ಕಾರ್ಮಿಕ ಕಲ್ಯಾಣ ಮಂಡಳಿ ಅಕ್ರಮಗಳ ತನಿಖೆಗೆ ಆಗ್ರಹಿಸಿ ಪ್ರತಿಭಟನೆ: ನಕಲಿ ಕಾರ್ಮಿಕರ ನೋಂದಣಿ ರದ್ದುಗೊಳಿಸಿ : ರಾಮಲಿಂಗಾ ರೆಡ್ಡಿ

ಬೆಂಗಳೂರು, ಸೆ, 27; ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಡೆದಿರುವ ಭಾರೀ ಅಕ್ರಮಗಳ ವಿರುದ್ಧ ತನಿಖೆ ನಡೆಸಬೇಕು. ಭ್ರಷ್ಟರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕೆಪಿಸಿಸಿ ಕಾರ್ಮಿಕ ವಿಭಾಗ ಪದಾಧಿಕಾರಿಗಳು ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿ ಮುಂಭಾಗ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಇತ್ತೀಚಿನ ದಿನಗಳಲ್ಲಿ ಕಲ್ಯಾಣ ಮಂಡಳಿ ನೈಜ ಕಾರ್ಮಿಕರಿಂದ ದೂರವಾಗುತ್ತಿದ್ದು, ಕಾರ್ಮಿಕರಿಗೆ ಸೂಕ್ತ ಪರಿಹಾರ ಮತ್ತು ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ಮಂಡಳಿಯಲ್ಲಿ ನಕಲಿ ಕಾರ್ಮಿಕರು ನುಸುಳುತ್ತಿದ್ದು, ಇದನ್ನು ತಡೆಯದಿದ್ದರೆ ಇಡೀ ಮಂಡಳಿ ದಿವಾಳಿಯಾಗಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಮಂಡಳಿಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು, ಕಾರ್ಮಿಕರ ಸೌಲಭ್ಯಗಳು ಉಳ್ಳವರ ಪಾಲಾಗುತ್ತಿವೆ. ಸಂಕಷ್ಟದಲ್ಲಿರುವವರಿಗೆ ಸೂಕ್ತ ನೆರವು ನೀಡುತ್ತಿಲ್ಲ. ಕಟ್ಟಡ ಕಾರ್ಮಿಕರ ಪರವಾಗಿ ಕಾರ್ಯನಿರ್ವಹಿಸಬೇಕಾದ ಮಂಡಳಿ ಗುತ್ತಿಗೆದಾರರು, ರಾಜಕಾರಣಿಗಳ ಮರ್ಜಿಯಂತೆ ಕೆಲಸ ಮಾಡುತ್ತಿದೆ. ಇದರಿಂದ ನೈಜ ಕಾರ್ಮಿಕರಿಗೆ ಪರಮ ಅನ್ಯಾಯವಾಗಿದೆ ಎಂದು ಘೋಷಣೆ ಕೂಗಿದರು.

 

 

ಮಾಜಿ ಸಚಿವ ರಾಮಲಿಂಗರೆಡ್ಡಿ ಮಾತನಾಡಿ, ಸಿ.ಎಸ್.ಸಿ ಸೆಂಟರ್ ಮಾಲೀಕರು ಕಟ್ಟಡ ಕಾರ್ಮಿಕರಲ್ಲದವರನ್ನು ಸಹ ನಕಲಿ ಮಾಲೀಕರ ಸಹಿಯೊಂದಿಗೆ ನೋಂದಣಿಮಾಡಿಸುತ್ತಿದ್ದು. ಇದರಿಂದ ಮಂಡಳಿಗೆ ನಕಲಿ ಫಲಾನುಭವಿಗಳು ಸೇರ್ಪಡೆಯಾಗುತ್ತಿದ್ದಾರೆ. ಹೀಗಾಗಿ ತಕ್ಷಣ ಸಿ.ಎಸ್.ಸಿ ಸೆಂಟರ್ ಗಳಲ್ಲಿ ನೋಂದಣಿ ನಿಲ್ಲಿಸಬೇಕು. ಇಲ್ಲಿ ಈಗಾಗಲೇ ನೀಡಿರುವ ನೋಂದಣಿ ಪ್ರಮಾಣ ಪತ್ರಗಳನ್ನು ರದ್ದುಗೊಳಿಸಬೇಕು. ಕಾರ್ಮಿಕ ಕಛೇರಿ ಹಾಗೂ ಟ್ರೇಡ್ ಯೂನಿಯನ್ ಮುಖಾಂತರ ನೋಂದಣಿ ಪ್ರಕ್ರಿಯೆ ಮುಂದುವರೆಸಬೇಕು ಎಂದು  ಆಗ್ರಹಿಸಿದರು.

ಕೆಪಿಸಿಸಿ ಕಾರ್ಮಿಕ ವಿಭಾಗದ ಅಧ್ಯಕ್ಷ .ಕೆ ಪುಟ್ಟಸ್ವಾಮಿ ಮಾತನಾಡಿ, 2019 ರ ಜನವರಿಯಿಂದ ಆಗಸ್ಟ್ 2021ರವರೆಗೆ ಆಹಾರ ಕಿಟ್, ಟೂಲ್ ಕಿಟ್, ಸುರಕ್ಷಾ ಕಿಟ್, ಪ್ರತಿರಕ್ಷಣಾ ಕಿಟ್ ಹಾಗೂ ಹಿರಿಯ/ಕಾರ್ಮಿಕ ನಿರೀಕ್ಷಕರ ಕಛೇರಿಗಳಿಗೆ ನೀಡಿರುವ ಟಿ.ವಿ.ಗಳು ಹಾಗೂ ಮಂಡಳಿಗೆ ಖರೀದಿಸಿರುವ ವಾಹನಗಳಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಬೇಕು. ಮೊದಲ ಮತ್ತು ಎರಡನೇ ಅಲೆಯಲ್ಲಿ ಘೋಷಿಸಿದ ಪರಿಹಾರ ವಿತರಣೆಯಾಗಿಲ್ಲ. ಮದುವೆ ಧನ ಸಹಾಯವನ್ನು ಒಂದು ಲಕ್ಷ ರೂ ಗೆ ಹೆಚ್ಚಿಸಬೇಕು, ತಾಯಿ ಲಕ್ಷ್ಮಿ ಬಾಂಡ್ ಅನ್ನು ರದ್ದುಗೊಳಿಸಬೇಕು ಹಾಗೂ ಹೆರಿಗೆ ಸೌಲಭ್ಯವನ್ನು ಮಹಿಳಾ ಫಲಾನುಭವಿಯ ಖಾತೆಗೆ ನೇರವಾಗಿ ಜಮಾ ಮಾಡಬೇಕು ಎಂದು ಹೇಳಿದರು

Related Posts

Leave a Reply

Your email address will not be published.