ಕಡಬ : ಕ್ಷುಲ್ಲಕ ವಿಚಾರಕ್ಕೆ ಮನೆಯವರೊಂದಿಗೆ ಮನಸ್ತಾಪ – ಇಲಿಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಸಾವು

ಕಡಬ : ಕಡಬ ಠಾಣಾ ವ್ಯಾಪ್ತಿಯ ಬಿಳಿನೆಲೆ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಕ್ಷುಲ್ಲಕ ವಿಚಾರಕ್ಕೆ ಮನಸ್ತಾಪಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ನಡೆದಿದೆ.
ಬಿಳಿನೆಲೆ ಗ್ರಾಮ ಸೂಡ್ಲು ನಿವಾಸಿ ದುಗ್ಗಪ್ಪ ಗೌಡರ ಪುತ್ರ ಪ್ರಸಾದ್ (34) ಮೃತ ಯುವಕ.
ಕಳೆದ 26 ನೇ ತಾರೀಖಿನಂದು ಮೃತ ಪ್ರಸಾದ್ ಕಡಬದ ಅಂಗಡಿಯೊಂದರಲ್ಲಿ ನೌಕರಿಗಾಗಿ ಆಯ್ಕೆಯಾಗಿದ್ದು, ಅಲ್ಲಿ ಕೆಲಸ ಮಾಡಲು ದ್ವಿಚಕ್ರ ವಾಹನದ ಅವಶ್ಯಕತೆ ಇತ್ತು ಎನ್ನಲಾಗಿದೆ. ಇತ್ತ ಮನೆಯಲ್ಲಿ ಹಳೆಯ ಬೈಕ್ ಇದ್ದು, ರಾತ್ರಿ 8:30ರ ವೇಳೆಗೆ ಬೈಕ್ ಅನ್ನು ತನಗೆ ನೀಡುವಂತೆ ಪ್ರಸಾದ್ ತನ್ನ ಮನೆಯವರ ಬಳಿ ಕೇಳಿದ್ದ ಎನ್ನಲಾಗಿದೆ.
ಆದರೆ ಎರಡು ದಿನಗಳ ಕಾಲ ಕಾಯುವಂತೆ ಮನೆಯವರು ಪ್ರಸಾದ್ ಗೆ ಮನವಿ ಮಾಡಿದ್ದು, ಆದರೆ ಬೈಕ್ ನೀಡದ ಸಿಟ್ಟಿನಲ್ಲಿ ಎಲ್ಲರ ಮುಂದೆಯೇ ಮನೆಯಲ್ಲಿದ್ದ ಇಲಿಪಾಷಾಣ ಸೇವಿಸಿದ್ದ ಎನ್ನಲಾಗಿದೆ.
ಆದರೆ ಕೂಡಲೇ ಆತನನ್ನು ತಡೆಯಲು ಮನೆಯವರು ಯತ್ನಿಸಿದ್ದರೂ ಪ್ರಸಾದ್ ಯಾರೂ ಕೂಡ ತನ್ನನ್ನು ಮುಟ್ಟಲು ಬಿಟ್ಟಿರಲಿಲ್ಲ ಎನ್ನಲಾಗಿದೆ. ಆದರೆ ಕೊನೆಗೂ ಆತನನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ಚಿಕಿತ್ಸೆ ನೀಡಿ, ಬಳಿಕ ಮಂಗಳೂರಿನ ಯುನಿಟಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.