ಹೆಮ್ಮಾಡಿ ರಿಕ್ಷಾ ಚಾಲಕರಿಂದ ನಟ ಪುನೀತ್‍ಗೆ ಅಶ್ರುತರ್ಪಣ || Puneeth Rajkumar

ಕುಂದಾಪುರ: ನಟ ಪುನೀತ್ ರಾಜಕುಮಾರ್ ಸಮಾಜಕ್ಕೆ ಬಹುದೊಡ್ಡ ಶಕ್ತಿಯನ್ನು ನೀಡಿದವರು. ಏನೂ ಪ್ರಚಾರ ಬಯಸದೆ ಸಮಾಜದ ಏಳಿಗೆಗಾಗಿ ಸಾಕಷ್ಟು ಶ್ರಮಿಸಿದ ಅಪರೂಪದ ವ್ಯಕ್ತಿತ್ವದ ಪುನೀತ್ ಪರಿಪೂರ್ಣ ವ್ಯಕ್ತಿತ್ವ ಅನಾವರಣಗೊಂಡದ್ದೆ ಅವರ ಸಾವಿನ ಬಳಿಕ ಎನ್ನುವುದು ದುರಂತ ಎಂದು ಶಿಕ್ಷಕ ಉದಯ್ ಬಳೆಗಾರ್ ಹೇಳಿದರು.

ಅವರು ಮಂಗಳವಾರ ಸಂಜೆ ಇಲ್ಲಿನ ಹೆಮ್ಮಾಡಿ ರಿಕ್ಷಾ ನಿಲ್ದಾಣದಲ್ಲಿ ಶ್ರೀ ಲಕ್ಷ್ಮೀನಾರಾಯಣ ರಿಕ್ಷಾ ಚಾಲಕ-ಮಾಲಕರ ಸಂಘದ ವತಿಯಿಂದ, ಇತ್ತೀಚೆಗಷ್ಟೇ ಅಗಲಿದ ನಟ ಪುನೀತ್ ರಾಜಕುಮಾರ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಮೊದಲು ಪುನೀತ್ ಅವರ ಸಾಮಾಜಿಕ ಕಾರ್ಯಗಳ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಎಲ್ಲಾ ಮಾಧ್ಯಮಗಳಲ್ಲೂ ಅವರ ಸಾಮಾಜಿಕ ಕಾರ್ಯದ ಕಳಕಳಿಯ ಚಿಂತನೆಗಳು ಹೊರಹೊಮ್ಮಿದ್ದು ಅವರ ಮರಣದ ನಂತರದ ದಿನಗಳಲ್ಲಿ. ಯಾವುದೇ ಸಿನಿ ತಾರೆಯರು ಮರಣ ಹೊಂದಿದಾಗ ಇಡೀ ಕರಾವಳಿ ಇಷ್ಟೊಂದು ನೋವುಂಡಂತಹ ಇತಿಹಾಸವೇ ಇಲ್ಲ. ಹೆಚ್ಚೆಂದರೆ ಒಂದೆರಡು ದಿನ ಮರೆತು ಎಲ್ಲರೂ ತಮ್ಮ ಕಾಯಕದಲ್ಲಿ ತೊಡಗಿಕೊಳ್ಳುತ್ತಾರೆ. ಆದರೆ ಪುನೀತ್ ರಾಜಮಾರ್ ನಮ್ಮನ್ನಗಲಿ ಹತ್ತು ದಿನಗಳು ಕಳೆದರೂ ಈಗಲೂ ಆ ನೋವು ನಮ್ಮೆಲ್ಲರ ಮನದೊಳಗಿದೆ. ದೇಶದ ಎಲ್ಲಾ ಕಡೆಗಳಲ್ಲೂ ಅವರ ಅಭಿಮಾನಿಗಳು ಕಣ್ಣೀರಾಗಿದ್ದಾರೆ. ಪ್ರತಿಯೊಬ್ಬರೂ ಕೂಡ ಅಂತರಾಳದಿಂದ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದ ಅವರು, ನಟ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಪ್ರಶಸ್ತಿಗೆ ಅನೇಕ ಮಂದಿ ಶಿಫಾರಸು ಮಾಡಿದ್ದಾರೆ. ಅದು ಆದಷ್ಟು ಬೇಗ ಸಿಗಲಿ. ನಮ್ಮ ಕನ್ನಡ ನಾಡಿನ ಹಿರಿಮೆ ಭಾನಂಗಳದಲ್ಲಿ ಮಿನುಗುವಂತಾಗಲಿ ಎಂದರು.

ಹೆಮ್ಮಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ರಾಜು ಪೂಜಾರಿ ಕಾಳೂರಮನೆ ಮಾತನಾಡಿ, ಕರ್ನಾಟಕದ ಹೆಮ್ಮೆಯ ನಟ ಅದಕ್ಕಿಂತಲೂ ಮಿಗಿಲಾಗಿ ಜನಪರ ಕಾಳಜಿಯುಳ್ಳ, ಜನರಿಗೋಸ್ಕರ ಸೇವೆ ಮಾಡಿದ್ದ ಪುನೀತ್ ಇನ್ನಿಲ್ಲವೆಂಬುವುದು ಅರಗಿಸಿಕೊಳ್ಳಲಾಗುತ್ತಿಲ್ಲ. ಬಲಗೈಯ್ಯಲ್ಲಿ ಕೊಟ್ಟಿದ್ದನ್ನು ಎಡಗೈಗೂ ಗೊತ್ತಾಗದ ರೀತಿಯಲ್ಲಿ ಸಮಾಜ ಸೇವೆ ಮಾಡಿದ ಅಪರೂಪದ ನಟನಾಗಿ ಪುನೀತ್ ನಮ್ಮೆಲ್ಲರ ಹೃದಯದಲ್ಲಿ ಮನೆಮಾಡಿದ್ದಾರೆ. ಅವರು ಮಾಡಿರುವಂತಹ ಸಮಾಜ ಸೇವೆ, ಜನಪರ ಕಾಳಜಿಯ ಕೆಲಸ ಇವತ್ತು ಜನರನ್ನು ಮುಟ್ಟಿದೆ ಎಂದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸುಕುಮಾರ್ ಪೂಜಾರಿ, ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಪ್ರವೀಣ ದೇವಾಡಿಗ, ಕಾರ್ಯದರ್ಶಿ ಅರುಣ್ ಎಲ್ ಮೊಗವೀರ, ಗೌರವಾಧ್ಯಕ್ಷ ಮಂಜುನಾಥ ಮೊಗವೀರ, ಗೌರವ ಸಲಹೆಗಾರರಾದ ಜೇಮ್ಸ್ ರೆಬೆರೋ, ಖಜಾಂಚಿ ಸಂತೋಷ ಎನ್ ದೇವಾಡಿಗ ಹಾಗೂ ಸರ್ವಸದಸ್ಯರು, ನಟ ಪುನೀತ್ ಅಭಿಮಾನಿಗಳು ಇದ್ದರು.ರಿಕ್ಷಾ ಚಾಲಕ ಸಂಘದ ರವಿ ಕೆ ಹೆಮ್ಮಾಡಿ ಪ್ರಸ್ತಾಪಿಸಿ ಸ್ವಾಗತಿಸಿದರು.

Related Posts

Leave a Reply

Your email address will not be published.