ಕೋವಿಡ್ ಪರಿಹಾರಕ್ಕೆ ಜನರ ನೆರವು: ಪಿಎಂ ಕೇರ್ಸ್ಗೆ ಮತ್ತಷ್ಟು ಹಣ!

ಕೋವಿಡ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ಸ್ಥಾಪಿಸಲಾದ ಪಿಎಂ ಕೇರ್ಸ್ ಫಂಡ್, 2020-21ರ ಹಣಕಾಸು ವರ್ಷದಲ್ಲಿ ರೂ. 10,990 ಕೋಟಿ ಹಣ ಸಂಗ್ರಹಣೆಯಾಗಿದೆ. ಲೆಕ್ಕ ಪರಿಶೋಧನೆಯ ಪ್ರಕಾರ ಒಂದು ವರ್ಷದಲ್ಲಿ ಜನರ ಕೊಡುಗೆ ರೂ. 3,976 ಕೋಟಿಗಳಷ್ಟು ಏರಿಕೆಯಾಗಿದೆ. ಈ ಮೊತ್ತದಿಂದ ವಲಸಿಗರ ಕಲ್ಯಾಣಕ್ಕಾಗಿ ರೂ. 1,000 ಕೋಟಿ ಮತ್ತು ಕೋವಿಡ್ ಲಸಿಕೆ ಡೋಸ್ಗಳ ಸಂಗ್ರಹಣೆಗಾಗಿ ರೂ. 1,392 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ.
ಈ ನಿಧಿಗೆ ವಿದೇಶಿಯರಿಂದ ಅಂದಾಜು ರೂ. 494.91 ಕೋಟಿ ಹರಿದು ಬಂದಿದೆ ಮತ್ತು ಭಾರತದಿಂದ ಆಂತರಿಕವಾಗಿ ರೂ. 7,183 ಕೋಟಿ ಸಂಗ್ರಹವಾಗಿದೆ. 2019-20ರಲ್ಲಿ ರೂ. 3,076.62 ಕೋಟಿಗಳಷ್ಟು ದೇಣಿಗೆ ಈ ನಿಧಿಗೆ ಬಂದಿದೆ ಎಂದು ಹೇಳಲಾಗಿದೆ. ‘ಪ್ರಧಾನ ಮಂತ್ರಿ ನಾಗರಿಕ ನೆರವು ಮತ್ತು ತುರ್ತು ಪರಿಸ್ಥಿತಿ ನಿಧಿ (ಪಿಎಂ ಕೇರ್ಸ್ ಫಂಡ್)’ ವೆಬ್ತಾಣದ ಪ್ರಕಾರ, “ಸಂಪೂರ್ಣವಾಗಿ ವ್ಯಕ್ತಿಗಳು ಸಂಸ್ಥೆಗಳಿಂದ ಸ್ವಯಂಪ್ರೇರಿತ ಕೊಡುಗೆಗಳನ್ನು ಒಳಗೊಂಡಿದೆ” ಎನ್ನುವ ವಿವರವಿದೆ.
ನಿಧಿಯ ಕೊಡುಗೆಗಳು ಮತ್ತು ವೆಚ್ಚಗಳು ಪಾರದರ್ಶಕವಾಗಿಲ್ಲ ಎಂದು ಪಿಎಂ ಕೇರ್ಸ್ ನಿಧಿಯನ್ನು ವಿಪಕ್ಷಗಳು ಟೀಕಿಸಿವೆ. ಇದಕ್ಕೆ ಪ್ರತಿಕ್ರಿಯಿಸಿ ಸರ್ಕಾರವು ನೀಡಿರುವ ಇತ್ತೀಚಿನ ಲೆಕ್ಕಪರಿಶೋಧನೆಯ ಹೇಳಿಕೆಯ ಪ್ರಕಾರ, 9 ರಾಜ್ಯಗಳಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಭಾರತದಲ್ಲಿ ತಯಾರಿಸಿದ 50,000 ವೆಂಟಿಲೇಟರ್ಗಳನ್ನು ನೀಡಲು ರೂ. 1,311 ಕೋಟಿ ವೆಚ್ಚ ಮಾಡಲಾಗಿದೆ. ಅಲ್ಲದೆ, ಮುಜಫರ್ಪುರ ಮತ್ತು ಪಾಟ್ನಾದಲ್ಲಿ ಎರಡು 500 ಹಾಸಿಗೆಗಳ ಕೋವಿಡ್ ಆಸ್ಪತ್ರೆಗಳ ಸ್ಥಾಪನೆಗೆ ರೂ. 50 ಕೋಟಿ ಮತ್ತು 16 ಆರ್ಟಿ-ಪಿಸಿಆರ್ ಪರೀಕ್ಷಾ ಪ್ರಯೋಗಾಲಯಗಳಿಗೆ ಹಣ ವಿತರಿಸಲಾಗಿದೆ.
ಹೆಚ್ಚುವರಿಯಾಗಿ, ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿನ ಆಮ್ಲಜನಕ ಘಟಕಗಳಿಗೆ 201.58 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಕೋವಿಡ್ ಲಸಿಕೆಗಳ ಮೇಲೆ ಕೆಲಸ ಮಾಡುವ ಪ್ರಯೋಗಾಲಯಳ ಉನ್ನತೀಕರಣಕ್ಕಾಗಿ 20.4 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ವಲಸಿಗರ ಕಲ್ಯಾಣಕ್ಕಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರೂ.1,000 ಕೋಟಿ ಮಂಜೂರಾಗಿದೆ. 6.6 ಕೋಟಿ ಡೋಸ್ ಕೋವಿಡ್ ಲಸಿಕೆಗಳ ಖರೀದಿಗೆ ರೂ.1,392.82 ಕೋಟಿ ವಿತರಣೆ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ.