HomeFresh Newsಸಜೀಪಮೂಡ‌ದಲ್ಲಿ ಪುರುಷಾಮೃಗದ ಅಪರೂಪದ ಶಿಲ್ಪವುಳ್ಳ ಬಂಗರಸನ ಶಾಸನ ಪತ್ತೆ

ಸಜೀಪಮೂಡ‌ದಲ್ಲಿ ಪುರುಷಾಮೃಗದ ಅಪರೂಪದ ಶಿಲ್ಪವುಳ್ಳ ಬಂಗರಸನ ಶಾಸನ ಪತ್ತೆ

ದಕ್ಷಿಣ ಕನ್ನಡ‌ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಅನ್ನಪಾಡಿ ಬಾಲಗಣಪತಿ ದೇವಾಲಯದ ಬಳಿಯ ದಿ. ಮೋನಪ್ಪ ಪೂಜಾರಿಯವರ ತೋಟದಲ್ಲಿರುವ ಶಾಸನವನ್ನು ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಇದರ ಅಧ್ಯಕ್ಷರಾದ ಡಾ| ತುಕಾರಾಮ ಪೂಜಾರಿಯವರು ಹಾಗೂ ಬಂಟ್ವಾಳ ತಾಲೂಕು ಪಂಚಾಯತಿನ ಮಾಜಿ ಅಧ್ಯಕ್ಷರಾದ ಶ್ರೀ ಯಶವಂತ ದೇರಾಜೆ ಅವರು ಈ ಮೊದಲು ಪತ್ತೆ ಮಾಡಿರುತ್ತಾರೆ. ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರ – ಉಡುಪಿ (ಎನ್.ಟಿ‌.ಸಿ- ಎ.ಒ.ಎಂ ನ ಅಂಗ ಸಂಸ್ಥೆ) ಇದರ ಅಧ್ಯಯನ ನಿರ್ದೇಶಕರಾದ ಪ್ರೊ.ಎಸ್.ಎ.ಕೃಷ್ಣಯ್ಯ ಇವರ ಮಾರ್ಗದರ್ಶನದಲ್ಲಿ ಈ ಶಾಸನವನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಓದಿ ಅರ್ಥೈಸಿದ್ದು, 15 ನೇ ಶತಮಾನದ ಈ ಶಾಸನವು ಜೈನ ಮನೆತನದ ಬಂಗರಸರಿಗೆ ಸೇರಿದ್ದು ಎಂದು ತಿಳಿಸಿದ್ದಾರೆ.
ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಈ ಶಾಸನವು 138 ಸೆಂ.ಮೀ ಎತ್ತರ ಹಾಗೂ 76 ಸೆಂ.ಮೀ ಅಗಲವಿದೆ. ಕನ್ನಡ ಲಿಪಿ ಮತ್ತು ಭಾಷೆಯಲ್ಲಿರುವ ಈ ಶಾಸನವು 17 ಸಾಲುಗಳನ್ನು ಹೊಂದಿದೆ. ಶಾಸನದ‌ ಮೇಲ್ಭಾಗದಲ್ಲಿ ಸೂರ್ಯ-ಚಂದ್ರರಿದ್ದು, ಮಧ್ಯ ಭಾಗದಲ್ಲಿ ಪ್ರಭಾವಳಿ ಸಹಿತ ಶಿವಲಿಂಗ ಹಾಗೂ ಇದರ ಬಲ ಭಾಗದಲ್ಲಿ ಶಿವಲಿಂಗವನ್ನು ಪೂಜಿಸುತ್ತಿರುವ ಪುರುಷಾಮೃಗ ಮತ್ತು ಎಡ ಭಾಗದಲ್ಲಿ ನಂದಿಯ ಉಬ್ಬು ಕೆತ್ತನೆ‌ ಇದೆ‌.
ಪ್ರಾಯಶಃ ಇದುವರೆಗೆ ಲಭ್ಯವಾಗಿರುವ ಕರ್ನಾಟಕದ ಶಾಸನಗಳಲ್ಲಿ ಪುರುಷಾಮೃಗದ ಕೆತ್ತನೆ ಇದೇ ಮೊದಲು ಪತ್ತೆಯಾಗಿರುವುದೆಂದು ಸಂಶೋಧನಾರ್ಥಿ ಅಭಿಪ್ರಾಯ ಪಟ್ಟಿರುತ್ತಾರೆ.
ಶಾಸನದಲ್ಲಿ ಜಯಾಭ್ಯುದಯ ಶಾಲಿವಾಹನ ಶಕವರುಷ 1405 ನೆಯ ಶೋಭಕೃತ ಸಂವತ್ಸರದ ಜೇಷ್ಟ ಶುದ್ಧ 1 ಬುಧವಾರ ಎಂದು‌ ಉಲ್ಲೇಖವಿದ್ದು ಇದು ಕ್ರಿ. ಶ 1483 ಮೇ 17 ಬುಧವಾರಕ್ಕೆ ಸರಿ‌‌ ಹೊಂದುತ್ತದೆ. ಬಂಗ ದೊರೆ ಪಾಂಡ್ಯಪ್ಪರಸನ ಅಳಿಯನಾದ ಲಕ್ಷ್ಮಪ್ಪರಸ ಒಡೆಯನು ಯಿಚಿಲದ ಮಠಕ್ಕೆ ಚಂದ್ರಗ್ರಹಣದ ಸಮಯದಲ್ಲಿ ಬರೆಸಿ ಕೊಟ್ಟಂತಹ ದಾನ ಶಾಸನ ಇದಾಗಿದ್ದು, ಈ ಮಠಕ್ಕೆ ಅಕ್ಕಿಯ ನೈವೇದ್ಯಕ್ಕೆ 33 ಕಾಟಿ ಗದ್ಯಾಣಗಳನ್ನು ಧಾರಾ ಪೂರ್ವಕವಾಗಿ ಕೊಟ್ಟಂತಹ ದಾನವನ್ನು ಈ ಶಾಸನವು ಉಲ್ಲೇಖಿಸುತ್ತದೆ. ಶಾಸನದ ಕೊನೆಯಲ್ಲಿ ಶಾಪಾಶಯ ವಾಕ್ಯವನ್ನು ಕಾಣಬಹುದು.
ಕ್ಷೇತ್ರಕಾರ್ಯ ಶೋಧನೆಯ ಸಂದರ್ಭದಲ್ಲಿ ಕಿಶನ್ ಕುಮಾರ್ ಮೂಡುಬೆಳ್ಳೆ ಹಾಗೂ ಸ್ಥಳೀಯರಾದ ಎಸ್‌. ಲಿಂಗಪ್ಪ ದೋಟ, ಕುಶೇಷ್ ಮತ್ತು ರಮೇಶ್ ಅನ್ನಪಾಡಿ ಅವರು ಸಹಕಾರ ನೀಡಿರುವರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments