ಮಂಗಳೂರು: ಇವತ್ತಿನ ಜೆನ್ ಜೀ ನಾಮಾಂಕಿತ ತಲೆಮಾರಿನ ಮಕ್ಕಳಿಗೆ ಪುಸ್ತಕ ಓದಿನ ಬಗ್ಗೆ ಅಭಿರುಚಿ ಮೂಡಿಸುವ ಕೆಲಸಗಳು ನಡೆಯಬೇಕು. ಹೊಸ ತಲೆಮಾರಿನ ಮಕ್ಕಳು ಮೊಬೈಲ್ ಗ್ಯಾಜೆಟ್ ಗೆ ಅತೀಯಾಗಿ ಅವಲಂಬಿತರಾಗುವುದನ್ನು ಬಿಡಿಸಿ ಅವರ ಜ್ಞಾನ ಭಂಡಾರ ವೃದ್ಧಿಸುವ ಓದಿನತ್ತ ಗಮನ ಕೇಂದ್ರೀಕರಿಸುವ ಕೆಲಸ ನಡೆಯಬೇಕಿದೆ ಎಂದು ಹಿರಿಯ ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲ ಬಿ.ಜನಾರ್ಧನ ಭಟ್ ಅವರು ಹೇಳಿದರು.

ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಹಮ್ಮಿಕೊಂಡಿರುವ ‘ಬಲೆ ತುಳು ಓದುಗ’ ಅಭಿಯಾನದ 13ನೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತುಳು ಅತ್ಯಂತ ಪ್ರಾಚೀನ ಹಾಗೂ ಶ್ರೀಮಂತ ಭಾಷೆ, ಕ್ರಿಸ್ತಪೂರ್ವ ಕಾಲದ ಅಶೋಕನ ಶಾಸನಗಳಲ್ಲಿ ತುಳುವಿನ ಬಗ್ಗೆ ಉಲ್ಲೇಖವಿದೆ, ಓದಿನ ಮೂಲಕ ವಿದ್ಯಾರ್ಥಿಗಳು ತುಳುವಿನ ಬಗ್ಗೆ ಹೆಚ್ಚಿನ ಅನುಭವ, ಜ್ಞಾನ ಪಡೆಯುವಂತಾಗಲಿ ಎಂದು ಜನಾರ್ಧನ ಭಟ್ ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಎಸ್.ಸಿ.ಎಸ್. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಹಾರ್ದಿಕ್ ಚೌಹಾಣ್ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ತುಳು ಅಕಾಡೆಮಿಗೆ ಭೇಟಿಯ ಈ ಕಾರ್ಯಕ್ರಮ ವಿಶಿಷ್ಟ ಅನುಭವ ಹಾಗೂ ಹೆಚ್ಚಿನ ಜ್ಞಾನ ನೀಡಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಮಾತನಾಡಿ, ತುಳು ಸಾಹಿತ್ಯ ಲೋಕದ ಪರಿಚಯಿಸುವ ಸಲುವಾಗಿ ಅಕಾಡೆಮಿಯಲ್ಲಿ ‘ಬಲೆ ತುಳು ಓದುಗ’ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಎಸ್.ಸಿ.ಎಸ್. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸುಚಿತ್ರಾ ಪಿ.ಶೆಟ್ಟಿ, ತುಳು ಸಂಘದ ಸಂಚಾಲಕಿ ಶ್ರೀಮತಿ ದೀಕ್ಷಿತಾ ಹಾಗೂ ವಿದ್ಯಾರ್ಥಿ ಸಂಚಾಲಕ ಸುಹಾನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಪಾಂಗಾಳ ಬಾಬು ಕೊರಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
