ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯ: ವಿದ್ಯುತ್ ಕಂಬ ಮುರಿದು ಮೀನುಗಾರಿಕಾ ಕಾರ್ಮಿಕ ಸಾವು
ಕಾಪು:ಮಂಗಳೂರು ನಗರದ ಮೀನುಗಾರಿಕಾ ಧಕ್ಕೆಯಲ್ಲಿ ವಿದ್ಯುತ್ ಕಂಬವೊಂದು ಮುರಿದು ಮೈ ಮೇಲೆ ಬಿದ್ದ ಪರಿಣಾಮ ಮೀನುಗಾರಿಕಾ ಕಾರ್ಮಿಕ, ತಮಿಳುನಾಡು ಮೂಲದ ಮುರುಗನ್ (35) ಭಾನುವಾರದಂದು
ಮೃತಪಟ್ಟಿದ್ದಾರೆ.
ಭಾನುವಾರ ಮುಂಜಾನೆ ಧಕ್ಕೆಯಲ್ಲಿ ಮೀನಿನ ಬಾಕ್ಸ್ ಹೊತ್ತುಕೊಂಡು ಹೋಗುತ್ತಿದ್ದ ಸಂದರ್ಭ ವಿದ್ಯುತ್ ಕಂಬ ಮುರಿದು ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದ ಮುರುಗ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಪತ್ನಿ ಮೂವರು ಮಕ್ಕಳನ್ನು ಅಗಲಿದ ಮುರುಗನ್ ಕುಟುಂಬದ ಆಧಾರ ಸ್ತಂಬವಾಗಿದ್ದರು. ಮುರುಗನ್ ಕುಟುಂಬದ ಮುಂದಿನ ಜೀವನಕ್ಕೆ ಸರಕಾರ ಕೂಡಲೇ ಪರಿಹಾರ ನೀಡಬೇಕು. ಕಾರ್ಮಿಕರು ಹೊಟ್ಟೆ ಪಾಡಿಗಾಗಿ ಜಿಲ್ಲೆ ಬಿಟ್ಟು ಊರು ಬಿಟ್ಟು ಜೀವನೋಪಾಯಕ್ಕಾಗಿ ಬೇರೆ ಬೇರೆ ಕಡೆ ಹೋಗಿ ಕೆಲಸ ಮಾಡುತ್ತಾರೆ ಅಂತಹ ಸಂದರ್ಭದಲ್ಲಿ ಯಾರದ್ದೋ ತಪ್ಪಿಗೆ ವ್ಯಕ್ತಿ ಮರಣ ಹೊಂದಿದರೆ ಆಧಾರಸ್ತಂಭವೇ ಕಳಚಿ ಹೋದರೆ ಆ ಮನೆಯ ಪರಿಸ್ಥಿತಿ ಏನು ? ಕೂಡಲೇ ಸರಕಾರ ಪರಿಹಾರ ಘೋಷಿಸಬೇಕು ಇಂತಹ ಪರಿಸ್ಥಿತಿ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಭೋವಿ ಮುಖಂಡ ಪವನ್ ಕುಮಾರ್ ಶಿರ್ವ ಆಗ್ರಹಿಸಿದ್ದಾರೆ.


















