ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿಗೆ ಯುಜಿಸಿಯಿಂದ ಹೊಸ ಸ್ವಾಯತ್ತ ಸ್ಥಾನಮಾನ

ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿಗೆ 2021-22ರ ಶೈಕ್ಷಣಿಕ ವರ್ಷದಿಂದ ಅನ್ವಯವಾಗುವಂತೆ ಹೊಸ ಸ್ವಾಯತ್ತ ಸ್ಥಾನಮಾನವನ್ನು ನೀಡಲಾಗಿದೆ. ಕಾಲೇಜಿಗೆ 2018ರ ಸ್ವಾಯತ್ತ ಕಾಲೇಜುಗಳ ಯೋಜನೆಯ ಅಡಿಯಲ್ಲಿ ಯುಜಿಸಿ ನೀಡಿದ ಸ್ವಾಯತ್ತತೆಯನ್ನು 2019ರಲ್ಲಿ ಕಾಲೇಜು ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಅನುಮೋದನೆ ನೀಡಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ರಿಯೋ ಡಿಸೋಜಾ ಹೇಳಿದರು

ಕಾಲೇಜಿಗೆ 2018ರ ಸ್ವಾಯತ್ತ ಕಾಲೇಜುಗಳ ಯೋಜನೆಯಡಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು (ಯುಜಿಸಿ) 2019ರಲ್ಲಿ ಕಾಲೇಜು ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ಸ್ವಾಯತ್ತತೆ ನೀಡಿತ್ತು. ಇದನ್ನು ಇತ್ತೀಚೆಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಮುಂಬರುವ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗುವ ಒಂಭತ್ತು ವರ್ಷಗಳ ಅವಧಿಗೆ ಅನುಮೋದಿಸಿದೆ.

ವಾಮಂಜೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಕಲಾಮ್ ಸಭಾಂಗಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ರಿಯೊ ಡಿಸೋಜ, ಯುಜಿಸಿ ತಜ್ಞರ ತಂಡವು 2020ರ ನವೆಂಬರ್ 28, 29ರಂದು ಕಾಲೇಜಿಗೆ ಭೇಟಿ ನೀಡಿ ಕಾಲೇಜನ್ನು ಅನೇಕ ನಿಯತಾಂಕಗಳಲ್ಲಿ ಕಟ್ಟುನಿಟ್ಟಾಗಿ ಪರೀಕ್ಷಿಸಿತ್ತು. ರಾಜ್ಯದ ಬೆರಳೆಣಿಕೆಯಷ್ಟು ಇಂಜಿನಿಯರಿಂಗ್ ಕಾಲೇಜುಗಳು ಮಾತ್ರ ಸ್ವಾಯತ್ತ ಸ್ಥಾನಮಾನವನ್ನು ಪಡೆದಿರುವುದು ಕಾಲೇಜಿನ ವಿಶ್ವಾಸಾರ್ಹತೆ ಹೆಚ್ಚಿಸಿದೆ ಎಂದು ಹೇಳಿದರು.

ಕಾಲೇಜು ತನ್ನ ಎಲ್ಲ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಬದ್ಧವಾಗಿದೆ. ಸ್ವಾಯತ್ತ ಸಂಸ್ಥೆಯ ಸ್ಥಾನಮಾನ ಪಡೆದಿರುವುದು ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಕಾಲೇಜಿಗೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ. ‘ಸೇವೆ ಮತ್ತು ಉತ್ಕೃಷ್ಟತೆ’ ಧ್ಯೇಯವಾಕ್ಯಕ್ಕೆ ಅನುಗುಣವಾಗಿ ಕಾಲೇಜಿನ ಕಠಿಣ ಪರಿಶ್ರಮದಿಂದಾಗಿ ಈ ಮಾನ್ಯತೆ ದೊರಕಿದೆ. ಇದು ಕಾಲೇಜು ಪ್ರಾರಂಭವಾದಾಗಿನಿಂದಲೂ ಅಭ್ಯಾಸ ಮಾಡುತ್ತಿರುವ ಶೈಕ್ಷಣಿಕ ಚೌಕಟ್ಟು ಮತ್ತು ನೀತಿಗಳಿಗೆ ಕನ್ನಡಿ ಹಿಡಿದಂತಿದೆ ಎಂದರು.

ಉದ್ಯಮದ ಅಗತ್ಯ ಗುರುತಿಸುವ ಮೂಲಕ ಪಠ್ಯಕ್ರಮ ವಿನ್ಯಾಸ, ಆಯ್ಕೆಯ ಚುನಾಯಿತ ಕೋರ್ಸ್‌ಗಳನ್ನು ನೀಡುವಿಕೆ, ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಸಹಯೋಗ ನಡೆಸುವಿಕೆ ಮತ್ತು ವಿದ್ಯಾರ್ಥಿಗಳ ನಿರಂತರ ಮೌಲ್ಯಮಾಪನ ನಡೆಸಲು ಕಾಲೇಜಿಗೆ ಸ್ವಾಯತ್ತತೆ ಅನುಕೂಲಕರವಾಗಲಿದೆ ಎಂದು ಅವರು ತಿಳಿಸಿದರು.

ಕಾಲೇಜು ಅನುಸರಿಸುತ್ತಿರುವ ಫಲಿತಾಂಶ-ಆಧಾರಿತ ಶಿಕ್ಷಣದಿಂದಾಗಿ ಎಸ್‌ಜೆಇಸಿ ಈಗಾಗಲೇ ನ್ಯಾಷನಲ್ ಬೋರ್ಡ್ ಆಫ್ ಅಕ್ರೆಡಿಟೇಶನ್‌ಯಿಂದ (ಎನ್‌ಬಿಎ) ತನ್ನ ನಾಲ್ಕು ಬಿ.ಇ. ಕೋರ್ಸ್‌ಗಳಿಗೆ ಮಾನ್ಯತೆ ಪಡೆದಿದೆ. ಇದೇ ವರ್ಷದ ಫೆಬ್ರವರಿಯಲ್ಲಿ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (ನ್ಯಾಕ್) ನಿಂದ ಪ್ರತಿಷ್ಠಿತ ‘ಎ+’ ದರ್ಜೆಯನ್ನು ಸಹ ಪಡೆದಿದೆ ಎಂದು ಮಾಹಿತಿ ನೀಡಿದರು.

 ಕಾಲೇಜು 19 ವರ್ಷಗಳ ಅಸ್ತಿತ್ವವನ್ನು ಹೊಂದಿದ್ದು, ಪ್ರಸ್ತುತ ಕ್ಯಾಂಪಸ್‌ನಲ್ಲಿ 2,500 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ. ಜೊತೆಗೆ ತನ್ನ ಸ್ವಚ್ಛ, ಹಸಿರು ಮತ್ತು ಸ್ಮಾರ್ಟ್ ಕ್ಯಾಂಪಸ್‌ನಿಂದಾಗಿ ಕರಾವಳಿ ಪ್ರದೇಶದ ಇಂಜಿನಿಯರಿಂಗ್ ಆಕಾಂಕ್ಷಿಗಳ ನೆಚ್ಚಿನ ತಾಣವಾಗಿದೆ. ಅಭ್ಯರ್ಥಿಗಳು ಕಾಲೇಜು ನೀಡುವ ಉತ್ತಮ ಮೂಲಸೌಕರ್ಯ, ಶೈಕ್ಷಣಿಕ ವಾತಾವರಣ, ಶಿಸ್ತು, ಅತ್ಯುತ್ತಮ ಉದ್ಯೋಗಾವಕಾಶಗಳು, ಇನ್ಕುಬೇಷನ್ ಸೌಲಭ್ಯಗಳು, ಉದ್ಯಮಶೀಲತೆ ಮತ್ತು ನಾವೀನ್ಯತೆಗೆ ಬೆಂಬಲ, ಸಮರ್ಥ ಅಧ್ಯಾಪಕರು ಮತ್ತು ತಾಂತ್ರಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ನೀಡುವ ಪ್ರೋತ್ಸಾಹದತ್ತ ಆಕರ್ಷಿತರಾಗುತ್ತಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ನಿರ್ದೇಶಕ ವಂ.ವಿಲ್ಫ್ರೆಡ್ ಪ್ರಕಾಶ್ ಡಿಸೋಜ, ಉಪನಿರ್ದೇಶಕ ವಂ.ರೋಹಿತ್ ಡಿಕೋಸ್ತ ಮತ್ತು ವಂ.ಆಲ್ವಿನ್ ರಿಚರ್ಡ್ ಡಿಸೋಜ, ಮಾನವ ಸಂಪನ್ಮೂಲ ವ್ಯವಸ್ಥಾಪಕ ರಾಕೇಶ್ ಲೋಬೊ, ಐಕ್ಯೂಎಸಿ ಸಂಯೋಜಕ ಡಾ.ಶ್ರೀರಂಗ ಭಟ್, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿನ್ಸೆಂಟ್ ಕ್ರಾಸ್ತಾ, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರಮಾನಂದ ಎಚ್.ಎಸ್., ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಬಿನು ಕೆ. ಜಿ. ಉಪಸ್ಥಿತರಿದ್ದರು.

Related Posts

Leave a Reply

Your email address will not be published.