ಬೆಂಗಳೂರಿನಲ್ಲಿ ಇಬ್ಬರು ವಿದ್ಯಾರ್ಥಿಗಳು ನೀರಿನ ಬಳಕೆಯ ಬಗೆಗೆ ಜಗಳವಾಡಿದ ಪಿಜಿ ಒಡೆಯನನ್ನು ಬ್ಯಾಟಿನಿಂದ ಬಡಿದು ಮುಗಿಸಿದ್ದಾರೆ.

ಮಾಧವ ಮಾಟ್ಲೆ ಎಂಬ ಪಿಜಿ- ಕಾಸೀವ ಅತಿಥಿ ಮನೆಯೊಂದರ ಒಡೆಯ, ತಮ್ಮಲ್ಲಿದ್ದ ಇಬ್ಬರು ವಿದ್ಯಾರ್ಥಿಗಳಿಂದಲೇ ಹತರಾಗಿದ್ದಾರೆ. ನೀರು ಬಳಸುವುದರ ಬಗೆಗೆ ಮಾಟ್ಲೆ ಮಾಡಿದ ತಕರಾರು, ವಿಕೋಪಕ್ಕೆ ಹೋಗಿ ವಿದ್ಯಾರ್ಥಿಗಳಿಬ್ಬರು ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು ಈ ಅನಾಹುತ ಮಾಡಿದ್ದಾರೆ; ಈಗ ಪೋಲೀಸರ ಅತಿಥಿಗಳಾಗಿದ್ದಾರೆ.

ಬಿಕಾಮ್ ಅಂತಿಮ ವರುಷದ 21ರ ವಿದ್ಯಾರ್ಥಿ ರಾಕೇಶ್ ಮತ್ತು ಮೊದಲ ವರುಷದ ಬಿಬಿಎ ವಿದ್ಯಾರ್ಥಿ 20ರ ಡಾನ್ ಬ್ರೈಟ್ ಸನ್ ಆರೋಪಿಗಳು.

ಪಿಜಿಯ ಹೊರ ಭಾಗದಲ್ಲಿ ಇದ್ದ ಕೊಳಾಯಿ ಬಳಿ ಈ ಇಬ್ಬರು ವಿದ್ಯಾರ್ಥಿಗಳು ಸಂಜೆ ಆರು ಗಂಟೆಯ ಹೊತ್ತಿಗೆ ಕಾಲು ತೊಳೆದುಕೊಳ್ಳುತ್ತಿದ್ದರು. ಆಗ ಮಾಧವರು ಬಂದು ಆಕ್ಷೇಪಿಸಿದ್ದಾರೆ. ಜಗಳ ಆರಂಭವಾಗಿ ಆರೂವರೆ ಒಳಗೆ ಕತೆ ಮುಗಿದು ಹೋಗಿದೆ.

ನಿಜವಾಗಿ ಮಾಟ್ಲೆ ಬ್ಯಾಟ್ ತೆಗೆದುಕೊಂಡು ಹೊಡೆಯಲು ಹೋಗಿದ್ದು, ವಿದ್ಯಾರ್ಥಿಗಳು ಅದನ್ನು ಕಸಿದುಕೊಂಡು ಬೇಕಾಬಿಟ್ಟಿ ಬಡಿದಿದ್ದಾರೆ ಎಂದು ನೋಡುಗರು ಹೇಳಿಕೆ ನೀಡಿದ್ದಾರೆ. ಬೆಂಗಳೂರಿನ ರಾಮಮೂರ್ತಿ ನಗರ ಪೋಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರನ್ನೂ ಬಂಧಿಸಿರುವ ಪೋಲೀಸರು ತನಿಖೆಯ ಆಳಕ್ಕೆ ಹೊರಟಿದ್ದಾರೆ.


