಲಾಗುತ್ತದೆಯಾ? ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.

ಹೊಸ ಮನ್ವಂತರದತ್ತ ಭಾರತ ಕ್ರಿಕೆಟ್:
ಭಾರತೀಯ ಕ್ರಿಕೆಟ್ನಲ್ಲಿ ಇದು ಬದಲಾವಣೆಯ ಕಾಲ. ಅಲ್ಲದೆ, ಭವಿಷ್ಯದಲ್ಲಿ ಉತ್ತಮ ತಂಡ ರೂಪಿಸಲು ಇದು ಸಕಾಲ. ಭಾರತ ತಂಡದ ಅಗ್ರಜರಾಗಿರುವ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಅಜಿಂಕ್ಯಾ ರಹಾನೆ, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ ಈಗಾಗಲೇ 34ರ ಆಸುಪಾಸಿನಲ್ಲಿದ್ದಾರೆ. ಮುಂದಿನ ವಿಶ್ವಕಪ್ ನಂತರ ಈ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ವಿದಾಯಗೊಳ್ಳುವುದು ಬಹುತೇಕ ಖಚಿತ. ಹೀಗಾಗಿ ಈ ಹಿರಿಯ ಆಟಗಾರರಿಗೆ ಈಗಲೇ ಬದಲಿಯನ್ನು ಹುಡುಕಿಕೊಳ್ಳಬೇಕಾದ ಅಗತ್ಯ ಇದೆ.
ಇದೇ ಕಾರಣಕ್ಕೆ ಕಳೆದ ವರ್ಷ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಅವಕಾಶ ನೀಡಲಾಗಿತ್ತು. ಈ ಇಬ್ಬರೂ ಆಟಗಾರರು ಅತ್ಯುತ್ತಮ ಪ್ರದರ್ಶನವನ್ನೇ ನೀಡಿದ್ದರು. ಪರಿಣಾಮ ಇವರನ್ನು ಟಿ-20 ವಿಶ್ವಕಪ್ಗೂ ಆಯ್ಕೆ ಮಾಡಲಾಗಿತ್ತು. ಇನ್ನೂ ಈ ವರ್ಷ ಉತ್ತಮ ಆಲ್ರೌಂಡರ್ ಹುಡುಕಾಟದ ನೆಪದಲ್ಲಿ ವೆಂಕಟೇಶ್ ಅಯ್ಯರ್ ಅವರಿಗೂ ಅವಕಾಶ ನೀಡಿದ್ದ ಬಿಸಿಸಿಐ ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್, ಆಲ್ರೌಂಡರ್ ದೀಪಕ್ ಹೂಡಾ ಮತ್ತು ಆವೇಶ್ ಖಾನ್ ಅವರಿಗೆ ಅವಕಾಶ ನೀಡಲಾಗಿದೆ.
ಪದಾರ್ಪಣೆ ನಿರೀಕ್ಷೆಯಲ್ಲಿ ಕಿರಿಯರು:
21 ವರ್ಷದ ರವಿ ಬಿಷ್ಣೋಯ್, 26 ವರ್ಷದ ದೀಪಕ್ ಹೂಡಾ ಹಾಗೂ 25 ವರ್ಷದ ಆವೇಶ್ ಖಾನ್ಗೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಅವಕಾಶ ನೀಡಲಾಗಿದೆ. ವೇಗದ ಬೌಲರ್ ಆವೇಶ್ ಖಾನ್ ಇತ್ತೀಚೆಗೆ ಮುಕ್ತಾಯವಾದ ಐಪಿಎಲ್ 2021ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕಾಗಿ ಆಡಿ ಅತ್ಯುತ್ತಮ ಪ್ರದರ್ಶನ ನೀಡಿದ್ದರೆ, ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಅಂಡರ್ 19 ವಿಶ್ವಕಪ್ ತಂಡದಲ್ಲಿ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಈ ಅನುಭವ ಅವರನ್ನು ಪಂಜಾಬ್ ಕಿಂಗ್ಸ್ ತಂಡದ ಭಾಗವಾಗಿಸಿದ್ದು ಅದ್ಭುತ ಪ್ರದರ್ಶನವನ್ನೂ ನೀಡಿದ್ದಾರೆ.

ಇನ್ನೂ ಬರೋಡಾದ ಆಲ್ರೌಂಡರ್ ದೀಪಕ್ ಹೂಡಾ ಸಹ ಈ ವರ್ಷ ದೇಶಿ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅಲ್ಲದೆ, ಪಂಜಾಬ್ ಕಿಂಗ್ಸ್ ಪರ ಐಪಿಎಲ್ನಲ್ಲೂ ಮಿಂಚು ಹರಿಸಿದ್ದಾರೆ. ಹೀಗಾಗಿ ಈ ಆಟಗಾರರಿಗೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲೂ ಆಡುವ ಅವಕಾಶ ಸಿಗಲಿದೆ ಎಂದೇ ನಂಬಲಾಗಿದೆ. ಇನ್ನೂ ಈ ವರ್ಷ ದೇಶಿ ಕ್ರಿಕೆಟ್ನಲ್ಲಿ ಅದ್ಭುತ ಆಲ್ರೌಂಡ್ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಹಿಮಾಚಲ ಪ್ರದೇಶ ತಂಡದ ನಾಯಕ ರಿಶಿ ಧವನ್ ಅವರಿಗೆ ಏಕೆ ಅವಕಾಶ ನೀಡಲಾಗಿಲ್ಲ? ಎಂಬ ಪ್ರಶ್ನೆಯೂ ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿದೆ.