ಕೆ. ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ವೈದ್ಯರು ಮೇದೋಜ್ಜೀರಕ ಗ್ರಂಥಿಯ (ಪ್ಯಾಂಕ್ರಿಯಾಟಿಕ್) ಕ್ಯಾನ್ಸರ್ನಿಂದ ಬಳಲುತ್ತಿದ್ದ ರೋಗಿಗೆ ಯಶಸ್ವಿಯಾಗಿ ರೋಬೋಟಿಕ್ ವಿಪ್ಪಲ್ ಶಸ್ತ್ರಚಿಕಿತ್ಸೆ ನಡೆಸಿ ಮಹತ್ವದ ವೈದ್ಯಕೀಯ ಸಾಧನೆಗೈದಿದ್ದಾರೆ. 57 ವರ್ಷದ ರೋಗಿಯೊಬ್ಬರು ಹೊಟ್ಟೆನೋವು, ಕಾಮಾಲೆ ರೋಗ ಹಾಗೂ ತೂಕ ಇಳಿಕೆಯ ಸಮಸ್ಯೆಗಳೊಂದಿಗೆ ಕೆ. ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯಕೀಯ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಮುಖ್ಯಸ್ಥರಾದ ಡಾ। ಚಂದ್ರಶೇಖರ್ ಸೊರಕೆ ಅವರು ರೋಗಿಯನ್ನು ಪರೀಕ್ಷಿಸಿ ರೋಗದ ಪರಿಶೀಲನೆ ಮಾಡಿರುತ್ತಾರೆ. ನಂತರ ಸಿಟಿ ಸ್ಕ್ಯಾನ್, ಎಂಡೋಸ್ಕೋಪಿಕ್ ಅಲ್ಟ್ರಾಸೌಂಡ್ ಹಾಗೂ ಬಯಾಪ್ಸಿ ಪರೀಕ್ಷೆಗಳನ್ನು ನಡೆಸಿದಾಗ, ಆತನಿಗೆ ತೀವ್ರ ಹಂತದ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಇರುವುದು ದೃಢಪಟ್ಟಿತು.
ತೀವ್ರ ಹಂತದ ಮೇದೋಜ್ಜೀರಕ ಗ್ರಂಥಿಯ (ಪ್ಯಾಂಕ್ರಿಯಾಟಿಕ್) ಕ್ಯಾನ್ಸರ್ ಚಿಕಿತ್ಸೆಗೆ ವಿವಿಧ ವಿಭಾಗಗಳ ತಜ್ಞ ವೈದ್ಯರ ಚಿಕಿತ್ಸಾ ತಂಡದ ಅಗತ್ಯವಿರುತ್ತದೆ. ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಗ್ಯಾಸ್ಟ್ರೋಎಂಟರಾಲಜಿ, ಆಂಕಾಲಜಿ, ರೇಡಿಯಾಲಜಿ, ಪೆಥೋಲಾಜಿ ಹಾಗೂ ಇತರ ಸಂಬಂಧಿತ ವಿಭಾಗಗಳ ತಜ್ಞ ವೈದ್ಯರು ಈ ರೋಗಿಯನ್ನು ಸಮಗ್ರವಾಗಿ ಪರಿಶೀಲನೆ ನಡೆಸಿದ್ದು, ರೋಗಿಗೆ ತೀವ್ರ ಹಂತದ ಕ್ಯಾನ್ಸರ್ ಇದ್ದುದರಿಂದ, ಶಸ್ತ್ರಚಿಕಿತ್ಸೆಗೆ ಮುನ್ನ ಗಡ್ಡೆಯ ಗಾತ್ರವನ್ನು ಕಡಿಮೆ ಮಾಡಲು ಕೀಮೋಥೆರಪಿ ನೀಡುವುದೆಂದು ನಿರ್ಧರಿಸಲಾಯಿತು. ಅದರಂತೆ ವೈದ್ಯಕೀಯ ಆಂಕಾಲಾಜಿಸ್ಟ್ ಡಾ। ವಿಜಿತ್ ಶೆಟ್ಟಿ ಇವರ ತಜ್ಞ ಮಾರ್ಗದರ್ಶನದಲ್ಲಿ ರೋಗಿಗೆ ನಾಲ್ಕು ಸುತ್ತಿನ ಕೀಮೋಥೆರಪಿ ನೀಡಲಾಗಿದ್ದು, ನಂತರ ಪೆಟ್ (PET) ಸ್ಕ್ಯಾನ್ ಮಾಡಿದಾಗ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಗಾತ್ರವು ಗಮನಾರ್ಹವಾಗಿ ಚಿಕ್ಕದಾಗಿದ್ದು, ಈ ಚಿಕಿತ್ಸೆಗೆ ಉತ್ತಮ ಪ್ರತಿಕ್ರಿಯೆ ಕಂಡುಕೊಳ್ಳುವಂತಾಯಿತು.
ಈ ಸಂದರ್ಭದಲ್ಲಿ ರೋಗಿಗೆ ವಿಪ್ಪಲ್ ಶಸ್ತ್ರಚಿಕಿತ್ಸೆ (Whipple Surgery) ಮಾಡಿಸಿಕೊಳ್ಳುವಂತೆ ಸಲಹೆ ನೀಡಲಾಗಿದ್ದು, ಇದು ಒಂದು ದೊಡ್ಡ ಶಸ್ತ್ರಚಿಕಿತ್ಸೆಯಾಗಿದ್ದು, ಮೇದೋಜ್ಜೀರಕ ಗ್ರಂಥಿಯ (ಪ್ಯಾಂಕ್ರಿಯಾಸ್) ಒಂದು ಭಾಗ, ಸಣ್ಣ ಕರುಳು, ಪಿತ್ತನಾಳ (ಬೈಲ್ ಡಕ್ಟ್) ಹಾಗೂ ಉದರದ (ಸ್ಟಮಕ್) ಒಂದು ಭಾಗವನ್ನು ತೆಗೆದುಹಾಕಬೇಕಾಗುವ ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯಾಗಿತ್ತು. ಸಾಮಾನ್ಯವಾಗಿ ವಿಪ್ಪಲ್ ಶಸ್ತ್ರಚಿಕಿತ್ಸೆಯನ್ನು ತೆರೆದ (ಓಪನ್) ಶಸ್ತ್ರಚಿಕಿತ್ಸೆಯ ಮೂಲಕ ನಡೆಸಲಾಗುತ್ತದೆ. ಇದಕ್ಕಾಗಿ ಹೊಟ್ಟೆಯ ಮೇಲೆ ದೊಡ್ಡ ಛೇದನ (ಕಟ್) ಮಾಡಬೇಕಾಗುತ್ತದೆ. ಇದರಿಂದ ರೋಗಿಯ ಚೇತರಿಕೆಯಲ್ಲಿ ನಿಧಾನವಾಗುವ ಸಾಧ್ಯತೆ ಇದ್ದು, ದಿನನಿತ್ಯದ ಚಟುವಟಿಕೆಗಳಿಗೆ ಮರಳಲು ಹೆಚ್ಚು ಸಮಯ ಬೇಕಾಗುತ್ತದೆ. ಆದರೆ ಕೆ. ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಲಭ್ಯವಿರುವ ಅತ್ಯಾಧುನಿಕ ರೋಬೋಟಿಕ್ ಶಸ್ತ್ರಚಿಕಿತ್ಸೆಯ ಸೌಲಭ್ಯದಿಂದ ರೋಗಿಗೆ ರೋಬೋಟಿಕ್ ಸಹಾಯದೊಂದಿಗೆ ವಿಪ್ಪಲ್ ಶಸ್ತ್ರಚಿಕಿತ್ಸೆಯ ಆಯ್ಕೆ ಮಾಡಲಾಯಿತು. ಈ ಶಸ್ತ್ರಚಿಕಿತ್ಸೆ ವಿಧಾನದಲ್ಲಿ ಸಣ್ಣ ಗಾಯಗಳ ಮೂಲಕ ಶಸ್ತ್ರಚಿಕಿತ್ಸೆ ನಡೆಸಬಹುದಾಗಿದ್ದು, ಹೆಚ್ಚು ಸ್ಪಷ್ಟತೆ, ಕಡಿಮೆ ನೋವು ಹಾಗೂ ಶೀಘ್ರ ಚೇತರಿಕೆ ಇದರ ಪ್ರಮುಖ ಪ್ರಯೋಜನಗಳಾಗಿದ್ದವು.
ರೋಗಿ ಮತ್ತು ಅವರ ಕುಟುಂಬ ಸದಸ್ಯರಿಗೆ ಶಸ್ತ್ರಚಿಕಿತ್ಸೆಯ ಕುರಿತು ಸಮಗ್ರ ಮಾಹಿತಿ ಹಾಗೂ ಸಲಹೆ ನೀಡಿದ ನಂತರ, ಅವರು ರೋಬೋಟಿಕ್ ಶಸ್ತ್ರಚಿಕಿತ್ಸೆಗೆ ಒಪ್ಪಿಗೆ ನೀಡಿದರು. ಈ ಶಸ್ತ್ರಚಿಕಿತ್ಸೆಯನ್ನು ಅತ್ಯಾಧುನಿಕ ಡಾ–ವಿಂಚಿ (da Vinci) ಶಸ್ತ್ರಚಿಕಿತ್ಸಾ ರೋಬೋಟಿಕ್ ವ್ಯವಸ್ಥೆಯ ಸಹಾಯದಿಂದ ಯಶಸ್ವಿಯಾಗಿ ನಡೆಸಲಾಯಿತು. ರೋಬೋಟಿಕ್ ಶಸ್ತ್ರಚಿಕಿತ್ಸಾ ತಂಡದಲ್ಲಿ ಶಸ್ತ್ರಚಿಕಿತ್ಸಾ ಗ್ಯಾಸ್ಟ್ರೋಎಂಟರಾಲಜಿ ಹಾಗೂ GI-HPB ಆಂಕೋ ಸರ್ಜರಿ ವಿಭಾಗದ ಡಾ| ಸಂತೋಷ್ ಕುಮಾರ್ ಕೆ. .ವೈ . ಮತ್ತು ಡಾ| ಪ್ರವೀಣ್ ಕುಮಾರ್ ಆರ್. ಭಟ್ ಸೇರಿದಂತೆ ಶಸ್ತ್ರಚಿಕಿತ್ಸಾ ತಂಡದಲ್ಲಿ ನುರಿತ ನರ್ಸ್ಗಳು ಹಾಗೂ ಸಹಾಯಕ ಸಿಬ್ಬಂದಿಗಳು ಭಾಗವಹಿಸಿದ್ದರು. ಸುಮಾರು 9 ಗಂಟೆಗಳ ಕಾಲ ನಡೆದ ಈ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು ಮತ್ತು ಈ ಶಸ್ತ್ರಚಿಕಿತ್ಸೆಯು ಅತ್ಯಂತ ಕಡಿಮೆ ರಕ್ತಸ್ರಾವವನ್ನು ಒಳಗೊಂಡಿತ್ತು. ಇಂತಹ ದೊಡ್ಡ ಶಸ್ತ್ರಚಿಕಿತ್ಸೆಗಳಲ್ಲಿ ಅರಿವಳಿಕೆ (ಅನಸ್ತೇಶಿಯಾ) ನೀಡುವುದು ಅತ್ಯಂತ ಸವಾಲಿನ ಕೆಲಸವಾಗಿದ್ದು, ಅರಿವಳಿಕೆ ಮತ್ತು ತೀವ್ರ ನಿಗಾ ವಿಭಾಗದ ಮುಖ್ಯಸ್ಥರಾದ ಡಾ। ಅವಿನಾಶ್ ಭಂಡಾರಿ, ಡಾ। ಗೋವಿಂದರಾಜ್ ಭಟ್, ಡಾ। ಜಾಯ್ಲೀನ್ ಡಿ‘ಸೋಜಾ, ಡಾ। ರಂಜನ್ ನಾಯಕ್ ಇವರುಗಳ ತಂಡವು ಅತ್ಯಂತ ಪರಿಣತಿಯಿಂದ ಇದನ್ನು ನಿರ್ವಹಿಸಿದರು. ಉತ್ತಮ ಶುಶ್ರೂಷಾ ಸೇವೆಯ ಪರಿಣಾಮವಾಗಿ ರೋಗಿಯು ಶೀಘ್ರವಾಗಿ ಚೇತರಿಸಿಕೊಂಡು ಒಂದು ವಾರದೊಳಗೆ ಆಸ್ಪತ್ರೆಯಿಂದ ಬಿಡುಗಡೆಯಾದರು. ಶಸ್ತ್ರಚಿಕಿತ್ಸೆಯಾಗಿ ಒಂದು ತಿಂಗಳು ಕಳೆದಿದ್ದು, ರೋಗಿಯ ಆರೋಗ್ಯ ಸ್ಥಿತಿ ಉತ್ತಮವಾಗಿದ್ದು, ಅವರು ಶಸ್ತ್ರಚಿಕಿತ್ಸೆಯ ನಂತರದ ಕೀಮೋಥೆರಪಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಶಸ್ತ್ರಚಿಕಿತ್ಸಾ ಗ್ಯಾಸ್ಟ್ರೋಎಂಟರಾಲಜಿ ತಜ್ಞರಾದ ಡಾ। ಸಂತೋಷ್ ಕುಮಾರ್ ಅವರು ಈ ಕುರಿತಾಗಿ ಮಾತನಾಡಿ, ರೋಬೋಟಿಕ್ ಸಹಾಯಕ ಶಸ್ತ್ರಚಿಕಿತ್ಸೆಯಲ್ಲಿ ಶಸ್ತ್ರಚಿಕಿತ್ಸಕರಿಗೆ ಅತ್ಯಂತ ಸ್ಪಷ್ಟ ಮತ್ತು ವಿಸ್ತೃತ ದೃಶ್ಯಾವಳಿ ದೊರೆಯುತ್ತದೆ. ಜೊತೆಗೆ, ಅತ್ಯಾಧುನಿಕ ರೋಬೋಟಿಕ್ ಉಪಕರಣಗಳ ನೆರವಿನಿಂದ ಅತ್ಯಂತ ನಿಖರವಾಗಿ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಾಗುತ್ತದೆ. ಇದರಿಂದ ರಕ್ತಸ್ರಾವ ಕಡಿಮೆಯಾಗುವುದರೊಂದಿಗೆ ರೋಗಿಯ ಚೇತರಿಕೆಯೂ ವೇಗವಾಗಿರುತ್ತದೆ ಎಂದು ತಿಳಿಸಿದರು. ರೋಬೋಟ್ ಸ್ವತಃ ಶಸ್ತ್ರಚಿಕಿತ್ಸೆ ನಡೆಸುತ್ತದೆ ಎಂಬುದು ಜನಸಾಮಾನ್ಯರಲ್ಲಿ ಇರುವ ತಪ್ಪು ಕಲ್ಪನೆಯಾಗಿದೆ. ವಾಸ್ತವವಾಗಿ, ಸಂಪೂರ್ಣ ಶಸ್ತ್ರಚಿಕಿತ್ಸೆಯನ್ನು ಶಸ್ತ್ರಚಿಕಿತ್ಸಕರೇ ರೋಬೋಟಿಕ್ ಉಪಕರಣಗಳನ್ನು ನಿಯಂತ್ರಿಸುವ ಮೂಲಕ ನಡೆಸುತ್ತಾರೆ; ರೋಬೋಟ್ ಕೇವಲ ವೈದ್ಯರ ಸೂಚನೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಅತ್ಯಾಧುನಿಕ ತಾಂತ್ರಿಕ ಸಾಧನವಾಗಿದೆ ಎಂದು ಅವರು ವಿವರಿಸಿದರು.
ಕೆ. ಎಸ್. ಹೆಗ್ಡೆ ವೈದ್ಯಕೀಯ ಕಾಲೇಜಿನ ಡೀನ್ ಡಾ। ಬಿ. ಸಂದೀಪ್ ರೈ ಹಾಗೂ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ। ಸುಮಲತಾ ಆರ್. ಶೆಟ್ಟಿ ಅವರು ಶಸ್ತ್ರಚಿಕಿತ್ಸಾ ತಂಡವನ್ನು ಅಭಿನಂದಿಸಿದರು. ಆಸ್ಪತ್ರೆಯ ವಿವಿಧ ಶಸ್ತ್ರಚಿಕಿತ್ಸಾ ವಿಭಾಗಗಳು ಇದುವರೆಗೆ 200ಕ್ಕೂ ಹೆಚ್ಚು ಅತ್ಯಾಧುನಿಕ ರೋಬೋಟಿಕ್ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿದ್ದು, ಇದರಿಂದ ಅನೇಕ ಅಗತ್ಯವಿರುವ ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ದೊರೆತಿದೆ ಎಂದು ಅವರು ತಿಳಿಸಿದರು. ಈ ರೋಗಿಯು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದು, ನಿಟ್ಟೆ ಆಡಳಿತ ಮಂಡಳಿ ಹಾಗೂ ಸಂಸ್ಥೆಯ ಪ್ರೋತ್ಸಾಹ ಮತ್ತು ಸಹಕಾರದಿಂದ ಈ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲು ಸಾಧ್ಯವಾಯಿತು ಎಂದು ಅವರು ಹೇಳಿದರು.

