ಮುಂಬೈಯಲ್ಲಿ ವರುಣನ ಆರ್ಭಟ: ರಸ್ತೆ, ರೈಲು ನಿಲ್ದಾಣಗಳಲ್ಲಿ ಪ್ರವಾಹ ಪರಿಸ್ಥಿತಿ
ಮುಂಬೈ: ಗುರುವಾರ ರಾತ್ರಿ ಮತ್ತು ಇಂದು ಬೆಳಗ್ಗೆ ಮುಂಬೈನ ಹಲವು ಏರಿಯಾಗಳಲ್ಲಿ ಸುರಿದ ಭಾರಿ ಮಳೆಗೆ ವಾಣಿಜ್ಯ ನಗರಿಯ ರಸ್ತೆಗಳಲ್ಲಿ ಪ್ರವಾಹ ಸೃಷ್ಟಿಯಾಗಿದ್ದು, ನಗರ ಸಾರಿಗೆ ಜತೆಗೆ ಸ್ಥಳೀಯ ರೈಲು ಕೂಡ ವಿಳಂಬವಾಗಿದೆ. ಗಾಂಧಿ ಮಾರ್ಕೆಟ್ ಏರಿಯಾ, ಹಿಂದ್ಮಟ ಜಂಕ್ಷನ್ ಮತ್ತು ದಹಿಸರ್ ಸಬ್ವೇ ಸೇರಿದಂತೆ ಅನೇಕ ಪ್ರದೇಶಗಳು ಜಲಾವೃತಗೊಂಡಿವೆ.
ಸಿಯಾನ್, ಬಾಂದ್ರಾ, ಅಂಧೇರಿ ಮತ್ತು ಸ್ಯಾಂತಕ್ರುಸ್ ಏರಿಯಾಗಳು ಸಹ ಜಲಾವೃತಗೊಂಡಿವೆ. ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ವಿಡಿಯೋದಲ್ಲಿ ರೈಲು ಹಳಿಗಳು ಕಾಣದಂತೆ ಸಿಯಾನ್ ರೈಲು ನಿಲ್ದಾಣವು ಮಳೆ ನೀರಿನಿಂದ ತುಂಬಿದೆ. ನೂರಾರು ಪ್ರಯಾಣಿಕರು ಪ್ಲಾಟ್ಫಾರ್ಮ್ನಲ್ಲಿ ಆಶ್ರಯ ಪಡೆದುಕೊಂಡಿದ್ದು, ಕರೊನಾ ಸಂದರ್ಭದಲ್ಲಿ ಇದು ಒಳ್ಳೆಯದಲ್ಲ.
ಇನ್ನು ಮುಂಬೈ ನಗರದಲ್ಲಿ ಬೆಳಿಗ್ಗೆ 8.30ಕ್ಕೆ ಅಂತ್ಯವಾಗುವಂತೆ 24 ಗಂಟೆಯಲ್ಲಿ 64.45 ಎಂಎಂ ಮಳೆಯಾಗಿದೆ. ಅದರಲ್ಲೂ ಪೂರ್ವ ಉಪನಗರಗಳಲ್ಲಿ 120.67 ಎಂಎಂ ಮತ್ತು ಪಶ್ಚಿಮ ಉಪನಗರಗಳಲ್ಲಿ 127.16 ಎಂಎಂ ಮಳೆಯಾಗಿದೆ. 4.08 ಮೀಟರ್ ಹೆಚ್ಚಿನ ಉಬ್ಬರವಿಳಿತ ನಿನ್ನೆ ಸಂಜೆ 4.26ಕ್ಕೆ ಮತ್ತು 1.43 ಮೀಟರ್ ಕಡಿಮೆ ಉಬ್ಬರವಿಳಿತ ರಾತ್ರಿ 10.37ಕ್ಕೆ ದಾಖಲಾಗಿದೆ ಎಂದು ನಗರದ ನಾಗರಿಕ ಸಂಸ್ಥೆ ಹೇಳಿದೆ. ಮುಂದಿನ ಮೂರು ಗಂಟೆಗಳಲ್ಲಿ ಮುಂಬೈನಲ್ಲಿ ಮಧ್ಯಮ ತೀವ್ರತೆಯ ಮಳೆಯಾಗಲಿದೆ ಎಂದು ಭಾರತದ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಮಳೆಯಿಂದಾಗಿ ಸಾಕಷ್ಟು ಅವಘಡಗಳು ಸಂಭವಿಸಿವೆ. 20 ಟನ್ ಟೊಮ್ಯಾಟೋ ಸಾಗಿಸುತ್ತಿದ್ದ ಟ್ರಕ್ ಪೂರ್ವ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಉರುಳಿಬಿದ್ದಿದೆ. ಇದಕ್ಕೆ ಸಂಬಂಧಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯಲ್ಲಿ ಓರ್ವ ವ್ಯಕ್ತಿಗೆ ಗಾಯವೂ ಆಗಿದೆ. ತಡರಾತ್ರಿ 2 ಗಂಟೆ ಸುಮಾರಿ ಥಾಣೆ ಹತ್ತಿರದ ಕೊಪಾರಿಯಲ್ಲಿ ನಡೆದಿದೆ.
ಭಾರೀ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳು ಜಲಾವೃತಗೊಂಡು ಸಂಚಾರಕ್ಕೆ ಅಡಚಣೆ ಉಂಟಾಗಿದೆ ಮತ್ತು ಹಲವೆಡೆ ವಿದ್ಯುತ್ ಸಮಸ್ಯೆ ಎದುರಾಗಿದೆ.